ಕನ್ನಡ ಪ್ರಭ ವಾರ್ತೆ ಚುಂಚನಕಟ್ಟೆ
ಕೆ.ಆರ್.ನಗರ ಘಟಕಕ್ಕೆ ಸೇರಿದ ಬಸ್ ಬುಧವಾರ ಮಧ್ಯಾಹ್ನ ಕೆ.ಆರ್.ನಗರ ಪಟ್ಟಣದಿಂದ ಹೆಬ್ಬಾಳು, ಶ್ರೀರಾಮಪುರ, ಚುಂಚನಕಟ್ಟೆ ಮಾರ್ಗವಾಗಿ ರಾವಂದೂರು ಗ್ರಾಮಕ್ಕೆ ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ.
ಬಸ್ ನಲ್ಲಿ 70ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದು, ಚುಂಚನಕಟ್ಟೆ ಸಮೀಪ ಬಸ್ ಸ್ಟೇರಿಂಗ್ ತುಂಡಾದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಗದ್ದೆಯ ಹಳ್ಳಕ್ಕೆ ನುಗ್ಗಿ ಪಲ್ಟಿ ಆಗಿದೆ. ಬಸ್ ಚಾಲಕ ಸೇರಿದಂತೆ ಮುಂದೆ ಕುಳಿತಿದ್ದ ಪ್ರಯಾಣಿಕರು ಒಮ್ಮೆಲೇ ಮುಂದಿನ ಗಾಜಿನ ಸಮೇತ ಹೊರಗೆ ಎಸೆಯಲಾಗಿದ್ದು, ಬಸ್ ನಲ್ಲಿದ್ದ ಸೀಟ್, ಕಂಬಿಗಳು ಮುರಿದಿವೆ. ಒಬ್ಬರಿಗೊಬ್ಬರು ಡಿಕ್ಕಿ ಹೊಡೆದ ಕಾರಣ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ತಲೆ ಭಾಗ, ಕೈ ಕಾಲು ಮತ್ತು ಮುಖಕ್ಕೆ ಪೆಟ್ಟು ಬಿದ್ದಿದೆ. ಹಲವರಿಗೆ ಸಣ್ಣ ಪುಟ್ಟ ಪೆಟ್ಟು ಬಿದ್ದಿದ್ದು, ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ, ಬಸ್ ಚಾಲಕ ಕನಕರಾಜು ಹಾಗೂ ನಿರ್ವಾಹಕ ಸುರೇಶ್ ಅವರಿಗೂ ಪೆಟ್ಟಾಗಿದೆ.ಪೆಟ್ಟು ಬಿದ್ದಿರುವ ಪ್ರಯಾಣಿಕರನ್ನು ಕೃಷ್ಣರಾಜನಗರ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.
ಶಾಸಕ ಡಿ. ರವಿಶಂಕರ್ ಅವರು ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿ ವೈದ್ಯರಿಗೆ ತುರ್ತು ಚಿಕಿತ್ಸೆ ನೀಡುವಂತೆ ಸೂಚಿಸಿದರು.