ಬೆಂಗಳೂರು : ಹಾಡಹಗಲೇ ದುಷ್ಕರ್ಮಿಯೊಬ್ಬ ಮನೆಯೊಂದಕ್ಕೆ ನುಗ್ಗಿ ಮಹಿಳೆಯ ಕತ್ತು ಹಿಸುಕಿ ಕೊಲೆಗೈದು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಗೇರಿ ಬಳಿಯ ಕೋನಸಂದ್ರ ನಿವಾಸಿ ದಿವ್ಯಾ(36) ಕೊಲೆಯಾದ ದುರ್ದೈವಿ. ಶುಕ್ರವಾರ ಮಧ್ಯಾಹ್ನ 1ಗಂಟೆಯಿಂದ 2 ಗಂಟೆ ನಡುವೆ ಈ ಕೃತ್ಯ ನಡೆದಿದೆ. ಮೃತಳ ಪತಿ ಗುರುಮೂರ್ತಿ ಮಧ್ಯಾಹ್ನ ಪತ್ನಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುಮೂರ್ತಿ ಮತ್ತು ದಿವ್ಯಾ ದಂಪತಿಗೆ ಎರಡು ವರ್ಷದ ಮಗುವಿದೆ. ಗುರುಮೂರ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ದಿವ್ಯಾ ಮಗುವನ್ನು ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದರು. ಮಧ್ಯಾಹ್ನ ಗುರುಮೂರ್ತಿ ಪತ್ನಿ ದಿವ್ಯಾಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ದಿವ್ಯಾ ಕೊಲೆಯಾಗಿರುವುದು ಗೊತ್ತಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ದಿವ್ಯಾ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಯು ಮನೆಯಲ್ಲಿ ದಿವ್ಯಾ ಒಬ್ಬಳೇ ಇರುವುದರ ಬಗ್ಗೆ ತಿಳಿದುಕೊಂಡು ಕೃತ್ಯ ಎಸೆಗಿರುವ ಸಾಧ್ಯತೆಯಿದೆ. ಕೊಲೆ ಬಳಿಕ ದುಷ್ಕರ್ಮಿಯ ದಿವ್ಯಾ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ದುಷ್ಕರ್ಮಿಯು ಕಳ್ಳತನಕ್ಕೆ ಬಂದು ಕೊಲೆ ಮಾಡಿದನೇ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ. ಸದ್ಯಕ್ಕೆ ದುಷ್ಕರ್ಮಿಯ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಗು ಮಲಗಿತ್ತು:
ಮನೆಯಲ್ಲಿ ದಿವ್ಯಾ ಮತ್ತು ಎರಡು ವರ್ಷದ ಮಗುವಿತ್ತು. ದುಷ್ಕರ್ಮಿಯು ಮನೆ ನುಗ್ಗಿ ದಿವ್ಯಾಳ ಕೊಲೆ ಮಾಡುವಾಗ ಮಗು ನಿದ್ದೆಯಲ್ಲಿತ್ತು. ತಂದೆ ಗುರುಮೂರ್ತಿ ಮನೆಗೆ ಬಂದಾಗಲೂ ಮಗು ಮಲಗ್ಗಿತ್ತು. ಆದರೆ, ದಿವ್ಯಾ ಕೊಲೆಯಾಗಿದ್ದರು.