ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ; ಗ್ರಾಮಸ್ಥರ ದೂರಿನ ಮೇರೆಗೆ ಪತಿ ವಿಚಾರಣೆ ನಡೆಸಿದ ಪೊಲೀಸರು

KannadaprabhaNewsNetwork | Updated : Jul 27 2024, 04:44 AM IST

ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸೊಳ್ಳೆಪುರ ಗ್ರಾಮದಲ್ಲಿ ಶುಕ್ರವಾರ ಜರುಗಿದೆ. ಗ್ರಾಮದ ನಂದೀಶನ ಪತ್ನಿ ಮಂಗಳಮ್ಮ( 45) ಆತ್ಮಹತ್ಯೆಗೆ ಶರಣಾದವರು. ಮಂಗಳಮ್ಮ ಸಾವಿನ ನಂತರ ಗಂಡನ ಮನೆಯವರು ತರಾತುರಿಯಲ್ಲಿ ಆಕೆ ಶವ ಸಂಸ್ಕಾರ ಮಾಡಲು ಮುಂದಾಗಿದ್ದರು.

 ಮದ್ದೂರು : ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸೊಳ್ಳೆಪುರ ಗ್ರಾಮದಲ್ಲಿ ಶುಕ್ರವಾರ ಜರುಗಿದೆ. ಗ್ರಾಮದ ನಂದೀಶನ ಪತ್ನಿ ಮಂಗಳಮ್ಮ( 45) ಆತ್ಮಹತ್ಯೆಗೆ ಶರಣಾದವರು.

ಮಂಗಳಮ್ಮ ಸಾವಿನ ನಂತರ ಗಂಡನ ಮನೆಯವರು ತರಾತುರಿಯಲ್ಲಿ ಆಕೆ ಶವ ಸಂಸ್ಕಾರ ಮಾಡಲು ಮುಂದಾಗಿದ್ದರು. ಈ ಬಗ್ಗೆ ಗ್ರಾಮದ ಕೆಲವರು ಮಂಗಳಮ್ಮ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಕೊಪ್ಪ ಠಾಣೆ ಪಿಎಸ್ಐ ವೆಂಕಟೇಶ್ ಗ್ರಾಮಕ್ಕೆ ತೆರಳಿ ಶವ ಸಂಸ್ಕಾರ ನಡೆಸದಂತೆ ತಡೆದರು.

ಮೃತ ಮಂಗಳಮ್ಮ ಪತಿ ನಂದೀಶ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ನಂತರ ಮಂಗಳಮ್ಮನ ಸಹೋದರ ನಾಗರಾಜು ಆಕೆಯ ಅನಾರೋಗ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಕಳೆದ ಎಂಟು ವರ್ಷಗಳ ಹಿಂದೆ ಆಕೆ ತಲೆ ಮೇಲೆ ಮರದಿಂದ ತೆಂಗಿನಕಾಯಿ ಬಿದ್ದ ಕಾರಣ ಪದೇಪದೇ ತಲೆನೋವು ಬರುತ್ತಿದ್ದು. ಇದರಿಂದ ಮಂಗಳಮ್ಮ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದಾನೆ.

ನಂತರ ಪೊಲೀಸರು ಮುಂಜಾಗ್ರತೆ ಕ್ರಮವಾಗಿ ಮಂಗಳಮ್ಮಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಬೆಸಗರಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹೃದಯಾಘಾತ

ಹಲಗೂರು: ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತದಿಂದ ಮಹಿಳೆ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಹಲಗೂರಿನ ನಿವಾಸಿ ಶಿವಮಾದಯ್ಯರ ಪತ್ನಿ ಹುಚ್ಚರಸಮ್ಮ(60) ಮೃತ ಮಹಿಳೆ.

ಸಮೀಪದ ಕೊನ್ನಾಪುರ ಗ್ರಾಮದ ಸಿದ್ದೇಗೌಡರ ಜಮೀನಿನಿಂದ ಮರಪ್ಪನ ಕೃಷ್ಣರ ಜಮೀನು ವರೆಗೆ ಕಾಲುವೆ ಅಭಿವೃದ್ಧಿ ಕಾರ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಹುಚ್ಚರಸಮ್ಮ ಅವರಿಗೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರು.

ಇದನ್ನು ಗಮನಿಸಿದ ಕೆಲಸಗಾರರು ತುರ್ತು ಚಿಕಿತ್ಸೆ ಕೊಡಿಸಿ ಮೈಸೂರಿನ ಜಯದೇವ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಹಲಗೂರು ಗ್ರಾಮ ಮಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿ.ರುದ್ರಯ್ಯ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಉದ್ಯೋಗ ಖಾತರಿ ಯೋಜನೆಯಡಿ ಸಿಗುವ ಪರಿಹಾರ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.