ಬೆಂಗಳೂರು : ಕೊಳಚೆ ನೀರು ಸೇರಿ ಕೆ.ಆರ್‌.ಪುರದ ಬಸವನಪುರ ಕೆರೆಯಲ್ಲಿ ಮೀನುಗಳ ಮರಣಮೃದಂಗ

KannadaprabhaNewsNetwork |  
Published : Nov 04, 2024, 12:45 AM ISTUpdated : Nov 04, 2024, 04:46 AM IST
Basavanapura | Kannada Prabha

ಸಾರಾಂಶ

ಕೆ.ಆರ್‌.ಪುರದ ಬಸವನಪುರಕೆರೆಗೆ ಕೊಳಚೆ ನೀರು ಸೇರಿ ಮೀನುಗಳು ಸಾವನ್ನಪ್ಪಿವೆ. ಬಿಬಿಎಂಪಿ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

 ಬೆಂಗಳೂರು :  ನಗರದ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಬಸವನಪುರ ಕೆರೆಯಲ್ಲಿ ಕಳೆದೊಂದು ವಾರದಿಂದ ಪ್ರತಿದಿನ ನೂರಾರು ಮೀನುಗಳು ಸತ್ತು ತೇಲುತ್ತಿವೆ. ಕೆರೆಗೆ ಕೊಳಚೆ ನೀರು ಹರಿದುಬರುತ್ತಿರುವುದೇ ಇದಕ್ಕೆ ಕಾರಣವಾಗಿದ್ದು, ಬಿಬಿಎಂಪಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಕೆರೆಗೆ ಕೊಳಚೆ ನೀರು ಸೇರುತ್ತಿರುವುದರಿಂದ ನೀರಿನಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗಿ ಮೀನುಗಳು ಸಾಯುತ್ತಿವೆ. ಬೆಳಗ್ಗೆ ವಾಯುವಿಹಾರಕ್ಕೆ ಹೋದ ಸಂದರ್ಭದಲ್ಲಿ ದೊಡ್ಡ ಗಾತ್ರದ ಮೀನುಗಳು ರಾಶಿ ರಾಶಿಯಾಗಿ ಸತ್ತು ತೇಲುತ್ತಿರುವುದು ಕಂಡುಬರುತ್ತಿದೆ. ನೀರು ಮತ್ತಷ್ಟು ಕಲುಷಿತ ಆಗಬಾರದೆಂದು ಕೆಲ ದಿನಗಳಿಂದ ನಾವೇ ಅವನ್ನು ಹೊರತೆಗೆದು ಬಿಸಾಡುತ್ತಿದ್ದೇವೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಪಾದಿಸಿದರು.

ಈ ಬಗ್ಗೆ ಮಾತನಾಡಿದ ಕೆರೆ ಕಾರ್ಯಕರ್ತ ಬಾಲಾಜಿ ರಘೋತ್ತಮ್ ಬಾಲಿ, ಕೆರೆ ಸಮೀಪ ಯುಜಿಡಿ ಲೈನ್ ಬ್ಲಾಕ್ ಆಗಿದೆ. ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆ ನೀರು ಕಲುಷಿತಗೊಳ್ಳುತ್ತಿದೆ. ಒಂದು ವಾರದಿಂದ ಮೀನುಗಳು ಸತ್ತು ತೇಲುತ್ತಿರುವುದನ್ನು ನೋಡುತ್ತಿದ್ದೇವೆ. ಹದಿನೈದು ವರ್ಷಗಳಿಂದ ಈ ಕೆರೆ ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಮಾದರಿ ಕೆರೆಯಾಗಿ ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಅವೈಜ್ಞಾನಿಕ ಕಾಮಗಾರಿಯಿಂದ ತೆರಿಗೆ ಹಣವೂ ವ್ಯರ್ಥವಾಗಿದೆ. ಆದಷ್ಟು ಬೇಗ ಅಧಿಕಾರಿಗಳು ಕೊಳಚೆ ನೀರು ಕೆರೆಗೆ ಹರಿದುಬರುವುದು ನಿಲ್ಲಿಸಲು ಕ್ರಮ ವಹಿಸಬೇಕು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌