ರೈಲಿನಲ್ಲಿ ಪ್ರಯಾಣಿಕರ ಲ್ಯಾಪ್ ಟಾಪ್, ಮೊಬೈಲ್ ಕಳವು: ಆರೋಪಿ ಬಂಧನ

KannadaprabhaNewsNetwork |  
Published : Apr 19, 2024, 01:05 AM ISTUpdated : Apr 19, 2024, 05:28 AM IST
28 | Kannada Prabha

ಸಾರಾಂಶ

 ಮುರುಡೇಶ್ವರ ಎಕ್ಸ್ ಪ್ರೆಸ್ ರೈಲಿನಲ್ಲಿ ಬಂದಿದ್ದ ಟ್ರೆಸಿಯಾ ಲವಿಟ ಅವರ ಲ್ಯಾಪ್ಟಾಪ್, ಮೊಬೈಲ್ ಇದ್ದ ಬ್ಯಾಗ್ ಕಳವಾಗಿತ್ತು. ತನಿಖೆ ಆರಂಭಿಸಿ  ಪೊಲೀಸರು ಆರೋಪಿಯನ್ನು ಬಂಧಿಸಿ,  ಕಳ್ಳತನ ಪ್ರಕರಣಗಳಲ್ಲಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 ಮೈಸೂರು :  ರೈಲಿನಲ್ಲಿ ಪ್ರಯಾಣಿಕರ ಲ್ಯಾಪ್ ಟಾಪ್, ಮೊಬೈಲ್ ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಮೈಸೂರು ರೈಲ್ವೆ ಠಾಣೆಯ ಪೊಲೀಸರು ಬಂಧಿಸಿ, 10.28 ಲಕ್ಷ ರೂ. ಮೌಲ್ಯದ 8 ಲ್ಯಾಪ್ ಟಾಪ್, 9 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಸರಸ್ವತಿಪುರಂ ನಿವಾಸಿ ಲೇ. ಕೃಷ್ಣಪ್ರಸಾದ್ ಎಂಬವರ ಪುತ್ರ ಕೆ. ಸುಧೀಂದ್ರ (34) ಬಂಧಿತ ಆರೋಪಿ. ಈತನು ಏ.3 ರಂದು ಮೈಸೂರು ರೈಲು ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಲ್ಯಾಪ್ ಟಾಪ್ ಬ್ಯಾಗ್ ಹಿಡಿದುಕೊಂಡು ಓಡಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಕಳೆದ ಮಾ.13 ರಂದು ಪುತ್ತೂರಿನಿಂದ ಮೈಸೂರಿಗೆ ಮುರುಡೇಶ್ವರ ಎಕ್ಸ್ ಪ್ರೆಸ್ ರೈಲಿನಲ್ಲಿ ಬಂದಿದ್ದ ಟ್ರೆಸಿಯಾ ಲವಿಟ ಅವರ ಲ್ಯಾಪ್ಟಾಪ್, ಮೊಬೈಲ್ ಇದ್ದ ಬ್ಯಾಗ್ ಕಳವಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿವಿಧ ಕಳ್ಳತನ ಪ್ರಕರಣಗಳಲ್ಲಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಗು ಅಪಹರಣ: ಐವರು ಆರೋಪಿಗಳ ಬಂಧನ

  ಮೈಸೂರು : ಮಗುವನ್ನು ಅಪಹರಿಸಿದ್ದ ಐವರು ಆರೋಪಿಗಳನ್ನು ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ.

ಹೂಟಗಳ್ಳಿ ದೊಡ್ಡ ಅರಳೀಮರದ ಬಳಿಯ ನಿವಾಸಿ ಮಂಜುನಾಥ, ಪಾಂಡವಪುರ ತಾಲೂಕಿನ ಡಾಬರಹಳ್ಳಿಯ ಕುಮಾರ್, ನಾಗವಾಲದ ಇಂದ್ರಕುಮಾರ್, ಸುಪ್ರಿಯಾ ಮತ್ತು ವಿಜಯಲಕ್ಷ್ಮಿ ಬಂಧಿತ ಆರೋಪಿಗಳು.ಬೀಹಾರ ಮೂಲದ ಜೀತ್ ಮಂಡಲ್ ಹಾಗೂ ರಾಮಡಲ್ಲಿದೇವಿ ದಂಪತಿ ಜೇನುತುಪ್ಪ ಮಾರಾಟ ಮಾಡಿಕೊಂಡು ಅಲೆಮಾರಿ ಜೀವನ ಸಾಗಿಸುತ್ತಿದ್ದು. ಹಿನಕಲ್ ಹೊರ ವರ್ತುಲ ರಸ್ತೆಯಲ್ಲಿ ಪ್ಲೇ ಓವರ್ ಬಳಿ ಜೋಪಡಿ ನಿರ್ಮಿಸಿಕೊಂಡು ಮಗುವಿನೊಂದಿಗೆ ವಾಸವಿದ್ದರು.

ಬುಧವಾರ ಮುಂಜಾನೆ ಎದ್ದು ನೋಡಿದಾಗ ಮಗು ಇರಲಿಲ್ಲ. ಹೊರಗೆ ಬಂದು ನೋಡಿದಾಗ ಪಕ್ಕದ ಜೋಪಡಿ ವಾಸಿ, ಮಹಿಳೆಯೊಬ್ಬರು, ಜೋಪಡಿಯಿಂದ ಮಗುವನ್ನು ಎತ್ತಿಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಮಗುವಿನ ತಾಯಿ ರಾಮಡಲ್ಲಿದೇವಿ ನೀಡಿದ ದೂರಿನ ಮೇರೆಗೆ ವಿಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಂ. ಮುತ್ತುರಾಜು, ವಿಜಯನಗರ ಉಪ ವಿಭಾಗದ ಎಸಿಪಿ ಗಜೇಂದ್ರಪ್ರಸಾದ್ ಅವರ ಮಾರ್ಗದಸರ್ಶನದಲ್ಲಿ ವಿಜಯನಗರ ಠಾಣೆಯ ಇನ್ಸ್ ಪೆಕ್ಟರ್ ಬಿ.ಆರ್. ಪ್ರದೀಪ, ಎಸ್ಐಗಳಾದ ವಿಶ್ವನಾಥ, ಕೆ. ನಾರಾಯಣ, ವನಜಾಕ್ಷಿ, ಸಿಬ್ಬಂದಿ ಶಿವಕುಮಾರ್, ಲಿಖಿತ್, ಮುರುಳಿಗೌಡ, ಸಂಜಯ್, ಅಣ್ಣಪ್ಪ ದೇವಾಡಿಗ, ನಂದೀಶ್, ಶ್ರೀನಿವಾಸಮೂರ್ತಿ, ಪ್ರಭಾಕರ್, ಸಿಡಿಆರ್ ವಿಭಾಗ ಕುಮಾರ್ ಈ ಪತ್ತೆ ಮಾಡಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!