;Resize=(412,232))
ಬೆಂಗಳೂರು : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಮತ್ತಿತರರು ರೂಪಿಸಿದ ಷಡ್ಯಂತ್ರದ ಒಟ್ಟು ಬಜೆಟ್ ₹200 ಕೋಟಿ ಆಗಿದ್ದು, ಈ ಷಡ್ಯಂತ್ರದಲ್ಲಿ ಸಹಕರಿಸಿದರೆ ನನಗೆ ₹50 ಲಕ್ಷ ನೀಡುವುದಾಗಿ ತಿಮರೊಡಿಯಿಂದ ಭರವಸೆ ದೊರಕಿತ್ತು. ಪ್ರಕಾಶ್ ರಾಜ್ ಎಂಬುವರು ದೂರವಾಣಿಯಲ್ಲಿ ಮಾತನಾಡಿ, ಒಂದು ದಿನ ನನ್ನನ್ನು ಅಪ್ಪಿಕೊಳ್ಳುವುದಾಗಿ ಹೇಳಿದ್ದರು.
ಇವು ‘ಮಾಸ್ಕ್ ಮ್ಯಾನ್’ ಸಿ.ಎನ್.ಚಿನ್ನ (ಚಿನ್ನಯ್ಯ) ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ನೀಡಿರುವ ವಿವರಗಳು. ಬುರುಡೆ ಪ್ರಕರಣ ಹೇಗೆ ರೂಪಿಸಲಾಯಿತು, ತನಗೆ ಯಾವ ಆಮಿಷ ಒಡ್ಡಲಾಯಿತು, ಒಪ್ಪದೇ ಇದ್ದಾಗ ಬೆದರಿಕೆ ಹಾಕಿದವರು ಯಾರು, ಎಲ್ಲೆಲ್ಲಿ ಕರೆದುಕೊಂಡು ಹೋಗಿ ಯಾವ ರೀತಿ ಹೇಳಿಕೆ ನೀಡಬೇಕು ಎಂದು ತಿಳಿಸಿದರು, ನೀಡಿದ ಹಣಕಾಸಿನ ವಿವರ ಸೇರಿದಂತೆ ಹಲವಾರು ಅಂಶಗಳನ್ನು ಎಳೆ ಎಳೆಯಾಗಿ ಚಿನ್ನಯ್ಯ ಅರ್ಜಿಯಲ್ಲಿ ವಿವರಿಸಿದ್ದಾರೆ.
ನಾನು ಮತ್ತು ಎರಡನೇ ಪತ್ನಿ ಮಲ್ಲಿಕಾ ಅವರು 1980 ರಿಂದ 2014 ರವರೆಗೆ ಧರ್ಮಸ್ಥಳದಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು. 2014ನೇ ಸಾಲಿನಲ್ಲಿ ನನ್ನ ಸ್ವಂತ ಗ್ರಾಮವಾದ ಮಂಡ್ಯ ತಾಲೂಕಿನ ಕೆರಗೋಡು ಹೋಬಳಿಯ ಚಿಕ್ಕಬಳ್ಳಿಗೆ ಮರಳಿ ಬಂದು ಸುಮಾರು ಒಂದೂವರೆ ವರ್ಷ ಅಲ್ಲಿ ವಾಸಿಸತೊಡಗಿದ್ದೆ. ಆದಾಯದ ಇಲ್ಲದಕ್ಕೆ ತಮಿಳುನಾಡಿನ ಸತ್ಯಮಂಗಲಂನ ಚಿಕ್ಕರಾಸನ್ ಪಾಳ್ಯದಲ್ಲಿರುವ ಪಿತ್ರಾರ್ಜಿತ ಅಸ್ತಿಯಿದ್ದ ಸ್ಥಳಕ್ಕೆ ತೆರಳಿ ಸುಮಾರು ಹತ್ತು ವರ್ಷ ವಾಸವಿದ್ದೆ. ಕೆ.ಪಿ.ಆರ್ ಮಿಲ್ನಲ್ಲಿ ಉದ್ಯೋಗದಲ್ಲಿದ್ದೆ. 2023–24ನೇ ಸಾಲಿನಲ್ಲಿ ಉಜಿರೆ ಗ್ರಾಮ ಪಂಚಾಯಿತಿನಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಕೆಲಸಕ್ಕೆ ಸೇರಿದೆ.
ಹೀಗೆ ಕೆಲಸದಲ್ಲಿದ್ದಾಗ, ಒಂದು ದಿನ ಸೌಜನ್ಯಾಳ ಫೋಟೋ ಹಿಡಿದು ಬಂದ ವಿಠ್ಠಲ್ ಗೌಡ, ನನ್ನನ್ನು ಗುರುತಿಸಿ ಮಾತನಾಡಿಸಿದ. ನಂತರ ವಿಠ್ಠಲ್ ಗೌಡ ಕೆಲವು ಕೆಲಸ ಇದೆ ಎಂದು ತಿಳಿಸಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ನನ್ನ ಹಾಗೂ ಪತ್ನಿಯನ್ನು ಕರೆದುಕೊಂಡು ಹೋಗಿ ಪರಿಚಯಿಸಿದರು. ನಂತರ ಗಣೇಶ್ ಎಂಬ ವ್ಯಕ್ತಿ ನನ್ನ ಮತ್ತು ಪತ್ನಿಯ ಫೋಟೋ ತೆಗೆದರು. ಮಹೇಶ್ ಶೆಟ್ಟಿ ತಿಮರೋಡಿ ಅವರಲ್ಲಿ ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ದಹನ ಮಾಡಲಾಗಿದೆ ಮತ್ತು ಅಲ್ಲಿ ಸಾವಿರಾರು ಶವಗಳಿವೆ ಎಂದು ಹೇಳುವಂತೆ ನನಗೆ ವಿಠಲ ಗೌಡ ಸೂಚಿಸಿದರು.
ಅಲ್ಲಿಂದ ಹೊರಟಾಗ ಮಹೇಶ್ ಶೆಟ್ಟಿ ತಿಮರೋಡಿ ನನಗೆ ₹500 ನೋಟುಗಳ ಕಂತೆಯೊಂದನ್ನು ನೀಡಿದರು. ಆದರೆ ಸ್ವೀಕರಿಸಲು ನಿರಾಕರಿಸಿದೆ. ತದನಂತರ ನಾನು ತಮಿಳುನಾಡಿನ ಸತ್ಯಮಂಗಲಂಗೆ ಹಿಂದಿರುಗಿದೆ. ಸುಮಾರು ಆರು ತಿಂಗಳ ನಂತರ ತಿಮರೋಡಿ ನನಗೆ ಕರೆ ಮಾಡಿ, ವಿಧಾನಸೌಧದಲ್ಲಿ ಬಾಂಬ್ ಇಟ್ಟ ವ್ಯಕ್ತಿಗಳನ್ನು ಪರಿಚಯಿಸುತ್ತೇವೆ ಎಂದು ತಿಳಿಸಿ ಮಂಡ್ಯಕ್ಕೆ ಬರುವಂತೆ ಸೂಚಿಸಿದರು. ಪತ್ನಿಯ ಬ್ಯಾಂಕ್ ಖಾತೆಗೆ ₹5000 ವರ್ಗಾಯಿಸಿದರು. ಅದರಂತೆ ಮಂಡ್ಯಕ್ಕೆ ತೆರಳಿದೆ ಎಂದು ಚಿನ್ನಯ್ಯ ಅರ್ಜಿಯಲ್ಲಿ ವಿವರಿಸಿದ್ದಾರೆ.
ಮಂಡ್ಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ, ಗಣೇಶ್ ಮತ್ತು ಇತರ ಇಬ್ಬರು ವ್ಯಕ್ತಿಗಳಿದ್ದರು. ಗಿರೀಶ್ ಮಟ್ಟಣ್ಣವರ್ ಅವರು ಧರ್ಮಸ್ಥಳದಲ್ಲಿ ಶವಗಳನ್ನು ಸಮಾಧಿ ಮಾಡಲಾಗಿದೆ ಎಂದು ಆರೋಪಿಸಲಾದ ಸ್ಥಳಗಳ ಬಗ್ಗೆ ನನ್ನನ್ನು ಪ್ರಶ್ನಿಸಿದರು. ತದನಂತರ, ವಿಠ್ಠಲ್ ಗೌಡ ನನಗೆ ಬಂಗಲೆಗುಡ್ಡ ಮತ್ತು ವಿಠ್ಠಲ್ ಗೌಡ ಅವರ ಕಚೇರಿ ಸಮೀಪ ಶವಗಳನ್ನು ಸಮಾಧಿ ಮಾಡಲಾಗಿದೆ ಎನ್ನಲಾದ ಸ್ಥಳಗಳನ್ನು ಗುರುತಿಸುವಂತೆ ಪದೇ ಪದೇ ಕೋರಿದರು. ಇಂತಹ ಕೋರಿಕೆಗಳ ಉದ್ದೇಶವೇನೆಂದು ನಾನು ವಿಚಾರಿಸಿದಾಗ, ಮಹೇಶ್ ಶೆಟ್ಟಿ ತಿಮರೋಡಿ ನನಗೆ ತರಾಟೆಗೆ ತೆಗೆದುಕೊಂಡು, ಪ್ರಶ್ನೆ ಕೇಳದೆ ಅವರ ಸೂಚನೆಗಳನ್ನು ಪಾಲಿಸುವಂತೆ ಆಜ್ಞಾಪಿಸಿದರು.
ಜಯಂತ್ ಮನೆಯಲ್ಲಿ ಬುರುಡೆ:
ಕೆಲ ಸಮಯದ ನಂತರ ಗಿರೀಶ್ ಮಟ್ಟಣ್ಣವರ್ ನನ್ನನ್ನು ಕೇರಳದ ಕಾನತ್ತೂರು ದೇವಸ್ಥಾನಕ್ಕೆ ಕರೆದೊಯ್ದರು, ಅಲ್ಲಿ ಆದಿತ್ಯ ಕಿರಣ್ ಎಂಬ ಯೂಟ್ಯೂಬರ್ಗೆ ಪರಿಚಯಿಸಿದರು. ನಂತರ ಕೇರಳದ ಕಣ್ಣೂರಿಗೆ, ಅಲ್ಲಿಂದ ತಮಿಳುನಾಡಿನ ಕೊಯಮತ್ತೂರಿಗೆ ಕಳುಹಿಸಿದರು. ಸುಮಾರು ಹದಿನೈದು ದಿನಗಳ ನಂತರ, ಮಹೇಶ್ ಶೆಟ್ಟಿ ತಿಮರೋಡಿ, ಕರೆ ಮಾಡಿ ನನ್ನ ಖಾತೆಗೆ ₹15000 ಜಮೆ ಮಾಡಿರುವುದಾಗಿ ತಿಳಿಸಿ, ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬರಲು ಸೂಚಿಸಿದರು.
ಬೆಂಗಳೂರಿಗೆ ತೆರಳಿದಾಗ ಜಯಂತ್ ಎಂಬ ವ್ಯಕ್ತಿ ತಮ್ಮ ಮನೆಗೆ ನನ್ನನ್ನು ಕರೆದೊಯ್ಯರು. ಜಯಂತ್ ಅವರ ಸೂಚನೆಯಂತೆ ಕೆಲವು ಸಂಗತಿಗಳನ್ನು ನಿರೂಪಿಸಲು ಹೇಳಿದರು. ಜಯಂತ್ ಅವರ ಮಗಳು ಅದನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಿದಳು. ವಿಡಿಯೋ ಮಾಡುವ ಅಗತ್ಯವೇನೆಂದು ಅರ್ಜಿದಾರರು ಕೇಳಿದಾಗ, ಜಯಂತ್ ಅವರು ಅಪಾಯದ ಸಂದರ್ಭದಲ್ಲಿ ವಿಡಿಯೋವನ್ನು ರಾಜೇಶ್ ಎಂಬ ವ್ಯಕ್ತಿಗೆ ನೀಡಲಾಗುವುದು ಎಂದು ಉತ್ತರಿಸಿದರು. ಬಳಿಕ ಜಯಂತ್ ನನ್ನನ್ನು ಮನೆಯ ಮೇಲಿನ ಮಹಡಿಗೆ ಕರೆದೊಯ್ದು, ಒಂದು ಪೆಟ್ಟಿಗೆ ತಂದು, ನೆಲದ ಮೇಲೆ ಅಯ್ಯಪ್ಪ ಸ್ವಾಮಿ ಟವಲ್ ಹಾಸಿ, ಅದರ ಮೇಲೆ ಒಂದು ಮಾನವ ತಲೆಬುರುಡೆ, ಸ್ವಲ್ಪ ಮಣ್ಣು ಮತ್ತು ಅರ್ಧ ತುಂಬಿದ ನೀರಿನ ಬಾಟಲಿ ಇರಿಸಿದರು. ಜಯಂತ್ ತಲೆಬುರುಡೆ ಮತ್ತು ಕೆಲವು ಬರಹಗಳನ್ನು ಕೈಯಲ್ಲಿ ಹಿಡಿದುಕೊಳ್ಳುವಂತೆ ಸೂಚಿಸಿದರು.
ನಾನು ಆಗ ಭಯಭೀತನಾದೆ. ಆ ಸಮಯದಲ್ಲಿ, ಗಿರೀಶ್ ಮಟ್ಟಣ್ಣವರ್ ಅವರು ಕರೆ ಮಾಡಿ ಜಯಂತ್ ಹೇಳಿದಂತೆ ಮಾಡುವಂತೆ ಸೂಚಿಸಿದರು. ನಾನು ತಲೆಬುರುಡೆಯನ್ನು ಮುಟ್ಟುವಂತೆ ತೋರುವ ರೀತಿಯಲ್ಲಿ ಬಾಗಿದೆ. ಆಗ ಜಯಂತ್ ಅರ್ಜಿದಾರರ ಫೋಟೋ ತೆಗೆದರು. ನಂತರ ನನ್ನನ್ನು ವಕೀಲರಾದ ಕೆ.ವಿ.ಧನಂಜಯ ಅವರ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ಓಜಸ್ವಿ ಗೌಡ ಎಂಬ ಇನ್ನೊಬ್ಬ ವಕೀಲರು ಇದ್ದರು. ಜಯಂತ್ ಅವರು ಓಜಸ್ವಿ ಗೌಡ ಅವರಿಗೆ ಪೆನ್ ಡ್ರೈವ್ ನೀಡಿದರು, ಓಜಸ್ವಿ ಗೌಡ ಅದನ್ನು ಕಂಪ್ಯೂಟರ್ಗೆ ಕನೆಕ್ಟ್ ಮಾಡಿದರು. ಅದರಲ್ಲಿ ಇರುವ ದಾಖಲೆ, ಫೋಟೋ ನೋಡಿದಾಗ ನನಗೆ ತೀವ್ರ ಆಘಾತ ಆಯಿತು. ಬಳಿಕ, ಗಿರೀಶ್ ಮಟ್ಟಣ್ಣವರ್ ಬಂದು, ತಮ್ಮ ಮನೆಯ ಸಮೀಪದ ಲಾಡ್ಜ್ನಲ್ಲಿ ಇರಿಸಿ ₹5000 ನೀಡಿ ಮನೆಗೆ ಕಳುಹಿಸಿದರು.
ದೆಹಲಿಯಲ್ಲಿ ಬುರುಡೆ ಪುರಾಣ:
ಅದಾದ ಹದಿನೈದು ದಿನಗಳ ನಂತರ, ಗಿರೀಶ್ ಮಟ್ಟಣ್ಣವರ್ ಕರೆ ಮಾಡಿ ಬೆಂಗಳೂರಿಗೆ ಮರಳಿ ಬರುವಂತೆ ಒತ್ತಾಯಿಸಿದರು. ನನ್ನ ಪತ್ನಿಯ ಬ್ಯಾಂಕ್ ಖಾತೆಗೆ ₹5000 ವರ್ಗಾಯಿಸಿದರು. ಬೆಂಗಳೂರಿನಲ್ಲಿ ಗಿರೀಶ್ ಮಟ್ಟಣ್ಣವರ್ ಮತ್ತು ಸುಜಾತಾ ಭಟ್ ಎಂಬ ವೃದ್ಧ ಮಹಿಳೆ ಇದ್ದರು. ಎಲ್ಲರನ್ನು ದೆಹಲಿಗೆ ಕರೆದೊಯ್ದರು. ಈ ಮಧ್ಯೆ, ಜಯಂತ್ ತಲೆಬುರುಡೆಯನ್ನು ಒಯ್ದು ರೈಲಿನಲ್ಲಿ ದೆಹಲಿ ತಲುಪಿದ್ದರು. ದೆಹಲಿ ತಲುಪಿದ ನಂತರ, ಸುಪ್ರೀಂಕೋರ್ಟ್ ಸಮೀಪ ಕರೆದೊಯ್ದು ಆ ಪ್ರದೇಶದಲ್ಲಿ ಓಡಾಡುವಂತೆ ಸೂಚಿಸಿದರು. ಹಾಗೆಯೇ, ಸಿಸಿಟಿವಿ ಕ್ಯಾಮೆರಾಗಳ ಮುಂದೆ ಕುಳಿತುಕೊಳ್ಳಲು ನಿರ್ದೇಶಿಸಿ ನಂತರ ಕೋಣೆಗೆ ಕರೆದೊಯ್ದರು. ಮಾರನೇ ದಿನ ವಕೀಲ ಕೆ.ವಿ.ಧನಂಜಯ ಅವರ ಕಾನೂನು ತಂಡದ ಸದಸ್ಯರನ್ನು ಭೇಟಿ ಮಾಡಲಾಯಿತು. ಗಿರೀಶ್ ಮಟ್ಟಣ್ಣವರ್ ತಲೆಬುರುಡೆಗೆ ಸಂಬಂಧಿಸಿದ ವಿಷಯ ಚರ್ಚಿಸಿದಾಗ, ಧನಂಜಯ ಅವರು ಅಂತಹ ತಲೆಬುರುಡೆಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರ ಮುಂದೆ ತಂದರೆ ಅವರು ಅದನ್ನು ಅಪಹಾಸ್ಯ ಮಾಡಿ ತಿರಸ್ಕರಿಸುತ್ತಾರೆ ಎಂದು ಹೇಳಿ ತಲೆಬುರುಡೆಗೆ ಸಂಬಂಧಿಸಿದ ವಿಷಯವನ್ನು ಬೆಳ್ತಂಗಡಿಯಲ್ಲಿ ಮುಂದುವರಿಸಬೇಕೆಂದು ಸೂಚಿಸಿದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
‘ಸಹಿ’ಗೆ ಮಾಹಿತಿಯೇ ಇಲ್ಲ!:
ದೆಹಲಿಯಲ್ಲಿ ಇದ್ದ ಸಂದರ್ಭದಲ್ಲಿ, ವಕೀಲ ಕೆ.ವಿ.ಧನಂಜಯ ಅವರ ಕಾನೂನು ತಂಡದ ಸದಸ್ಯರು ನನ್ನಿಂದ ಸಹಿಗಳನ್ನು ಪಡೆದಿದ್ದರು. ಏಕೆ ಸಹಿಗಳನ್ನು ಎಂದು ಮಾಹಿತಿ ನೀಡಲಿಲ್ಲ. ನಂತರ ಸುಪ್ರೀಂ ಕೋರ್ಟ್ನ ಮುಂದೆ ಡಬ್ಲ್ಯು.ಪಿ. ಸಂ. 184/2025 ಎಂಬ ರಿಟ್ ಅರ್ಜಿ ಸಲ್ಲಿಸಲ್ಪಟ್ಟಿದ್ದು, ಆ ಅರ್ಜಿಯು ವಜಾಗೊಂಡಿರುತ್ತದೆ. ನಂತರ ಎಲ್ಲರೂ ಬೆಂಗಳೂರಿಗೆ ಹಿಂದಿರುಗಿದೆವು.
ಇದಾದ ಸುಮಾರು ಹತ್ತರಿಂದ ಇಪ್ಪತ್ತು ದಿನಗಳ ನಂತರ ಮಹೇಶ್ ಶೆಟ್ಟಿ ತಿಮರೋಡಿ ಅವರು ಕರೆ ಮಾಡಿ, ‘ದೇವರ ಕೆಲಸ’ ಇರುವುದಾಗಿ ತಿಳಿಸಿ ಉಜಿರೆಗೆ ಬರುವಂತೆ ಕೋರಿದರು. ಅದರಂತೆ ನಾನು ಉಜಿರೆಗೆ ತೆರಳಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ತಂಗಿದ್ದೆ. ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ತಂಗಿದ್ದ ಅವಧಿಯಲ್ಲಿ ಅವರ ಪುತ್ರಿ ಪಂಚಮಿ ಶೆಟ್ಟಿ ನನ್ನ ಪ್ರತಿಯೊಂದು ಚಲನವಲನ ಮತ್ತು ನಡೆ-ನುಡಿಗಳನ್ನು ಗಮನಿಸುತ್ತಾ, ದಾಖಲಿಸಿಕೊಳ್ಳುತ್ತಿದ್ದರು. ಇತರರೊಂದಿಗೆ ಸಂಪರ್ಕ ಸಾಧಿಸಲು ಬಿಡುತ್ತಿರಲಿಲ್ಲ ಎಂದು ಚಿನ್ನಯ್ಯ ಹೇಳಿದ್ದಾರೆ.