ಬೆಂಗಳೂರು : ಮದುವೆ ಆಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆತಂದು ಬಳಿಕ ಪಂಚತಾರ ಹೋಟೆಲ್ನಲ್ಲಿ ಅತ್ಯಾ*ರ ಎಸಗಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಉತ್ತರಪ್ರದೇಶ ರಾಜ್ಯದ ಸಮಾಜವಾದಿ ಪಕ್ಷದ ಮಾಜಿ ಶಾಸಕರೊಬ್ಬರ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮಾಜವಾದಿ ಪಕ್ಷದ ಮಾಜಿ ಶಾಸಕ ಭಗವಾನ್ ಶರ್ಮಾ ಅಲಿಯಾಸ್ ಗುಡ್ಡು ಪಂಡಿತ್ ಮೇಲೆ ಅತ್ಯಾ*ರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಶಾಸಕರ ಸ್ನೇಹಿತೆ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ನೋಟಿಸ್ ನೀಡಲು ಕೆಐಎ ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರಿಗೆ ಆ.14 ರಂದು ತಮ್ಮ ಸ್ನೇಹಿತೆಯನ್ನು ಆಕೆಯ ಮಗನ ಜತೆ ರಿಜಿಸ್ಟ್ರರ್ ಮದುವೆ ಆಗುವುದಾಗಿ ನಂಬಿಸಿ ಭಗವಾನ್ ಕರೆತಂದಿದ್ದರು. ಎರಡ್ಮೂರು ದಿನಗಳು ನಗರದಲ್ಲಿ ಅವರನ್ನು ಸುತ್ತಾಡಿಸಿದ ಅವರು, ಬಳಿಕ ಆ.16 ರಂದು ಚಿತ್ರದುರ್ಗಕ್ಕೆ ಕರೆದೊಯ್ದಿದ್ದರು. ಅಲ್ಲಿಂದ ನಗರಕ್ಕೆ ಮರಳಿದ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹೋಟೆಲ್ಗೆ ಆಕೆಯನ್ನು ಕರೆದೊಯ್ದು ಅತ್ಯಾ*ರ ಎಸಗಿದ್ದಾರೆ. ಬಳಿಕ ಈ ಸಂಗತಿ ಬಾಯ್ಬಿಟ್ಟರೆ ಕೊಲ್ಲುವುದಾಗಿ ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿ ಆರೋಪಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.