ಶೈಕ್ಷಣಿಕ ಸಹಾಯಧನ ವಿತರಿಸಲು ವಿಳಂಬ: ಕಾರ್ಮಿಕ ಮಂಡಳಿಗೆ ಚಾಟಿ

KannadaprabhaNewsNetwork |  
Published : May 01, 2024, 02:01 AM IST
ಹೈಕೋರ್ಟ್‌ | Kannada Prabha

ಸಾರಾಂಶ

ವಿದ್ಯಾಭ್ಯಾಸ ಮುಂದುವರಿಕೆಗೆ ಆರ್ಥಿಕ ನೆರವು ಕೋರಿ ಇಬ್ಬರು ಕಟ್ಟಡ ಕಾರ್ಮಿಕರ ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ಹತ್ತು ತಿಂಗಳಾದರೂ ಪರಿಗಣಿಸದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಧೋರಣೆಗೆ ಕಿಡಿಕಾರಿರುವ ಹೈಕೋರ್ಟ್, ಆ ಇಬ್ಬರು ವಿದ್ಯಾರ್ಥಿಗಳಿಗೆ ಕೂಡಲೇ ಆರ್ಥಿಕ ನೆರವು ನೀಡಲು ತಾಕೀತು ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದ್ಯಾಭ್ಯಾಸ ಮುಂದುವರಿಕೆಗೆ ಆರ್ಥಿಕ ನೆರವು ಕೋರಿ ಇಬ್ಬರು ಕಟ್ಟಡ ಕಾರ್ಮಿಕರ ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ಹತ್ತು ತಿಂಗಳಾದರೂ ಪರಿಗಣಿಸದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಧೋರಣೆಗೆ ಕಿಡಿಕಾರಿರುವ ಹೈಕೋರ್ಟ್, ಆ ಇಬ್ಬರು ವಿದ್ಯಾರ್ಥಿಗಳಿಗೆ ಕೂಡಲೇ ಆರ್ಥಿಕ ನೆರವು ನೀಡಲು ತಾಕೀತು ಮಾಡಿದೆ.

ಶೈಕ್ಷಣಿಕ ಧನಸಹಾಯ ನೀಡಲು ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಶನ್ ಹಾಗೂ ಬೆಂಗಳೂರಿನ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.

ಅರ್ಜಿದಾರ ವಿದ್ಯಾರ್ಥಿನಿಯರು ಕಟ್ಟಡ ಕಾರ್ಮಿಕರ ಮಕ್ಕಳಾಗಿದ್ದಾರೆ. ಅವರು ಕ್ರಮವಾಗಿ ಎಲ್‌ಎಲ್ ಬಿ ಹಾಗೂ ಎಂಬಿಎ ಓದುತ್ತಿದ್ದಾರೆ. ಅವರಿಗೆ ಕ್ರಮವಾಗಿ 30 ಸಾವಿರ ಹಾಗೂ 35 ಸಾವಿರ ರು. ಶೈಕ್ಷಣಿಕ ಧನ ಸಹಾಯವನ್ನು ಕಾರ್ಮಿಕರ ಕಲ್ಯಾಣ ಮಂಡಳಿಯು ದಂಡ ಸಹಿತ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ನಾಲ್ಕು ವಾರದೊಳಗೆ ಪಾವತಿಸಬೇಕು. ನಿಗದಿತ ಅವಧಿಯಲ್ಲಿ ಆದೇಶ ಪಾಲಿಸುವಲ್ಲಿ ವಿಫಲವಾದರೆ ನಂತರದ ಪ್ರತಿ ದಿನಕ್ಕೆ 500 ರು.ನಂತೆ ಪ್ರತಿ ವಿದ್ಯಾರ್ಥಿನಿಯರಿಗೆ ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ ಎಂದು ಸೂಚಿಸಿರುವ ನ್ಯಾಯಪೀಠ ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿದೆ.

ಅರ್ಜಿದಾರ ವಿದ್ಯಾರ್ಥಿನಿಯರು ಮಂಡಳಿ ನೀಡುತ್ತಿದ್ದ ಶೈಕ್ಷಣಿಕ ಧನ ಸಹಾಯಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು 10 ತಿಂಗಳಾದರೂ ಇತ್ಯರ್ಥಪಡಿಸದೇ ಇರುವುದು ಸರಿಯಾದ ಕ್ರಮವಲ್ಲ, ಖಂಡನೀಯವಾಗಿದೆ. ಸರ್ಕಾರಿ ನೌಕರರಿಗೆ ಸಿಗುವ ಯಾವೊಂದು ಭತ್ಯೆಗಳು ಇಲ್ಲದೆ ಬಿಸಿಲಿನಲ್ಲಿ ಬೆವರು ಸುರಿಸುವ ಬಡ ಕಾರ್ಮಿಕರ ಬಗ್ಗೆ ಅಸಡ್ಡೆ ತೋರಿಸುವುದು ಸರಿಯಲ್ಲ ಎಂದು ಪೀಠ ಹೇಳಿದೆ.

ಕಾರ್ಮಿಕರ ಶ್ರಮದಿಂದ ಸಂಗ್ರಹವಾಗಿರುವ 8,200 ಕೋಟಿ ಕಲ್ಯಾಣ ನಿಧಿ ಇದೆ. ಇಂತಹ ಸಂದರ್ಭದಲ್ಲಿಯೂ ಕಾರ್ಮಿಕರ ಮಕ್ಕಳಿಗೆ ನ್ಯಾಯಬದ್ಧವಾಗಿ ದೊರಕಬೇಕಾದ ಶೈಕ್ಷಣಿಕ ಧನಸಹಾಯ ನಿರಾಕರಿಸುವುದು ಒಪ್ಪುವಂತದಲ್ಲ ಎಂದು ನ್ಯಾಯಪೀಠ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಆದಿತ್ಯ ಚಟರ್ಜಿ, ಈ ಹಿಂದಿನ ನ್ಯಾಯಾಲಯದ ಆದೇಶದಂತೆ ಅರ್ಜಿದಾರ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಧನ ಸಹಾಯ ಮಾಡಲು ಕಾರ್ಮಿಕರ ಕಲ್ಯಾಣ ಮಂಡಳಿ ಯಾವುದೇ ಕ್ರಮ ವಹಿಸಿಲ್ಲ. ವಿದ್ಯಾರ್ಥಿಗಳ ಖಾತೆಗೆ ಹಣ ಪಾವತಿಸಲಿಲ್ಲ ಎಂದು ವಿದ್ಯಾರ್ಥಿನಿಯರ ಪೋಷಕರ ಬ್ಯಾಂಕ್ ಖಾತೆ ವಿವರ ಸಹಿತ ದಾಖಲೆಗಳನ್ನು ನ್ಯಾಯಪೀಠದ ಮುಂದಿಟ್ಟರು.

ಕಾರ್ಮಿಕರ ಕಲ್ಯಾಣ ಮಂಡಳಿ ಪರ ವಕೀಲರು, ಮಂಡಳಿಯ 2023ರ ಅ.30ರಂದು ಸರ್ಕಾರ ಹೊರಡಿಸಿದ ಅಧಿಸೂಚನೆಯಂತೆ ಕೇವಲ 10 ಸಾವಿರ ರು. ಹಾಗೂ 11 ಸಾವಿರ ರು. ಆರ್ಥಿಕ ನೆರವು ನೀಡಲು ಸಾಧ್ಯ ಎಂದು ಪೀಠಕ್ಕೆ ತಿಳಿಸಿದರು.

ಈ ವಾದವನ್ನು ಒಪ್ಪದ ನ್ಯಾಯಪೀಠ, ಸರ್ಕಾರದ 2021ರ ಆ.13ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಹೇಳಿರುವಂತೆ ಕ್ರಮವಾಗಿ 30 ಮತ್ತು 35 ಸಾವಿರ ರು. ಪಾವತಿಸಬೇಕು ಎಂದು ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೂಚಿಸಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ವಿಚ್ಛೇದಿತ ಪತ್ನಿ, ಮಗಳ ಮೇಲೆಯೇ ಆ್ಯಸಿಡ್‌ ದಾಳಿ
ಡ್ರಗ್ಸ್‌ ನೀಡಿ 50 ಮಹಿಳೆಯರ ರೇಪ್‌ ಮಾಡಿದ್ದ ಜ್ಯೋತಿಷಿ ಸೆರೆ!