ಕನ್ನಡಪ್ರಭ ವಾರ್ತೆ ದೇವದುರ್ಗ
ಶಿವಶಂಕರಪ್ಪ ಸಾಹುಕಾರ ಸಂಬಂಧಿಯಾಗಿರುವ ಸತೀಶ್ ಬಾಬು ಮಗ ಸೂಗೂರೇಶ ಪಶು ವೈದ್ಯನಾಗಿ ನೇಮಕಗೊಂಡಿದ್ದು ಈ ವಿಚಾರವಾಗಿಯೇ ಇಡಿ ದಾಳಿ ನಡೆಸಿದೆ. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ತಮ್ಮ ಅವಧಿಯಲ್ಲಿ ಪಶು ವೈಧ್ಯಾಧಿಕಾರಿಗಳ ನೇಮಕವಾಗಿರುವ ಅಭ್ಯರ್ಥಿಗಳ ಬ್ಯಾಂಕ್ ವಹಿವಾಟು, ಇತರೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಿಂದ ಎರಡು ಇನೋವಾ ಕಾರಿನಲ್ಲಿ ಬಂದ 7 ಜನ ಇಡಿ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆ ತನಕ ದಾಖಲೆಗಳು ಪರಿಶೀಲನೆ ನಡೆಸಿದ್ದು, ಈ ವೇಳೆ ಶಿವಶಂಕರಪ್ಪ ಇವರಿಗೆ ಸೇರಿದ ಚಿರ ಮತ್ತು ಚರ ಆಸ್ತಿ ವಿವರಗಳನ್ನು ಸಹ ತಪಾಸಣೆ ನಡೆಸಿದ್ದು, ಕುಟುಂಬ ವರ್ಗದವರ ಮಾಹಿತಿಯೂ ಸೇರಿದಂತೆ ಜಮೀನು, ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಹ ಸಂಗ್ರಹಿಸಿದ್ದಾರೆ.
ಪಶು ವೈದ್ಯನಾಗಿ ನೇಮಕವಾದ ಸೂಗೂರೇಶ ಮನೆಯಿಂದ ಕೆಲ ಮಹತ್ವದ ದಾಖಲೆಗಳನ್ನು ಪಡೆದಿರುವ ಇಡಿ ಅಧಿಕಾರಿಗಳು ಬ್ಯಾಗ್ಗಳಲ್ಲಿ ಮಹತ್ವದ ದಾಖಲೆ ಗಳನ್ನ ವಶಪಡಿಸಿಕೊಂಡು ಹೋಗಿದ್ದಾರೆ. ಇಡಿ ಅಧಿಕಾರಿಗಳ ತಂಡ ವಾಪಸ್ಸು ತೆರಳುವಾಗ ಸೂಗೂರೇಶ್ ಕುಟುಂಬಸ್ಥರಿಗೆ ನೋಟೀಸ್ ಕೊಟ್ಟು ಹೋಗಿದ್ದು, ಇದೇ ವೇಳೆ ಅವರ ಹಿಂದೆ ಬಂದಿದ್ದ ಸಿಆರ್ಪಿಎಫ್ ಸಿಬ್ಬಂದಿ ಹಿಂತಿರುಗಿದ್ದಾರೆ.ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್ಸಿ) ಅಕ್ರಮ ನೇಮಕಾತಿ ಆರೋಪ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಕೆಪಿಎಸ್ಸಿ ಕಚೇರಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದು, ಅದರಲ್ಲಿ ತಾಲೂಕಿನ ಶಾವಂತಗೇರಾ ಮತ್ತು ಹೇಮನಾಳ ಗ್ರಾಮಗಳು ಸೇರಿವೆ.