ರಾಜ್ಯದಲ್ಲಿ ಬಿಎನ್‌ಎಸ್‌ಎಸ್‌ ಅಡಿ ದಾಖಲಾದ ಮೊದಲ ಎಫ್‌ಐಆರ್‌ ರದ್ದು - ರಾಯಚೂರು ಆಸ್ಪತ್ರೆ ನೌಕರ ಮೇಲೆ ನರ್ಸ್‌ ದಾಖಲಿಸಿದ್ದ ಕೇಸ್‌

ಸಾರಾಂಶ

‘ಭಾರತೀಯ ನಾಗರಿಕ ಸುರಕ್ಷ ಸಂಹಿತೆ’-2023 (ಬಿಎನ್‌ಎಸ್‌ಎಸ್) ಜಾರಿಗೆ ಬಂದ 2024ರ ಜು.1ರಂದೇ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಹಿಂದಿನ ‘ಅಪರಾಧ ಪ್ರಕ್ರಿಯಾ ಸಂಹಿತೆ’ (ಸಿಆರ್‌ಪಿಸಿ) ಅಡಿಯಲ್ಲಿ ದಾಖಲಿಸಿದ ಎಫ್‌ಐಆರ್ ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು : ‘ಭಾರತೀಯ ನಾಗರಿಕ ಸುರಕ್ಷ ಸಂಹಿತೆ’-2023 (ಬಿಎನ್‌ಎಸ್‌ಎಸ್) ಜಾರಿಗೆ ಬಂದ 2024ರ ಜು.1ರಂದೇ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಹಿಂದಿನ ‘ಅಪರಾಧ ಪ್ರಕ್ರಿಯಾ ಸಂಹಿತೆ’ (ಸಿಆರ್‌ಪಿಸಿ) ಅಡಿಯಲ್ಲಿ ದಾಖಲಿಸಿದ ಎಫ್‌ಐಆರ್ ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ 2024ರ ಜು.1ರಂದು ತಮ್ಮ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ, ವಂಚನೆ ಆರೋಪದ ಸಂಬಂಧ ದಾಖಲಾಗಿರುವ ಎಫ್‌ಐಆರ್‌ ಮತ್ತು ಆ ಕುರಿತು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಅರುಣ್ ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಆರ್. ನಟರಾಜನ್ ಅವರ ಪೀಠ, ಸಿಆರ್‌ಪಿಸಿ ಬದಲಾಗಿ ಬಿಎನ್‌ಎಸ್‌ಎಸ್ 2024ರ ಜು.1ರಂದು ಜಾರಿಗೆ ಬಂದಿದೆ. ಅಂದೇ ಅರ್ಜಿದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ, ಹಿಂದಿನ ಸಿಆರ್‌ಪಿಸಿ ಸೆಕ್ಷನ್‌ 154 ಅಡಿ ದೂರುದಾರರ ಹೇಳಿಕೆ ದಾಖಲಿಸಿಕೊಂಡು ಅದರ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಬಿಎನ್‌ಎಸ್‌ಎಸ್‌ ಜಾರಿಗೆ ಬಂದ ನಂತರವೂ ಹಿಂದಿನ ಸಿಆರ್‌ಪಿಸಿ ಅಡಿ ಎಫ್‌ಐರ್‌ ದಾಖಲಿಸುವುದನ್ನು ಅನುಮತಿಸಲಾಗದು. ಅದರಂತೆ ಅರ್ಜಿದಾರರ ವಿರುದ್ಧ ಎಫ್‌ಐಆರ್‌ ರದ್ದುಪಡಿಸಲಾಗುತ್ತಿದೆ ಎಂದು ಆದೇಶಿಸಿದೆ.

Share this article