ಅಮೆರಿಕದಲ್ಲಿ ನಾಪತ್ತೆಯಾಗಿದ್ದ ತುಮಕೂರಿನ ಸಾಕೇತ್‌ ಆತ್ಮ*ತ್ಯೆ ಶಂಕೆ : ನಡವಳಿಕೆಯು ಬದಲಾಗಿತ್ತು

Published : Feb 16, 2026, 07:56 AM IST
Saketh Srinivasayya

ಸಾರಾಂಶ

ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಬರ್ಕ್‌ಲೆಯ ಕ್ಯಾಲಿಫೋರ್ನಿಯಾ ವಿವಿಯ ವಿದ್ಯಾರ್ಥಿ ಸಾಕೇತ್‌ ಶ್ರೀನಿವಾಸಯ್ಯ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಬರ್ಕಲಿ ಹಿಲ್ಸ್‌ ಸಮೀಪದ ಅನ್ಜಾ ಕೆರೆಯಲ್ಲಿ ಸಾಕೇತ್‌ ಶವ ಪತ್ತೆಯಾಗಿದೆ ಎನ್ನಲಾಗಿದೆ.

ನ್ಯೂಯಾರ್ಕ್‌: ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಬರ್ಕ್‌ಲೆಯ ಕ್ಯಾಲಿಫೋರ್ನಿಯಾ ವಿವಿಯ ವಿದ್ಯಾರ್ಥಿ ಸಾಕೇತ್‌ ಶ್ರೀನಿವಾಸಯ್ಯ ಇದೀಗ ಶವವಾಗಿ ಪತ್ತೆಯಾಗಿದ್ದಾರೆ.

ಬರ್ಕಲಿ ಹಿಲ್ಸ್‌ ಸಮೀಪದ ಅನ್ಜಾ ಕೆರೆಯಲ್ಲಿ ಸಾಕೇತ್‌ ಶವ ಪತ್ತೆಯಾಗಿದೆ ಎನ್ನಲಾಗಿದೆ. ಸಾಕೇತ್‌ ಸಾವಿಗೆ ನಿಖರ ಕಾರಣ ಸ್ಪಷ್ಟವಾಗದಿದ್ದರೂ ಮಾನಸಿಕ ಒತ್ತಡದಿಂದ ಆತ್ಮ*ತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸಾಕೇತ್‌ ಸಾವನ್ನು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಖಚಿತಪಡಿಸಿದೆ.

ತಲೆಕೆಡಿಸಿಕೊಳ್ಳೋದನ್ನುಬಿಟ್ಟಿದ್ದೇನೆ ಅಂದಿದ್ದ ಸಾಕೇತ್‌!

‘ನಾನು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೇನೆ... ಯಾವುದರ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳಲ್ಲ’! ನಾಪತ್ತೆಗೂ ಕೆಲ ದಿನಗಳ ಮೊದಲು ಸಾಕೇತ್‌ ಹೇಳಿದ್ದ ಈ ಮಾತನ್ನು ಈಗ ಆತನ ಸಹಪಾಠಿ ಬನೀತ್‌ ಸಿಂಗ್‌ ನೆನಪಿಸಿಕೊಂಡಿದ್ದಾರೆ.

ಕಳೆದ ಕೆಲ ಸಮಯದಿಂದ ಆತನ ನಡವಳಿಕೆಯಲ್ಲಿ ಬದಲಾವಣೆಯಾಗಿತ್ತು. ಸಾಕೇತ್‌ ಮಾಮೂಲಿ ಊಟ ಕಡಿಮೆ ಮಾಡಿದ್ದ, ಸ್ನ್ಯಾಕ್ಸ್‌ ಅಷ್ಟೇ ತಿನ್ನುತ್ತಿದ್ದ. ಆಗ ನಾವು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಒಂದು ದಿನ ಸಾಕೇತ್‌ ತರಗತಿಯಿಂದ ವಾಪಸ್‌ ಬರುವಾಗ ಕೆಂಪು ಬಣ್ಣದ ಸ್ನಾನದ ನಿಲುವಂಗಿ ತೊಟ್ಟುಕೊಂಡಿದ್ದ. ನಾನು ಆಗ ಆತನನ್ನು ತಡೆದು ನಿಲ್ಲಿಸಿ ಈ ಬಗ್ಗೆ ಪ್ರಶ್ನಿಸಿದಾಗ, ‘ನಾನು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಟ್ಟಿದ್ದೇನೆ’ ಎಂದು ಹೇಳಿಕೊಂಡಿದ್ದ. ಆಗ ಆತನ ಈ ಹೇಳಿಕೆಯನ್ನು ನಾನು ಸಹಜವಾಗಿಯೇ ತೆಗೆದುಕೊಂಡಿದ್ದ. ಯಾಕೆಂದರೆ ಸಾಕೇತ್‌ ತಮಾಷೆಯ ಪ್ರವೃತ್ತಿಯ ವ್ಯಕ್ತಿಯಾಗಿದ್ದ ಎಂದು ಸಿಂಗ್‌ ಸ್ಮರಿಸಿದ್ದಾರೆ.

ಸಾಕೇತ್‌ ಮೃತದೇಹ ಪತ್ತೆ

ಸಾಕೇತ್‌ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಮ್ಮ ಅಧಿಕಾರಿಗಳು ಮೃತ ವಿದ್ಯಾರ್ಥಿಯ ಕುಟುಂಬದೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಮೃತದೇಹ ವಾಪಸ್‌ ತೆಗೆದುಕೊಂಡು ಹೋಗುವ ಪ್ರಕ್ರಿಯೆ ಮತ್ತು ಇತರೆ ವಿಚಾರಗಳಿಗಾಗಿ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿಯು ಎಕ್ಸ್ ಮೂಲಕ ತಿಳಿಸಿದೆ.

ತುಮಕೂರು ಮೂಲದ ಸಾಕೇತ್‌ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ಬೆಂಗಳೂರಿನ ಶ್ರೀವಾಣಿ ಎಜುಕೇಷನ್‌ ಸೆಂಟರ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದ ಸಾಕೇತ್‌ ಬಳಿಕ ಬೇಸ್‌ ಕಾಲೇಜಲ್ಲಿ ಪಿಯು, ಮದ್ರಾಸ್‌ ಐಐಟಿಯಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿ ಟೆಕ್‌ ಮುಗಿಸಿ ಅಮೆರಿಕಕ್ಕೆ ತೆರಳಿದ್ದರು. ‍

ಬರ್ಕ್‌ಲೆಯ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಮಾಸ್ಟರ್‌ ಆಫ್‌ ಸೈನ್ಸ್‌ ಪ್ರೋಗ್ರಾಂ ವಿದ್ಯಾರ್ಥಿಯಾಗಿ ಸಾಕೇತ್‌ ಶಿಕ್ಷಣ ಪಡೆಯುತ್ತಿದ್ದರು. ಪಾಸ್‌ಪೋರ್ಟ್‌, ಲ್ಯಾಪ್‌ಟಾಪ್‌ ಸಹಿತ ಸಾಕೇತ್‌ನ ಬ್ಯಾಕ್‌ಪ್ಯಾಕ್‌ ಬರ್ಕ್‌ಲೆ ಸಮೀಪದ ಪಾರ್ಕ್‌ ಹಿಲ್ಸ್‌ನಲ್ಲಿ ಕೆಲದಿನಗಳ ಹಿಂದೆ ಪತ್ತೆಯಾಗಿತ್ತು.

ಸಾಕೇತ್‌ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಉತ್ತಮ ಭವಿಷ್ಯದ ಕನಸು ಕಂಡಿದ್ದ. ಕಡೆಯ ಕೆಲ ದಿನಗಳಲ್ಲಿ ಕುಕ್ಕೀಸ್‌ ಮತ್ತು ಚಿಪ್ಸ್‌ ಬಿಟ್ಟರೆ ಬೇರೇನೂ ತಿಂದಿರಲಿಲ್ಲ ಎಂದು ಸಹಪಾಠಿಗಳು ಹೇಳಿಕೊಂಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಮತ್ತೊಂದು ಭೀಕರ ಅಪಘಾತಕ್ಕೆ 5 ಯುವಕರು ಬಲಿ
ಕೆಮಿಕಲ್ ಟ್ಯಾಂಕ್ ಸ್ಫೋಟ; ಇಬ್ಬರು ಕಾರ್ಮಿಕರು ಸಾವು