ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ತಾಯಿಯ ಸ್ನೇಹಿತೆ ಮನೆಯಲ್ಲಿ ಚಿನ್ನ ಕದ್ದ ಪದವೀಧರ ಬಂಧನ; ಫ್ಯಾಕ್ಟರಿ ಸುಟ್ಟು ಹೋಗಿದ್ದರಿಂದ ಸಂಕಷ್ಟ, ಕಳ್ಳತನ!

KannadaprabhaNewsNetwork | Published : Jan 31, 2024 2:20 AM

ತಾಯಿಯ ಸ್ನೇಹಿತೆ ಮನೆಯಲ್ಲಿ ಚಿನ್ನ ಕದ್ದ ಪದವೀಧರ ಬಂಧನ; ಫ್ಯಾಕ್ಟರಿ ಸುಟ್ಟು ಹೋಗಿದ್ದರಿಂದ ಸಂಕಷ್ಟ, ಕಳ್ಳತನ!

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಗ್ನಿ ಅವಘಡದಲ್ಲಿ ತನ್ನ ಕಂಪನಿ ಸುಟ್ಟು ಹೋದ ಬಳಿಕ ಎದುರಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ತಾಯಿಯ ಗೆಳೆತಿ ಮನೆಯಲ್ಲಿ ಕಳ್ಳತನ ಮಾಡಿದ ಎಂಜಿನಿಯರಿಂಗ್ ಪದವೀಧರನೊಬ್ಬ ಜೈಲು ಸೇರಿದ್ದಾನೆ.

ಮಾಗಡಿ ರಸ್ತೆಯ ಟೆಲಿಕಾಂ ಲೇಔಟ್‌ ನಿವಾಸಿ ಮದನ್‌ ಬಂಧಿತನಾಗಿದ್ದು, ಆರೋಪಿಯಿಂದ ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ₹30 ಸಾವಿರ ಬೆಲೆಯ 458 ಗ್ರಾಂ ಬೆಳ್ಳಿ ಹಾಗೂ ₹1.35 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕೆ.ಪಿ.ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ರವಿಪ್ರಕಾಶ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರ್ಥಿಕ ನಷ್ಟ ತಂದ ಸಂಕಷ್ಟ:

ತನ್ನ ಕುಟುಂಬದ ಜತೆ ಟೆಲಿಕಾಂ ಲೇಔಟ್‌ ನೆಲೆಸಿದ್ದ ಮದನ್ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರ. ಕುಂಬಳಗೋಡು ಬಳಿ ಆತ ಅಲ್ಯೂಮಿನಿಯಂ ಉತ್ಪನ್ನಗಳ ಕಂಪನಿ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿ ಕಂಪನಿ ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಯಿತು. ಆದರೆ ಈ ದುರಂತಕ್ಕೆ ಆತನಿಗೆ ವಿಮೆ ಸಿಗಲಿಲ್ಲ. ಇದರಿಂದ ₹68 ಲಕ್ಷ ನಷ್ಟವಾಗಿತ್ತು. ಹಣಕಾಸು ಸಮಸ್ಯೆಯಿಂದ ಪಾರಾಗಲು ಆತ ಕಳ್ಳತನಕ್ಕಿಳಿದನೆಂದು ತಿಳಿದು ಬಂದಿದೆ.

ಮನೆ ತುಂಬಾ ಖಾರದ ಪುಡಿ:

ಟೆಲಿಕಾಂ ಲೇಔಟ್‌ನಲ್ಲಿ 6ನೇ ಅಡ್ಡರಸ್ತೆಯಲ್ಲಿ ನೆಲೆಸಿದ್ದ ಮದನ್ ತಾಯಿ ಗೆಳತಿ ಐಮಾವತಿ ಅವರ ಪರಿಚಯ ಮದನ್‌ಗೆ ಇತ್ತು. ಹೀಗಾಗಿ ಮನೆಗೆ ಬೀಗ ಹಾಕಿಕೊಂಡು ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಅವರು ವಾಯು ವಿಹಾರಕ್ಕೆ ಹೋಗುವ ಸಂಗತಿ ತಿಳಿದ ಮದನ್‌, ಆ ಸಮಯದಲ್ಲಿ ಅವರ ಮನೆಗೆ ಕನ್ನ ಹಾಕಲು ಯೋಜಿಸಿದ್ದ. ಅಂತೆಯೇ ಜ.17ರಂದು ಐಮಾವತಿ ಅವರು ವಾಯು ವಿಹಾರಕ್ಕೆ ತೆರಳಿದ ಬಳಿಕ ಮರ ಕತ್ತರಿಸುವ ಯಂತ್ರದಿಂದ ಮನೆ ಬಾಗಿಲು ಕೊರೆದು ಒಳಗೆ ಹೋಗಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.

ತನ್ನ ಗುರುತು ಪೊಲೀಸರಿಗೆ ಸಿಗದಂತೆ ಎಚ್ಚರವಹಿಸಿದ್ದ ಆರೋಪಿ, ಕೈಗವಸು ಹಾಕಿಕೊಂಡು ಮನೆಯಲ್ಲಿ ವಸ್ತುಗಳನ್ನು ಮುಟ್ಟಿದ್ದ. ಕೃತ್ಯ ಎಸಗಿದ ಆ ಮನೆಯ ಸಿಸಿಟಿವಿ ಡಿವಿಆರನ್ನೂ ಕದ್ದಿದ್ದ. ಶ್ವಾನದಳವು ಹೆಜ್ಜೆ ಗುರುತು ಪತ್ತೆ ಹಚ್ಚಬಾರದು ಎಂದು ಆ ಮನೆ ತುಂಬಾ ಖಾರದ ಪುಡಿ ಚೆಲ್ಲಾಡಿ ಆತ ಕಾಲ್ಕಿತ್ತಿದ್ದ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ನಗರದಲ್ಲಿ 14 ವರ್ಷಗಳ ಬಳಿಕ ಖಾರದ ಪುಡಿ ಎರಚಿ ಕಳ್ಳತನ ನಡೆದಿರುವ ಹಿಂದೆ ವೃತ್ತಿಪರ ಖದೀಮನ ಕೈವಾಡವಿರಬಹುದು ಎಂದು ಶಂಕಿಸಿದರು. ಆದರೆ ಘಟನಾ ಸ್ಥಳದ ಸಮೀಪ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಮದನ್‌ ಜಾಡು ಲಭಿಸಿತು.