ಐಷಾರಾಮಿ ವಿಲ್ಲಾಗಳಲ್ಲಿ ರುಚಿಕಟ್ಟಾದ ಊಟ ಮಾಡಿ ಕಳವು: ₹21 ಲಕ್ಷ ಮೌಲ್ಯದ ವಸ್ತುಗಳೊಂದಿಗೆ ಕಳ್ಳನ ಬಂಧನ

KannadaprabhaNewsNetwork |  
Published : Sep 24, 2024, 01:51 AM ISTUpdated : Sep 24, 2024, 06:25 AM IST
arrest

ಸಾರಾಂಶ

ಬೆಂಗಳೂರಿನಲ್ಲಿ ರಾತ್ರಿ ವೇಳೆ ಐಷಾರಾಮಿ ವಿಲ್ಲಾಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ₹21 ಲಕ್ಷ ಮೌಲ್ಯದ ಚಿನ್ನಾಭರಣ, ವಾಚ್‌ಗಳು, ಡಾಲರ್‌ ಮತ್ತು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.  

 ಬೆಂಗಳೂರು : ರಾತ್ರಿ ವೇಳೆ ಐಷಾರಾಮಿ ವಿಲ್ಲಾಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ ₹21 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣ, ವಿವಿಧ ಕಂಪನಿಗಳ 32 ವಾಚ್‌ಗಳು, 3,900 ಅಮೇರಿಕನ್‌ ಡಾಲರ್‌ ಹಾಗೂ 5 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ತ್ರಿಪುರಾ ಮೂಲದ ಅಮಿತ್‌ ದೇಬಾರಿಯಾ(22) ಬಂಧಿತ ಆರೋಪಿ.

ಇತ್ತೀಚೆಗೆ ಕೆ.ನಾರಾಯಣಪುರದ ವಿಲ್ಲಾ ನಿವಾಸಿಯೊಬ್ಬರು ರಾತ್ರಿ ಮನೆ ಬಾಗಿಲು ಹಾಕಿದ್ದು, ಮಹಡಿಯ ಬಾಗಿಲು ಹಾಕುವುದನ್ನು ಮರೆತು ನಿದ್ದೆಗೆ ಜಾರಿದ್ದರು. ತಮ್ಮ ವಾಚ್‌, ಮೊಬೈಲ್‌, ಪರ್ಸ್‌ ಊಟದ ಟೇಬಲ್‌ ಮೇಲೆ ಇರಿಸಿದ್ದರು. ಮಾರನೇ ದಿನ ಬೆಳಗ್ಗೆ ಪರ್ಸ್‌, ವಾಚ್ ಕಳುವಾಗಿರುವುದು ಗೊತ್ತಾಗಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವು ಹಾಗೂ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಕೊತ್ತನೂರು ಸಮೀಪದ ಗುಬ್ಬಿ ಕ್ರಾಸ್‌ ಬಳಿ ಆರೋಪಿಯನ್ನು 1 ವಾಚ್‌, 1 ಮೊಬೈಲ್‌ ಹಾಗೂ 1900 ಅಮೇರಿಕನ್‌ ಡಾಲರ್‌ ಸಹಿತ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಯು ವಿಲ್ಲಾದಲ್ಲಿ ಕಳ್ಳತನ ಮಾಡಿರುವುದು ಹಾಗೂ ನಗರದ ವಿವಿಧೆಡೆ ಐಷಾರಾಮಿ ವಿಲ್ಲಾಗಳಲ್ಲಿ ಕಳವು ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕಳವು ಮಾಲು:

ಅಮಿತ್‌ ಹೆಚ್ಚಿನ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಹನುಮಂತನಗರದ ಬಿಳಿಶಿವಾಲೆಯ ಗ್ರಾಮದ ನಿರ್ಮಾಣ ಹಂತದ ಕಟ್ಟಡದಲ್ಲಿ ಇರಿಸಿದ್ದ 31 ವಾಚ್‌ಗಳು ಹಾಗೂ 4 ಮೊಬೈಲ್ ಜಪ್ತಿ ಮಾಡಲಾಗಿದೆ. ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಬಚ್ಚಿಟ್ಟಿದ್ದ 125 ಗ್ರಾಂ ಚಿನ್ನಾಭರಣ, 1 ವಾಚ್‌ ಹಾಗೂ 2 ಸಾವಿರ ಅಮೇರಿಕನ್‌ ಡಾಲರ್‌ ಜಪ್ತಿ ಮಾಡಲಾಗಿದೆ. ಅಂತೆಯೇ ಆಟೋ ಚಾಲಕನಿಗೆ ಮಾರಾಟ ಮಾಡಿದ್ದ 45 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

9 ಕಳವು ಪ್ರಕರಣ ಪತ್ತೆ:

ಆರೋಪಿಯ ಬಂಧನದಿಂದ ಕೊತ್ತನೂರು ಠಾಣೆ 4 ಮನೆಗಳವು, ಯಲಹಂಕ, ಚಿಕ್ಕಜಾಲ ತಲಾ 2 ಮನೆಗಳವು, ಬಾಗಲೂರು 1 ಮನೆಗಳವು ಸೇರಿದಂತೆ ಒಟ್ಟು 9 ಮನೆಗಳವು ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಆರೋಪಿ ಅಮಿತ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ತ್ರಿಪುರಾ ಮೂಲದ ಆದಿವಾಸಿ

ತ್ರಿಪುರಾ ಮೂಲದ ಆರೋಪಿ ಅಮಿತ್‌ ಆದಿವಾಸಿ ಸಮುದಾಯಕ್ಕೆ ಸೇರಿದ್ದಾನೆ. ಏಳು ವರ್ಷದ ಹಿಂದೆ ನಗರಕ್ಕೆ ಬಂದು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಕೊತ್ತನೂರಿನಲ್ಲಿ ನೀರಿನ ಟ್ಯಾಂಕರ್‌ನಲ್ಲಿ ನೀರು ತುಂಬಿಸುವ ಕೆಲಸ ಮಾಡುತ್ತಿದ್ದ. ಈತನಿಗೆ ಯಾವುದೇ ಮನೆ ಇಲ್ಲ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ರಾತ್ರಿ ವೇಳೆ ತಂಗುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ರುಚಿಕಟ್ಟಾದ ಊಟಕ್ಕಾಗಿ ವಿಲ್ಲಾಗಳಿಗೆ ನುಗ್ಗುತ್ತಿದ್ದ!:

ಆರೋಪಿ ಅಮಿತ್‌ ರುಚಿಕಟ್ಟಾದ ಊಟಕ್ಕಾಗಿ ವಿಲ್ಲಾಗಳಿಗೆ ರಾತ್ರಿ ವೇಳೆ ನುಗ್ಗುತ್ತಿದ್ದ. ಅಡುಗೆ ಮನೆಗೆ ತೆರಳಿ ಹೊಟ್ಟೆ ತುಂಬಾ ಊಟ ಮಾಡಿ ಬಳಿಕ ಕೈಗೆ ಸಿಕ್ಕ ಬೆಲೆಬಾಳುವ ವಸ್ತುಗಳು, ನಗದು, ಚಿನ್ನಾಭರಣ ಕಳವು ಮಾಡುತ್ತಿದ್ದ. ಆದಿವಾಸಿ ಸಮುದಾಯಕ್ಕೆ ಸೇರಿರುವುದರಿಂದ ಸುಲಭವಾಗಿ ಮರ ಏರುವುದು, ಗೋಡೆ ಹತ್ತುವುದು ಕರಗತವಾಗಿದೆ. ಹೀಗಾಗಿ ವಿಲ್ಲಾಗಳನ್ನೇ ಟಾರ್ಗೆಟ್‌ ಮಾಡಿ ರಾತ್ರಿ ವೇಳೆ ನುಗ್ಗಿ ಕಳವು ಮಾಡಿ ಪರಾರಿಯಾಗುತ್ತಿದ್ದ. ಕದ್ದ ಮಾಲುಗಳನ್ನು ನಿರ್ಮಾಣ ಹಂತದ ಕಟ್ಟಡಗಳಲ್ಲಿ ಬಚ್ಚಿಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಡ್ರಗ್ಸ್ ನಂಟು: ಇನ್ಸ್‌ಪೆಕ್ಟರ್ ಸೇರಿ 11 ಪೊಲೀಸ್‌ ಸಸ್ಪೆಂಡ್‌
ದುಷ್ಕರ್ಮಿಗಳಿಂದ ಯುವಕನ ಕೊಲೆ; ಪೊಲೀಸರಿಂದ ಸಹೋದರನ ವಿಚಾರಣೆ