ರೇಣುಕಾಸ್ವಾಮಿ ಕೊಲೆ ಕೇಸ್‌: ಸೋಪಲ್ಲಿ ದರ್ಶನ್ ಬಟ್ಟೆ ಒಗೆದಿದ್ದರೂ ರಕ್ತದ ಕಲೆ ಸಿಕ್ಕಿದೆ!

Published : Oct 10, 2024, 09:37 AM IST
Darshan

ಸಾರಾಂಶ

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ, ಬೆಂಗಳೂರಿನಲ್ಲಿ ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದನ್ನು ಸಾಬೀತುಪಡಿಸಲು ಬಲವಾದ ಬಲವಾದ ವೈಜ್ಞಾನಿಕ, ತಾಂತ್ರಿಕ, ವೈದ್ಯಕೀಯ ಮತ್ತು ಪ್ರತ್ಯಕ್ಷ ದರ್ಶಿಗಳ ಸಾಕ್ಷ್ಯ 

 ಬೆಂಗಳೂರು: ನಟ ದರ್ಶನ್ ಮತ್ತು ಸಹಚರರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ, ಬೆಂಗಳೂರಿನಲ್ಲಿ ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದನ್ನು ಸಾಬೀತುಪಡಿಸಲು ಬಲವಾದ ಬಲವಾದ ವೈಜ್ಞಾನಿಕ, ತಾಂತ್ರಿಕ, ವೈದ್ಯಕೀಯ ಮತ್ತು ಪ್ರತ್ಯಕ್ಷ ದರ್ಶಿಗಳ ಸಾಕ್ಷ್ಯಗಳಿದ್ದು, ಜೀವಾವಧಿ ಮತ್ತು ಮರಣ ದಂಡನೆ ವಿಧಿಸಬಹುದಾದ ಅಪರಾಧವನ್ನು ಆರೋಪಿಗಳು ಎಸಗಿರುವುದರಿಂದ ಜಾಮೀನು ಪಡೆಯಲು ಅವರು ಅರ್ಹರಾಗಿಲ್ಲ ಎಂದು ತನಿಖಾಧಿಕಾರಿಗಳ ಪರ ಸರ್ಕಾರದ ವಿಶೇಷ ಅಭಿಯೋಜಕ ಪಿ.ಪ್ರಸನ್ನಕುಮಾರ್ ಪ್ರಬಲವಾಗಿ ವಾದ ಮಂಡಿಸಿದಾರೆ.

ನಟ ದರ್ಶನ್ ಅವರ ಆಪ್ತ ಪವಿತ್ರಾಗೌಡ ಸೇರಿದಂತೆ ಇನ್ನಿತರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಬುಧವಾರವೂ ಮುಂದುವರಿಸಿತು. ಬುಧವಾರ ಎಸ್‌ಪಿಪಿ ಪ್ರಸನ್ನಕುಮಾರ್ ಅವರು ಆರೋಪಿಗಳಾದ ಪವಿತ್ರಾ ಗೌಡ, ನಟ ದರ್ಶನ್, ರವಿಶಂಕರ್ ಮತ್ತು ದೀಪಕ್ ಅವರ ಜಾಮೀನು ಅರ್ಜಿ ಕುರಿತು ಸುದೀರ್ಘವಾಗಿ ಪ್ರತಿವಾದ ಮಂಡಿಸಿದರು.

ಈ ವೇಳೆ ಹಾಜರಿದ್ದ ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಎಸ್‌ ಪಿಪಿಯ ಪ್ರತಿವಾದಕ್ಕೆ ಗುರುವಾರ ಉತ್ತರಿಸುವುದಾಗಿ ತಿಳಿಸಿದರು. ಇದರಿಂದ ನ್ಯಾಯಾಧೀಶ ಜೈ ಶಂಕರ್ ಅವರು, ಮೊದಲ ಆರೋಪಿ ಪವಿತ್ರಾ ಗೌಡ, 8, 11 ಮತ್ತು 12ನೇ ಆರೋಪಿಗಳಾದರವಿಶಂಕರ್, ನಾಗರಾಜ್ ಹಾಗೂ ಲಕ್ಷ್ಮಣ್ ಅವರ ಜಾಮೀನು ಅರ್ಜಿ ತೀರ್ಪನ್ನು ಅ.14ರಂದು ಪ್ರಕಟಿಸುವುದಾಗಿ ತಿಳಿಸಿದರು.

ಇದೇ ವೇಳೆ ಆರೋಪಿಗಳಾಗಿರುವ ರಾಘವೇಂದ್ರ ಮತ್ತು ಪುಟ್ಟಸ್ವಾಮಿ ಅವರ ಪರ ವಕೀಲರು ಜಾಮೀನು ಅರ್ಜಿಗಳನ್ನು ಹಿಂಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಎಸ್‌ಪಿಪಿ ಪ್ರಸನ್ನ ಕುಮಾರ್, ದರ್ಶನ್ ಜೀನ್ಸ್ ಪ್ಯಾಂಟ್, ಟಿ- ಶರ್ಟ್, ಒಂದು ಜೊತೆ ಶೂ ಜಪ್ತಿ ಮಾಡಲಾಗಿತ್ತು. ಪವಿತ್ರಗೌಡ ಶರ್ಟ್, ರವಿಶಂಕರ್ ಮತ್ತು ಲಕ್ಷ್ಮಣ್ ಅವರ ಬಟ್ಟೆ ಹಾಗೂ ಪಾದರಕ್ಷೆ ವಶಕ್ಕೆ ಪಡೆಯಲಾಗಿತ್ತು. ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಆತನ ರಕ್ತದ ಕಲೆಗಳು ದರ್ಶನ್ ಮತ್ತು ಇತರೆ ಆರೋಪಿಗಳ ಬಟ್ಟೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು.

ದರ್ಶನ್ ಅವರ ಬಟ್ಟೆಗಳನ್ನು ಒಗೆದು ಒಣಗಿಸಲಾಗಿತ್ತು. ಅವುಗಳನ್ನು ವಶಕ್ಕೆ ಪಡೆದು, ಎಫ್‌ಎಫ್‌ಐಗೆ ಕಳುಹಿಸಲಾಗಿದೆ.ಲೂಮಿನಾರ್ ಪರೀಕ್ಷೆಯಿಂದ ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿಯ ರಕ್ತದ ಕಲೆಗಳು ದೊರೆತಿವೆ. ಅದನ್ನು ರೇಣುಕಾಸ್ವಾಮಿಯ ಡಿಎನ್‌ಐಯೊಂದಿಗೆ ಪರೀಕ್ಷೆ ಮಾಡಿದಾಗ, ಅವರೆಡೂ ಸಹ ಹೊಂದಾಣಿಕೆಯಾಗಿದೆ. ದರ್ಶನ್ ಶೂನಲ್ಲಿ ಸಿಕ್ಕ ಮಣ್ಣು ಪಟ್ಟಣಗೆರೆ ಶೆಡ್‌ನ ಮಣ್ಣಿನ ಜೊತೆಗೆ ಶೇ.100ರಷ್ಟು ಹೊಂದಾಣಿಕೆಯಾಗಿದೆ ಎಂದರು.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬಂದವೇಳೆ ಆರೋಪಿಗಳು ಹಾಗೂ ಮೃತ ಒಂದೇ ಸ್ಥಳದಲ್ಲಿ ಇರುವ ಬಗ್ಗೆ ಮೊಬೈಲ್ ಟವರ್ ಸಾಕ್ಷ್ಯ ದೊರೆತಿವೆ. ಮೃತನೊಂದಿಗೆ ಆರೋಪಿಗಳು ದುರ್ಗಾಬಾರ್ ಗೆ ಹೋಗಿರುವ ಸಿಸಿಟಿವಿ ದೃಶ್ಯಗಳ ಲಭ್ಯವಾ ಗಿದೆ. ಆರೋಪಿಗಳೊಂದಿಗೆ ಮೃತನು ಇರುವ ಚಿತ್ರ ಪತ್ತೆಯಾಗಿದೆ. ಇನ್ನೂ ಜೆಡ್‌ನಲ್ಲಿ ಮೃತ ರೇಣುಕಾಸ್ವಾಮಿ, ದರ್ಶನ್, ಪವಿತ್ರಾಗೌಡ ಮತ್ತು ಇತರೆ ಆರೋ ಪಿಗಳು ಒಟ್ಟಿಗೆ ಇರುವುದು ಮೊಬೈಲ್ ಟವರ್ ಸಾಕ್ಷ್ಯದಿಂದ ದೃಢಪಟ್ಟಿದೆ. ರೇಣುಕಾಸ್ವಾಮಿಯನ್ನು ಅಪಹರಿಸಿ ಶೆಡ್‌ಗೆ ಕರೆತರುವವರೆಗೂ ಆರೋಪಿಗಳು ನಿರಂತರವಾಗಿ ಪೋನ್ ಸಂಪರ್ಕದಲ್ಲಿದ್ದರು. ಈ ಕುರಿತು ಫೋನ್ ಕಾಲ್ ದಾಖಲೆಗಳು ಲಭ್ಯವಾಗಿದೆ ಎಂದು ಎಸ್‌ಪಿಪಿ ವಿವರಿಸಿದರು.

ಫೆಬ್ರವರಿಯಲ್ಲಿಯೇ ಮೃತನು ಪವಿತ್ರಾ ಗೌಡ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಗೌತಮ್ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದ. ಆತನ ಸಂದೇಶವು ಆಕ್ಷೇಪಾರ್ಹವಾಗಿದ್ದರೆ, ಬ್ಲಾಕ್ ಮಾಡಬಹುದು. ಇಲ್ಲವೇ ಪೊಲೀಸರಿಗೆ ದೂರು ನೀಡಬಹುದಾಗಿತ್ತು. ಅದು ಬಿಟ್ಟು ಮೃತನಿಗೆ ತನ್ನ ನಂಬರ್ ನೀಡಿದ ಪವಿತ್ರಾ ಗೌಡ, ಆ ಮೊಬೈಲ್ ಫೋನ್ ಅನ್ನು ಪದನ್‌ಗೆ ನೀಡಿದ್ದಾರೆ.

ಆತ ಮೃತನೊಂದಿಗೆ ವಾಟ್ಸ್ ಆ್ಯಪ್ ಚಾಟ್ ಮಾಡಿದ್ದಾರೆ. ಅಂದರೆ ಪವಿತ್ರಾ ಗೌಡ ರೇಣುಕಾಸ್ವಾಮಿ ಅಪಹರಣ ಮಾಡಲು ಒಳಸಂಚು ರೂಪಿಸಿದ್ದಾರೆ. ಓರ್ವ ಆರೋಪಿ ಒಳಸಂಚು ರೂಪಿಸಿದರೆ, ಪ್ರಕರಣದ ಇತರೆ ಆರೋಪಿಗಳು ಸಹ ಆ ಉದ್ದೇಶ ಹೊಂದಿದ್ದರು ಎಂಬುದಾಗಿ ತೀರ್ಮಾನಿಸಲಾಗುತ್ತದೆ ಎಂದು ಪ್ರಸನ್ನಕುಮಾರ್ ವಾದ ಮಂಡಿಸಿದರು ಆರೋಪಿಗಳ ಕೃತ್ಯಕ್ಕೆ ಪ್ರತ್ಯಕ್ಷ ದರ್ಶಿಗಳು ಸಾಕ್ಷ್ಯ ನುಡಿದಿದ್ದಾರೆ. ಆರೋಪಿಗೆ ಜಾಮೀನು ನೀಡಬೇಕಾದ ಸಂದರ್ಭದಲ್ಲಿ ಆತ ಎಸಗಿರುವ ಕ್ರೌರ್ಯದ ಸ್ವರೂಪವನ್ನು ನ್ಯಾಯಾಲಯ ಪರಿಗಣಿಸಬೇಕಾಗುತ್ತದೆ ಎಂದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಗಡಿಪಾರಾಗಿ ಬಂದಿದ್ದ ರೌಡಿಶೀಟರ್ ಕೊಲೆ: ಐವರ ಬಂಧನ