ದುಷ್ಟರ್ಮಿಗಳ ಗುಂಪು ಮನೆಯ ಹಿಂಭಾಗದ ಬಾಗಿಲು ಮುರಿದು ಒಳ ನುಗ್ಗಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಟಿ.ಬಳ್ಳೇಕೆರೆ ಕ್ರಾಸ್ ಬಳಿ ಜರುಗಿದೆ.
ಕನ್ನಡಪ್ರಭವಾರ್ತೆ ಮದ್ದೂರು
ದುಷ್ಟರ್ಮಿಗಳ ಗುಂಪು ಮನೆಯ ಹಿಂಭಾಗದ ಬಾಗಿಲು ಮುರಿದು ಒಳ ನುಗ್ಗಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕೊಪ್ಪ ಗ್ರಾಮದ ಟಿ.ಬಳ್ಳೇಕೆರೆ ಕ್ರಾಸ್ ಬಳಿ ಕಳೆದ ಶನಿವಾರ ರಾತ್ರಿ ಜರುಗಿದೆ. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕೃತಕ ಗರ್ಭಧಾರಣೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಲೇ.ಬಿ.ಕೆ.ರಘು ಪತ್ನಿ ಬಿ.ಎಂ.ಪದ್ಮಾರ ಮನೆ ಬೀಗ ಮುರಿದು 10.28 ಲಕ್ಷ ರು. ಮೌಲ್ಯದ 121 ಗ್ರಾಂ ತೂಕದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಮನೆ ಮಾಲೀಕ ಪದ್ಮಾ ಅವರು ಕಳೆದ ಮೇ 10ರಂದು ಸ್ನೇಹಿತೆ ಮನೆ ಗೃಹಪ್ರವೇಶಕ್ಕಾಗಿ ಬೆಂಗಳೂರಿಗೆ ತೆರಳಿದ್ದಾಗ ಮನೆ ಹಿಂಭಾಗದ ಬಾಗಿಲು ಚಿಲಕವನ್ನು ಬಲವಾದ ಆಯುಧದಿಂದ ಮೀಟಿ ಒಳ ನುಗ್ಗಿದ ನಂತರ ಅಲ್ಮೆರಾದಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ಪದ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕೊಪ್ಪ ಪೊಲೀಸರು ಬಿಎನ್ಎಸ್ ಕಾಯ್ದೆ 331, 305ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ಗ್ರಾಮಾಂತರ ಠಾಣೆ ಸಿಪಿಐ ವೆಂಕಟೇಗೌಡ, ಶ್ವಾನದಳ ಮತ್ತು ಬೆರಳು ತಜ್ಞರು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.