ರಾಮಲಲ್ಲಾ ಪ್ರತಿಷ್ಠೆಯಂದು ರಜೆ ನೀಡದ್ದಕ್ಕೆ ಆಕ್ಷೇಪ

KannadaprabhaNewsNetwork | Published : Jan 25, 2024 2:03 AM

ವಾಟ್ಸಪ್ ಗ್ರೂಪ್‌ನಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ರಜಾ ನೀಡದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕುದಿದು ಹೋಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿ, ವಾಯ್ಸ್ ಮೆಸೇಜನ್ನು ವಾಟ್ಸಪ್‌ ಗ್ರೂಪ್‌ಗೆ ಹರಿಯಬಿಟ್ಟಿದ್ದ ಹಿನ್ನೆಲೆಯಲ್ಲಿ 2 ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಿಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.

- ವಾಟ್ಸಪ್‌ ಗ್ರೂಪ್‌ನಲ್ಲಿ ನಿಂದ್ಯ ಪೋಸ್ಟ್‌ ಹಂಚಿದ್ದ ಇಬ್ಬರ ಸೆರೆ । ಸಾಮಾಜಿಕ ಜಾಲತಾಣ ಬಳಸುವಾಗ ಜಾಗ್ರತೆ ಇರಲಿ: ಎಸ್ಪಿ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಾಟ್ಸಪ್ ಗ್ರೂಪ್‌ನಲ್ಲಿ ಯಾರೋ ಒಬ್ಬ ವ್ಯಕ್ತಿಯು ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ರಜಾ ನೀಡುವ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನಾಕಾರಿ ಯಾಗಿ ಮಾತನಾಡಿ, ವಾಯ್ಸ್ ಮೆಸೇಜ್‌ ವಾಟ್ಸಪ್‌ ಗ್ರೂಪ್‌ಗೆ ಹಾಕಿದ್ದನು. ಈ ವಾಯ್ಸ್ ಮೆಸೇಜ್ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡಿತ್ತು. ಈ ವಾಯ್ಸ್ ಮೆಸೇಜ್ ಮಾಡಿದರವರ ಮೊಬೈಲ್ ನಂಬರ್ ಮಾಹಿತಿ ಸಂಗ್ರಹಿಸಿ, ಗ್ರೂಪ್‌ನಲ್ಲಿ ವಾಯ್ಸ್ ಮೆಸೇಜ್ ಶೇರ್ ಮಾಡಿದ್ದ ವ್ಯಕ್ತಿಯನ್ನು ಇಲ್ಲಿನ ಕೆಟಿಜೆ ನಗರ ಪೊಲೀಸರು ಪತ್ತೆ ಮಾಡಿ, ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಅವಾಚ್ಯ ಶಬ್ಧಗಳಿಂದ ಬೈದಾಡಿ, ಸಮುದಾಯಗಳ ಮಧ್ಯೆ ದ್ವೇಷ ಭಾವನೆಗಳನ್ನುಂಟು ಮಾಡುವ ವಾಯ್ಸ್ ಮೆಸೇಜ್ ಮಾಡಿ, ತನ್ನ ವಾಟ್ಸಪ್‌ ಗ್ರೂಪ್ ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದ ಆರೋಪಿಯ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ವಾಯ್ಸ್ ಮೆಸೇಜ್ ಶೇರ್ ಮಾಡಿದ್ದ ವ್ಯಕ್ತಿಯನ್ನು ಕೆಟಿಜೆ ನಗರ ಪೊಲೀಸರು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮದೀನಾ ಮಸೀದಿಯ ಚಿತ್ರವನ್ನು ಬಳಸಿ, ವೀಡಿಯೋ ಮಾಡಿ, ಅದನ್ನು ತನ್ನ ಹಾಗೂ ತನ್ನ ಗೆಳೆಯರ ಮೊಬೈಲ್‌ಗಳಿಗೆ ಹರಿಯ ಬಿಡುವ ಮೂಲಕ ಮುಸ್ಲಿಂ ಸಮಾಜದವರ ಭಾವನೆಗಳಿಗೆ ಧಕ್ಕೆ ತರುವಂತೆ ಚಿತ್ರಿಸಿದ ವ್ಯಕ್ತಿಯ ವಿರುದ್ಧ ದಾವಣಗೆರೆಯ ದಾದಾಪೀರ್ ಎಂಬುವರು ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಟುವಳ್ಳಿಯ ಓರ್ವ ಯುವಕನನ್ನು ಬಂಧಿಸಿ, ಆತನ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಆರೋಪಿ ಗಳನ್ನು ವಶಕ್ಕೆ ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಚೋದನಾಕಾರಿ ಪೋಸ್ಟ್: ಕಾನೂನು ಕ್ರಮ ನಿಶ್ಚಿತ

ದಾವಣಗೆರೆ: ನಗರ, ಜಿಲ್ಲೆಯ ಸಾರ್ವಜನಿಕರು ವಾಟ್ಸಪ್, ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಾಕಾರಿ ಪೋಸ್ಟ್‌, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ಕೋಮು ಪ್ರಚೋದನೆ, ದೇಶ ವಿರೋಧಿ, ಧರ್ಮ ವಿರೋಧಿ ಸೇರಿದಂತೆ ಇತ್ಯಾದಿ ಪೋಸ್ಟ್, ವೀಡಿಯೋ, ಆಡಿಯೋಗಳು, ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಮತ್ತು ಶೇರ್ ಮಾಡುವುದು ಕಾನೂನು ಬಾಹಿರ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್‌ಗಳನ್ನು ಹಾಕುವುದು, ಶೇರ್ ಮಾಡುವುದನ್ನು ಯಾರೇ ಮಾಡಿದರೂ ಅಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆಯಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು, ವಿದ್ಯಾರ್ಥಿ, ಯುವ ಜನರು ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳ ಬಳಸುವಾಗ ಎಚ್ಚರ ವಹಿಸಬೇಕು ಎಂದು ಅವರು ಸೂಚ್ಯವಾಗಿ ತಿಳಿಸಿದ್ದಾರೆ.