ಕೆಫೆಯಲ್ಲಿ ಬಾಂಬಿಟ್ಟಿದ್ದು ತೀರ್ಥಹಳ್ಳಿ ಮುಸಾಬೀರ್‌

KannadaprabhaNewsNetwork |  
Published : Mar 24, 2024, 01:32 AM ISTUpdated : Mar 24, 2024, 08:09 AM IST
Bomb blast 4 | Kannada Prabha

ಸಾರಾಂಶ

ಇತ್ತೀಚೆಗೆ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ಹೋಗಿದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾಬೀರ್ ಹುಸೇನ್ ಶಾಜಿಬ್ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುತಿಸಿರುವುದಾಗಿ ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ಹೋಗಿದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾಬೀರ್ ಹುಸೇನ್ ಶಾಜಿಬ್ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುತಿಸಿರುವುದಾಗಿ ತಿಳಿದು ಬಂದಿದೆ.

ಇದರೊಂದಿಗೆ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೃತ್ಯದ ಹಿಂದೆ ‘ಶಿವಮೊಗ್ಗ ಐಸಿಸ್‌ ಮಾಡ್ಯುಲ್‌’ ಕೈವಾಡ ಇರುವುದು ಖಚಿತವಾಗಿದೆ.

ಮುಸಾಬೀರ್ ಹುಸೇನ್ ಶಾಜಿಬ್‌ ‘ಮೋಸ್ಟ್ ವಾಂಟೆಡ್‌’ ಶಂಕಿತ ಉಗ್ರನಾಗಿದ್ದು, ಮೂರು ವರ್ಷಗಳಿಂದ ಆತನ ಪತ್ತೆಗೆ ಎನ್‌ಐಎ ಹುಡುಕಾಟ ನಡೆಸಿದೆ. 

ಅಲ್ಲದೆ 2022ರಿಂದ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯಗಳಲ್ಲಿ ತೀರ್ಥಹಳ್ಳಿ ತಾಲೂಕಿನ ಮತ್ತೊಬ್ಬ ಮೋಸ್ಟ್ ವಾಂಟೆಡ್‌ ಶಂಕಿತ ಉಗ್ರ ಅಬ್ದುಲ್ ಮತೀನ್ ತಾಹ ಜತೆ ಶಾಜಿಬ್‌ ಪಾತ್ರ ವಹಿಸಿದ್ದಾನೆ. 

ಈಗ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಹ ಇದೇ ಆತಂಕವಾದಿಗಳು ಇದ್ದಾರೆ ಎನ್ನಲಾಗುತ್ತಿದೆ. ಮಾ.1ರಂದು ಕೆಫೆ ವಿಧ್ವಂಸಕ ಕೃತ್ಯದ ಬಾಂಬರ್‌ ಬೆನ್ನತ್ತಿದ್ದ ಎನ್‌ಐಎ ಹಾಗೂ ಸಿಸಿಬಿ, ಕುಂದಲಹಳ್ಳಿಯಿಂದ ಬಳ್ಳಾರಿವರೆಗೆ ಸುಮಾರು 800ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪರಿಶೀಲಿಸಿದ್ದವು. 

ಆ ದೃಶ್ಯಾವಳಿಗಳಲ್ಲಿದ್ದ ಶಂಕಿತನಿಗೂ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಶಾಜಿಬ್‌ ಭಾವಚಿತ್ರಕ್ಕೂ ತಾಳೆಯಾಗಿದೆ. 

ಶಿವಮೊಗ್ಗ-ಮಂಗಳೂರು ಲಿಂಕ್: ಇತ್ತೀಚಿನ ವರ್ಷಗಳಲ್ಲಿ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ ಪ್ರಕರಣ, ಮಂಗಳೂರು ಕುಕ್ಕರ್ ಸ್ಫೋಟ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಂಗಾ ತೀರದಲ್ಲಿ ಬಾಂಬ್ ಪರೀಕ್ಷೆ ಪ್ರಕರಣ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಫೋಟ ಹಾಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಗಳಿಗೆ ನಂಟಿದೆ. 

ಅಲ್ಲದೆ ಮಂಗಳೂರು ಕುಕ್ಕರ್‌ ಸ್ಫೋಟ ಹಾಗೂ ಶಿವಮೊಗ್ಗ ಜಿಲ್ಲೆ ಬಾಂಬ್ ಪ್ರಯೋಗದಲ್ಲಿ ಪತ್ತೆಯಾಗಿದ್ದ ಸ್ಫೋಟಕ ವಸ್ತುಗಳಿಗೂ ಕೆಫೆ ಸ್ಫೋಟದ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳಿಗೂ ತಾಳೆಯಾಗಿದೆ. 

ಹೀಗಾಗಿ ಶಿವಮೊಗ್ಗ ಐಸಿಎಸ್ ತಂಡವೇ ಕೆಫೆ ಕೃತ್ಯದಲ್ಲಿ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಝ್‌ ಮುನೀರ್ ಅಹ್ಮದ್‌ನನ್ನು ಎನ್‌ಐಎ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ.

2021ರಿಂದ ತಲೆಮರೆಸಿಕೊಂಡಿರುವ ಶಂಕಿತರು: ಐಸಿಸ್ ಸಂಘಟನೆಗೆ ಮಲೆನಾಡಿನಲ್ಲಿ ಮುಸ್ಲಿಂ ಯುವಕರ ನೇಮಕಾತಿಯಲ್ಲಿ ತೀರ್ಥಹಳ್ಳಿ ತಾಲೂಕಿನ ಮತೀನ್ ತಾಹ ಹಾಗೂ ಶಾಜಿಬ್‌ ಪ್ರಮುಖ ಪಾತ್ರ ವಹಿಸಿದ್ದರು. 

2021ರ ಜನವರಿಯಲ್ಲಿ ಸದ್ದುಗುಂಟೆಪಾಳ್ಯದಲ್ಲಿ ದಕ್ಷಿಣ ಭಾರತದ ಐಸಿಸ್‌ ಕಮಾಂಡರ್ ಮೊಯಿದ್ದೀನ್ ಖ್ವಾಜಾ ತಂಡವನ್ನು ಎನ್‌ಐಎ ಹಾಗೂ ಸಿಸಿಬಿ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದವು. 

ಅಂದು ತಪ್ಪಿಸಿಕೊಂಡ ಮತೀನ್‌ ಹಾಗೂ ಶಾಜಿಬ್‌ ಜೋಡಿ ಮತ್ತೆಂದೂ ಪೊಲೀಸರಿಗೆ ಸಿಗದೆ ಭೀತಿ ಸೃಷ್ಟಿಸಿದೆ.ಐಸಿಸ್‌ಗೆ ತೀರ್ಥಹಳ್ಳಿ ತಾಲೂಕಿನ ಮೊಹಮ್ಮದ್ ಶಾರೀಕ್, ಎಂಜಿನಿಯರಿಂಗ್ ಪದವೀಧರ ಅರಾಫತ್ ಅಲಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮಾಝ್‌ ಮುನೀರ್‌ ಅಹ್ಮದ್‌ ಮತ್ತು ಸಾದತ್‌ಗೆ ಮುಸ್ಲಿಂ ಮೂಲಭೂತವಾದ ಬೋಧಿಸಿ ಮತೀನ್ ಹಾಗೂ ಶಾಜಿಬ್‌ ಸೆಳೆದಿದ್ದರು. 

ಇದೇ ವಿದ್ಯಾರ್ಥಿಗಳನ್ನು ಬಳಸಿಕೊಂಡು 2020ರ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ದೇಶ ವಿರೋಧಿ ಗೋಡೆ ಬರಹ ಬರೆಸಿದ್ದರು. ಈ ಪ್ರಕರಣದಲ್ಲಿ ಶಾರೀಕ್ ಹಾಗೂ ಆತನ ಸ್ನೇಹಿತರು ಬಂಧಿತರಾಗಿ ಜೈಲು ಸೇರಿದ್ದರು. 

ಪೊಲೀಸರ ತನಿಖೆಯಲ್ಲಿ ಗೋಡೆ ಬರಹ ಕೃತ್ಯದ ಹಿಂದೆ ಐಸಿಸ್ ಕೈವಾಡ ಬಯಲಾಗಿತ್ತು. ಈ ಘಟನೆ ಬಳಿಕ ಸದ್ದುಗುಂಟೆಪಾಳ್ಯದಲ್ಲಿ ಐಸಿಸ್‌ ಮುಖಂಡ ಖ್ವಾಜಾ ಹಾಗೂ ಆತನ ನಾಲ್ವರು ಸಹಚರರು ಸಿಕ್ಕಿಬಿದ್ದರು. 

ಈ ದಾಳಿಯಲ್ಲಿ ತಪ್ಪಿಸಿಕೊಂಡ ಮತೀನ್ ಹಾಗೂ ಶಾಜಿಬ್ ಪತ್ತೆಗೆ ತೀವ್ರ ಹುಡುಕಾಟ ನಡೆಸಿದ ಎನ್‌ಐಎ, ಕೊನೆಗೆ ಈ ಜೋಡಿ ವಿದೇಶಕ್ಕೆ ಹಾರಿರಬಹುದು ಎಂದು ಶಂಕಿಸಿತು. ಅಲ್ಲದೆ ಈ ಶಂಕಿತ ಉಗ್ರರ ಪತ್ತೆಗೆ ಸುಳಿವು ನೀಡಿದರೆ 5 ಲಕ್ಷ ರು. ಬಹುಮಾನ ಕೊಡುವುದಾಗಿ ಎನ್‌ಐಎ ಘೋಷಿಸಿತ್ತು. 

ಶಿವಮೊಗ್ಗ ಟ್ರಯಲ್‌, ಕೊಯಮತ್ತೂರು ಬ್ಲಾಸ್ಟ್‌: 2022ರ ಆಗಸ್ಟ್‌ 15 ರಂದು ಶಿವಮೊಗ್ಗ ನಗರದಲ್ಲಿ ಸಾವರ್ಕರ್‌ ಭಾವಚಿತ್ರ ವಿಚಾರವಾಗಿ ಗಲಾಟೆ ನಡೆದು ಹಿಂದೂ ಪರ ಸಂಘಟನೆಯ ಕಾರ್ಯಕರ್ತನಿಗೆ ಚಾಕು ಇರಿತವಾಗಿತ್ತು. 

ಈ ಕೃತ್ಯದಲ್ಲಿ ಬಂಧಿತ ಜಬೀವುಲ್ಲಾ ಖಾನ್‌ನ ಮೊಬೈಲ್ ಅನ್ನು ಪರಿಶೀಲಿಸಿದಾಗ ತೀರ್ಥಹಳ್ಳಿ ತಾಲೂಕಿನ ನದಿ ತೀರದಲ್ಲಿ ಕಚ್ಚಾ ಬಾಂಬ್ ತಯಾರಿಸಿ ಪ್ರಯೋಗ ನಡೆಸಿದ್ದ ಕೃತ್ಯ ಬೆಳಕಿಗೆ ಬಂದಿತ್ತು. 

ಆದರೆ ಆ ಕೃತ್ಯದಲ್ಲಿ ತಪ್ಪಿಸಿಕೊಂಡ ಶಾರೀಕ್‌, ಅದೇ ವರ್ಷ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಕುಕ್ಕರ್‌ನಲ್ಲಿ ಬಾಂಬ್ ಇಟ್ಟು ಅದನ್ನು ಆಟೋದಲ್ಲಿ ತೆಗೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಸ್ಫೋಟಗೊಂಡು ಸಿಕ್ಕಿಬಿದ್ದಿದ್ದ. 

ಈತನ ವಿಚಾರಣೆ ವೇಳೆಯಲ್ಲೇ ಶಾಜಿಬ್‌ ಹಾಗೂ ಮತೀನ್‌ ಪಾತ್ರ ಗೊತ್ತಾಗಿತ್ತು. ಈ ನಡುವೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಹ ಬಾಂಬ್ ಇಡಲು ಹೋಗುವಾಗ ಮತ್ತೊಬ್ಬ ಐಸಿಸ್ ಶಂಕಿತ ಜಮೇಶ್ ಮುಬೀನ್ ಮೃತನಾಗಿದ್ದ. ಹೀಗಾಗಿ ಈ ಕೃತ್ಯಗಳಲ್ಲಿ ಶಿವಮೊಗ್ಗದ ಆತಂಕವಾದಿ ಜೋಡಿ ಪಾತ್ರ ವಹಿಸಿರುವುದು ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.

ಕೆಫೆ ಸ್ಕೆಚ್ ಹಾಕಿದ ಜೋಡಿ: ತನ್ನ ಸಹಚರರ ಮೂಲಕ ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿ ನಿರೀಕ್ಷಿತ ಫಲಿತಾಂಶ ಸಿಗದೆ ಕೈಸುಟ್ಟುಕೊಂಡ ಮತೀನ್‌ ಹಾಗೂ ಶಾಜಿಬ್‌, ತಾವೇ ನೇರವಾಗಿ ಫೀಲ್ಡ್‌ಗಿಳಿದು ದೊಡ್ಡ ಮಟ್ಟದ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಆಗ ಬೆಂಗಳೂರಿನ ಐಟಿ ಕಾರಿಡಾರ್‌ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆಯನ್ನೇ ಶಂಕಿತ ಉಗ್ರರು ಟಾರ್ಗೆಟ್ ಮಾಡಿದ್ದರು.

ಅಂತೆಯೇ ಕೆಫೆ ಸ್ಪೋಟಿಸಿ ದೊಡ್ಡ ಸದ್ದು ಮಾಡುವ ದುರಾಲೋಚನೆ ಹೊಂದಿದ್ದರು. ಇದಕ್ಕಾಗಿ ಚೆನ್ನೈ ನಗರದಲ್ಲಿ ಕ್ಯಾಪ್ ಖರೀದಿಸಿದ್ದರು. ಕಚ್ಚಾ ಬಾಂಬ್ ತಯಾರಿಸಿ ಸಂಚು ಕಾರ್ಯರೂಪಕ್ಕಿಳಿಸಿದ್ದರು. ಆದರೆ ಕಚ್ಚಾ ಬಾಂಬ್ ಬಿಗಿಯುವಾಗ ಕಟ್ಟು ಸಡಿಲವಾದ ಪರಿಣಾಮ ದೊಡ್ಡ ಮಟ್ಟದ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ. 

ದುವಾ ಸೆಂಟರ್‌ನಲ್ಲಿ ಜಿಹಾದಿ ಬೋಧನೆ: ದಕ್ಷಿಣ ಭಾರತದ ಐಸಿಸ್ ಸಂಘಟನೆಗೆ ‘ಅಲ್ ಹಿಂದ್ ಐಸಿಸ್‌’ ಎಂದು ಹೆಸರಿಡಲಾಗಿತ್ತು. ಇದಕ್ಕೆ ತಮಿಳುನಾಡು ಮೂಲದ ಮೊಹಿದ್ದೀನ್ ಖ್ವಾಜಾ ಕಮಾಂಡರ್ ಆಗಿದ್ದರೆ, ಆ ಸಂಘಟನೆಗೆ ಬೆಂಗಳೂರಿನ ಸದ್ದುಗುಂಟೆಪಾಳ್ಯದ ಮೆಹಬೂಬ್ ಪಾಷ ಕ್ಯಾಪ್ಟನ್‌ ಆಗಿದ್ದ. 

ಈ ಸಂಘಟನೆಯಲ್ಲಿ ಶಿವಮೊಗ್ಗದ ಮತೀನ್‌ ಹಾಗೂ ಶಾಜಿಬ್ ಸಕ್ರಿಯ ಸದಸ್ಯರಾಗಿದ್ದರು ಎನ್ನಲಾಗಿದೆ.ಸದ್ದುಗುಂಟೆಪಾಳ್ಯದಲ್ಲಿ ಕೂಡಾ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಂಘಟನೆಗೆ ಮುಸ್ಲಿಂ ಯುವಕರನ್ನು ಮೆಹಬೂಬ್ ಪಾಷ ಸೆಳೆದಿದ್ದ. 

ಇದೇ ರೀತಿ ಶಿವಮೊಗ್ಗದಲ್ಲಿ ದುವಾ ಹೆಸರಿನ ಎನ್‌ಜಿಓ ಕಚೇರಿಯನ್ನು ಮತೀನ್ ಹಾಗೂ ಶಾಜಿಬ್ ತೆರೆದಿದ್ದರು. ಇನ್ನು ಈ ಇಬ್ಬರು ಎಂಜಿನಿಯರ್ ಪದವೀಧರರಾಗಿದ್ದು, ತೀರ್ಥಹಳ್ಳಿಯಲ್ಲಿ ಮತೀನ್ ಬಟ್ಟೆ ಅಂಗಡಿ ನಡೆಸುತ್ತಿದ್ದ. 

ಇನ್ನು ಖಾಸಗಿ ಕಂಪನಿಯಲ್ಲಿ ಶಾಜಿಬ್ ಕೆಲಸ ಮಾಡುತ್ತಿದ್ದ. ದುವಾ ಸೆಂಟರ್‌ಗೆ ಬರುವ ಮುಸ್ಲಿಂ ಯುವಕರಿಗೆ ಜಿಹಾದಿ ಬೋಧಿಸಿ ಐಸಿಸ್‌ಗೆ ಈ ಜೋಡಿ ನೇಮಕಾತಿ ಮಾಡುತ್ತಿತ್ತು. 

ಈ ಗಾಳಕ್ಕೆ ಸಿಲುಕಿ ವಿದ್ಯಾರ್ಥಿಗಳಾದ ಶಾರೀಕ್‌, ಮಾಝ್‌, ಸಾದತ್ ಹಾಗೂ ಅರಾಫತ್ ಆಲಿ ಐಸಿಸ್‌ ಸೇರಿದ್ದರು ಎಂದು ಮೂಲಗಳು ವಿವರಿಸಿವೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು