ಪ್ರಿಯಕರನ ಮೋಜುಮಸ್ತಿಗೆ ಚಿಕ್ಕಪ್ಪನ ಮನೆಯಲ್ಲಿ ಕಳ್ಳತನ

KannadaprabhaNewsNetwork |  
Published : Jul 30, 2025, 02:02 AM IST
ಗೋಲ್ಡ್‌ | Kannada Prabha

ಸಾರಾಂಶ

ಪ್ರಿಯಕರನ ಮೋಜು ಮಸ್ತಿಗಾಗಿ ಚಿಕ್ಕಪ್ಪನ ಮನೆಯಲ್ಲಿ ಚಿನ್ನಾಭರಣ ಕದ್ದ ವಿದ್ಯಾರ್ಥಿನಿ ಆಕೆಗೆ ಸಾಥ್‌ ನೀಡಿದ ಇಬ್ಬರು ಸ್ನೇಹಿತರು ಜೈಲು ಸೇರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಪ್ರಿಯಕರನ ಮೋಜಿನ ಜೀವನಕ್ಕೆ ಚಿಕ್ಕಪ್ಪನ ಮನೆಯಲ್ಲಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕದ್ದು ಕೊಟ್ಟಿದ್ದ ಬಿಕಾಂ ವಿದ್ಯಾರ್ಥಿ ಹಾಗೂ ಆಕೆಯ ಮೂವರು ಸ್ನೇಹಿತರು ಕೊತ್ತನೂರು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೈರತಿ ನಿವಾಸಿಗಳಾದ ಸಚಿತಾ, ಆಕೆಯ ಪ್ರಿಯಕರ ಯಶವಂತ್, ಸ್ನೇಹಿತರಾದ ತನುಷ್, ಎಲ್‌ಎಲ್‌ಬಿ ವಿದ್ಯಾರ್ಥಿ ರಾಮ್‌ ಪ್ರಕಾಶ್ ಬಂಧಿತರಾಗಿದ್ದು, ಆರೋಪಿಗಳಿಂದ 65 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ 10 ಲಕ್ಷ ರು. ನಗದು ಜಪ್ತಿಯಾಗಿದೆ. ಕೆಲ ದಿನಗಳ ಹಿಂದೆ ತಮ್ಮ ಮನೆಯ ಲಾಕರ್‌ನಲ್ಲಿಟ್ಟಿದ್ದ ಒಂದು ಕೆಜಿ ಆಭರಣ ಕಳ್ಳತನವಾಗಿದೆ ಎಂದು ಕೊತ್ತನೂರು ಪೊಲೀಸರಿಗೆ ಸಚಿತಾ ಚಿಕ್ಕಪ್ಪ ಬಿ.ಎನ್‌.ಶ್ರೀನಿವಾಸ್ ದೂರು ಕೊಟ್ಟಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, ಶಂಕೆ ಮೇರೆಗೆ ಸಚಿತಾಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೊನೆಗೆ ಚಿನ್ನದ ಕಳ್ಳತನ ಬಯಲಾಗಿದೆ.

ವಿದ್ಯಾರ್ಥಿಗಳ ಮೋಜಿನ ಜೀವನ

ಖಾಸಗಿ ಕಾಲೇಜಿನಲ್ಲಿ ಸಚಿತಾ, ತನುಷ್‌ ಹಾಗೂ ಯಶವಂತ್ ಪದವಿ ವಿದ್ಯಾರ್ಥಿಗಳಾಗಿದ್ದರೆ, ರಾಮ್‌ ಪ್ರಸಾದ್ ಎಲ್‌ಎಲ್‌ಬಿ ಓದುತ್ತಿದ್ದ. ಮೋಜಿನ ಜೀವನಕ್ಕೆ ವ್ಯಾಮೋಹಗೊಂಡ ಈ ವಿದ್ಯಾರ್ಥಿಗಳು ತಮ್ಮ ಶೋಕಿಗೆ ಹಣಕ್ಕೆ ಪರದಾಡುತ್ತಿದ್ದರು. ಆಗ ಸಚಿತಾಳ ಚಿಕ್ಕಪ್ಪ ಆರ್ಥಿಕ ಸ್ಥಿತಿಗತಿ ಬಗ್ಗೆ ತಿಳಿದಿದ್ದ ಆಕೆಯ ಪ್ರಿಯಕರ ಯಶವಂತ್‌, ಚಿಕ್ಕಪ್ಪನ ಮನೆಯಲ್ಲಿ ಚಿನ್ನ ಹಾಗೂ ಹಣ ಕಳ್ಳತನಕ್ಕೆ ಪ್ರಚೋದನೆ ನೀಡಿದ್ದ. ಕೊನೆಗೆ ಪ್ರಿಯಕರನ ಮಾತಿಗೆ ಮರುಳಾಗಿ ಆಕೆ ಕಳ್ಳತನಕ್ಕಿಳಿದಿದ್ದಳು ಎನ್ನಲಾಗಿದೆ.

ಅಂತೆಯೇ ಆಕೆ ಆರು ತಿಂಗಳ ಅವಧಿಯಲ್ಲಿ ಸ್ಪಲ್ಪ ಸ್ಪಲ್ಪವೇ ಚಿನ್ನ ಕದ್ದು ಪ್ರಿಯಕರನಿಗೆ ಕೊಟ್ಟಿದ್ದಳು. ಈ ಚಿನ್ನವನ್ನು ಕರಗಿಸಿ ಸ್ನೇಹಿತರ ಜತೆ ಆತ ಮಜಾ ಮಾಡಿದ್ದ. ಕೊನೆಗೆ ಮನೆಯ ಲಾಕರ್‌ನಲ್ಲಿ ಚಿನ್ನ ಕಳ್ಳತನ ಬಗ್ಗೆ ಕೊತ್ತನೂರು ಠಾಣೆಗೆ ಅವರ ಚಿಕ್ಕಪ್ಪ ದೂರು ಕೊಟ್ಟಿದ್ದರು. ಆ ದೂರಿನಲ್ಲಿ ತಮ್ಮ ಮನೆಯ ಇಬ್ಬರು ಕೆಲಸಗಾರರ ಮೇಲೆ ಅವರು ಶಂಕೆ ವ್ಯಕ್ತಪಡಿಸಿದ್ದರು.

ಈ ಅನುಮಾನ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಮನೆಯ ಕೆಲಸಗಾರರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ದೋಷಮುಕ್ತರಾದರು. ಆಗ ದೂರುದಾರರ ಮನೆಗೆ ಬಂದು ಹೋಗುವವರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದರು. ಈ ವೇಳೆ ಸಚಿತಾಳ ನಡವಳಿಕೆ ಮೇಲೆ ಪೊಲೀಸರಿಗೆ ಗುಮಾನಿ ಬಂದಿದೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮೂಲಗಳು ಹೇಳಿವೆ.

ಗೋವಾದಲ್ಲಿ ಮೋಜು ಮಸ್ತಿ

ಕಳ್ಳತನದ ಹಣದಲ್ಲಿ ಗೋವಾಕ್ಕೆ ಹೋಗಿ ಸಚಿತಾಳ ಸ್ನೇಹಿತರು ಮೋಜು ಮಸ್ತಿ ಮಾಡಿದ್ದರು. ಚಿನ್ನದ ವಿಲೇವಾರಿಯಲ್ಲಿ ಯಶವಂತ್‌ಗೆ ಆತನ ಸ್ನೇಹಿತರ ನೆರವು ಸಿಕ್ಕಿತು ಎಂದು ಪೊಲೀಸರು ತಿಳಿಸಿದ್ದಾರೆ.

ದತ್ತು ಮಗಳ ತಂದ ಸಂಕಟ: ದೂರುದಾರ ಶ್ರೀನಿವಾಸ್ ಅವರ ಹಿರಿಯ ಸೋದರನಿಗೆ ಸಂತಾನ ಇರಲಿಲ್ಲ. ಈ ಕಾರಣಕ್ಕೆ ಅನಾಥಾಶ್ರಮದಲ್ಲಿ ಸಚಿತಾಳನ್ನು ಅವರು ದತ್ತು ಪಡೆದಿದ್ದರು. ಈಗ ಕಳ್ಳತನ ಪ್ರಕರಣದಲ್ಲಿ ಆಕೆ ಜೈಲು ಸೇರಿದ್ದು ಆಕೆಯ ಪೋಷಕರಿಗೆ ಹೆಚ್ಚು ಸಂಕಟ ತಂದಿದೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

ಡ್ರಗ್ಸ್ ನಂಟು: ಇನ್ಸ್‌ಪೆಕ್ಟರ್ ಸೇರಿ 11 ಪೊಲೀಸ್‌ ಸಸ್ಪೆಂಡ್‌
ದುಷ್ಕರ್ಮಿಗಳಿಂದ ಯುವಕನ ಕೊಲೆ; ಪೊಲೀಸರಿಂದ ಸಹೋದರನ ವಿಚಾರಣೆ