ದರ್ಶನ್‌ ನಿರ್ಮಾಪಕರು ಅಯ್ಯೋ ಪಾಪ!

KannadaprabhaNewsNetwork |  
Published : Jun 21, 2024, 01:06 AM ISTUpdated : Jun 21, 2024, 05:17 AM IST
ದರ್ಶನ್ | Kannada Prabha

ಸಾರಾಂಶ

ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರ ಮುಂದಿನ ಚಿತ್ರಗಳ ಕತೆ ಏನು ಎನ್ನುವ ಚರ್ಚೆಗಳು ಶುರುವಾಗಿವೆ.

ದರ್ಶನ್‌ ಬಂಧನಕ್ಕೊಳಗಾದ ಮೇಲೆ ಅವರ ಮುಂದಿರುವ ಚಿತ್ರಗಳ ಭವಿಷ್ಯ ಏನಾಗಲಿದೆ ಎನ್ನುವ ಚರ್ಚೆಗಳು ಶುರುವಾಗಿದೆ. ದರ್ಶನ್‌ ಒಪ್ಪಿಕೊಂಡಿರುವ ಸಿನಿಮಾಗಳ ಮುಂದಿನ ಸ್ಥಿತಿ ಏನು ಎಂಬ ಪ್ರಶ್ನೆ ಎದುರಾಗಿದೆ. ದರ್ಶನ್‌ ನಿರ್ಮಾಪಕರನ್ನು ನೆನೆದು ಜಗತ್ತು ಅಯ್ಯೋ ಪಾಪ ಎಂದು ನಿಡುಸುಯ್ಯುವಂತಾಗಿದೆ.

ಶೂಟಿಂಗ್ ಅಖಾಡದಲ್ಲಿರುವ ಮಿಲನ ಪ್ರಕಾಶ್‌ ನಿರ್ದೇಶನದ ‘ಡೆವಿಲ್‌’ ಸೇರಿದಂತೆ ದರ್ಶನ್ ಒಪ್ಪಿಕೊಂಡಿರುವ ಒಟ್ಟು ಚಿತ್ರಗಳ ಸಂಖ್ಯೆ 14. ಈ ಪೈಕಿ ದರ್ಶನ್ ಕೆಲವು ಚಿತ್ರಗಳ ಕತೆಗಳನ್ನು ಕೇಳಿ ಅಂತಿಮ ಮಾಡಿಕೊಂಡಿದ್ದರು. ಹಲವಾರು ಮಂದಿ ಈಗಾಗಲೇ ಅಡ್ವಾನ್ಸ್ ಕೊಟ್ಟು ಕೈ ಮುಗಿದು ಬಂದಿದ್ದರು. ಈಗ ಆ ಘಟನೆ ನೆನಪಾದಾಗಲೆಲ್ಲಾ ನಿರ್ಮಾಪಕರು ಅದೇ ಕೈಗಳನ್ನು ಹಿಸುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಹೇಳಿಕೊಳ್ಳುವಂತಿಲ್ಲ, ಬಿಡುವಂತಿಲ್ಲ.. ಪರಿಸ್ಥಿತಿ ತುಂಬಾ ಘೋರವಾಗಿದೆ.

ದರ್ಶನ್‌ ಅವರು ಕತೆ ಕೇಳಿ ಅಂತಿಮ ಮಾಡಿಕೊಂಡಿದ್ದರಲ್ಲಿ ತೆಲುಗಿನ ಪ್ರಸಾದ್‌ ಬಾಬು ನಿರ್ಮಾಣದ, ಶ್ರೀಕಾಂತ್‌ ಅಡ್ಡಾಲ ನಿರ್ದೇಶನದ ಚಿತ್ರವೂ ಒಂದು. ಇದೇ ಸೆಪ್ಟೆಂಬರ್‌, ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಈ ಚಿತ್ರದ ಶೂಟಿಂಗ್‌ ಪ್ಲಾನ್‌ ಆಗಿತ್ತು. ಬಹುತೇಕ ಶೂಟಿಂಗ್‌ ಲಂಡನ್‌ನಲ್ಲಿ ನಡೆಯಲಿದೆ ಎನ್ನಲಾಗಿತ್ತು. ಈ ಮಧ್ಯೆ ಕೋಟಿಗೊಬ್ಬ ಸೂರಪ್ಪ ಬಾಬು ನಿರ್ಮಾಣದ ಚಿತ್ರದ ಕತೆಯೂ ಓಕೆ ಆಗಿತ್ತು. ಜೂನ್‌ 7ರಂದು ಬಹುಭಾಷೆಯ ನಿರ್ದೇಶಕರೊಬ್ಬರಿಂದ ಸೂರಪ್ಪ ಬಾಬು ಅವರು ದರ್ಶನ್‌ ಅವರಿಗೆ ಕತೆ ಹೇಳಿಸಿದ್ದರು ಎಂಬ ಸುದ್ದಿ ಬೇರೆ ಈಗಷ್ಟೇ ಬಂದಿದೆ. ಖುದ್ದು ಸೂರಪ್ಪ ಬಾಬು, ‘ನನ್ನ ನಿರ್ಮಾಣದ ಚಿತ್ರದ ಕತೆಯ ಸಾಲು ಓಕೆ ಮಾಡಿದ್ದ ದರ್ಶನ್‌ ಅವರು, ಬ್ಯಾಂಕಾಕ್‌ಗೆ ಹೋಗಿ ಬಂದ ಮೇಲೆ ಮುಂದಿನ ಮಾತುಕತೆ ಮಾಡುವ ಬಗ್ಗೆ ಭರವಸೆ ಕೊಟ್ಟಿದ್ದರು’ ಎನ್ನುತ್ತಾರೆ.

ಶೈಲಜಾ ನಾಗ್‌ ಹಾಗೂ ಬಿ. ಸುರೇಶ್‌ ನಿರ್ಮಾಣದ, ತರುಣ್‌ ಸುಧೀರ್‌ ನಿರ್ದೇಶನದ ಚಿತ್ರದ ಕತೆಯನ್ನೂ ಓಕೆ ಮಾಡಿದ್ದರು. ಐತಿಹಾಸಿಕ ಕ್ರಾಂತಿಕಾರಿ ಹೋರಾಟಗಾರ ವೀರಸಿಂಧೂರ ಲಕ್ಷ್ಮಣನ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ಇದು. ಇದರ ಜಾಹೀರಾತುಗಳು ಆಗಲೇ ಜಗಜ್ಜಾಹೀರಾಗಿತ್ತು. ಈಗ ನೋಡಿದರೆ ಈ ಸಿನಿಮಾ ಇತಿಹಾಸಕ್ಕೆ ಸಲ್ಲುತ್ತದೆಯೋ ಎಂಬು ಅನುಮಾನ ಉಂಟಾಗಿದೆ.

‘ನಾವು ಡಿ59 ಹೆಸರಿನಲ್ಲಿ ದರ್ಶನ್ ಅವರ ಜತೆಗೆ ಸಿನಿಮಾ ಘೋಷಣೆ ಮಾಡಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ ಇದು ಸಿಂಧೂರ ಲಕ್ಷ್ಮಣನ ಜೀವನ ಕುರಿತು ಸಿನಿಮಾ’ ಎನ್ನುತ್ತಾರೆ ನಿರ್ಮಾಪಕಿ ಶೈಲಜಾ ನಾಗ್‌.

ವಿಶೇಷ ಎಂದರೆ ಜೂನ್‌ 8ರಂದು ನಿರ್ದೇಶಕ ಎಂ ಡಿ ಶ್ರೀಧರ್‌ ಎರಡು ಕತೆ ಹೇಳಿದ್ದರು. ‘ದರ್ಶನ್‌ ಅವರು ಅರೆಸ್ಟ್‌ ಆಗುವ ಮೊದಲು ನಾನು ಡೆವಿಲ್‌ ಶೂಟಿಂಗ್‌ ಸೆಟ್‌ಗೆ ಹೋಗಿ ಎರಡು ಕತೆ ಹೇಳಿದ್ದೆ. ಎರಡೂ ಚೆನ್ನಾಗಿದೆ. ಮುಂದೆ ಡೀಟೈಲ್‌ ಆಗಿ ಕೇಳೋಣ ಎಂದು ನನಗೆ ಅವರು ಹೇಳಿದ್ದರು. ಈ ಚಿತ್ರಕ್ಕಾಗಿ ನಾನು 2016 ನವೆಂಬರ್‌ 7ರಂದು ದೊಡ್ಡ ಮೊತ್ತದ ಅಡ್ವಾನ್ಸ್‌ ಕೊಟ್ಟಿದ್ದೇನೆ. ಮಂಗಳೂರು ಮೂಲದ ನಿರ್ಮಾಪಕರು’ ಎಂದು ಹೇಳುತ್ತಾರೆ ನಿರ್ದೇಶಕ ಎಂ ಡಿ ಶ್ರೀಧರ್‌.

ಈ ಹಿಂದೆ ದರ್ಶನ್‌ ಅವರ ಜತೆಗೆ ‘ಜಗ್ಗುದಾದ’ ಚಿತ್ರ ನಿರ್ಮಿಸಿ, ನಿರ್ದೇಶಿಸಿ ಈಗ ಪ್ರತೀ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ದರ್ಶನ್ ಜೊತೆಗಿನ ಹೊಸ ಸಿನಿಮಾ ಜಾಹೀರಾತು ಕೊಡುವ ರಾಘವೇಂದ್ರ ಹೆಗ್ಡೆಯವರು, ‘ನಾನು ದರ್ಶನ್‌ ಅವರ ಜತೆಗೆ ಮಾಡುವ ಸಿನಿಮಾ ಮೈಥಾಲಾಜಿಕಲ್‌ ಜಾನರ್‌ ಸಿನಿಮಾ. ಡಿಸೆಂಬರ್‌ ನಂತರ ನಾನು ಸಿನಿಮಾ ಮಾಡುವ ಪ್ಲಾನ್‌ ಇದೆ’ ಎಂದೇನೋ ಹೇಳಿದರು. ಭವಿಷ್ಯ ಯಾರಿಗೆ ಗೊತ್ತು?

ಜೋಗಿ ಪ್ರೇಮ್‌ ನಿರ್ದೇಶನದ, ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣದ ಚಿತ್ರ, ತಮಿಳಿನ ರಮೇಶ್‌ ನಿರ್ಮಾಣದ ಚಿತ್ರಗಳ ಜತೆಗೆ ಸಚ್ಚಿ, ಪೀಪಲ್‌ ಮೀಡಿಯಾ ಫ್ಯಾಕ್ಟ್ರಿ, ರಘುನಾಥ್ ಸೋಗಿ, ಸೋಮಶೇಖರ್ ನಿರ್ಮಾಣ, ಮೋಹನ್ ನಟರಾಜನ್ ನಿರ್ಮಾಣದ ಚಿತ್ರಗಳು ದರ್ಶನ್‌ ನಟನೆಯ ಮುಂದಿನ ಚಿತ್ರಗಳ ಸರತಿ ಸಾಲಿನಲ್ಲಿ ನಿಂತಿವೆ. ಅಲ್ಲದೆ ಸಚಿವ ಜಮೀರ್‌ ಅವರ ಮಗ ನಟ ಝೈದ್‌ ಖಾನ್‌ ಜತೆಗೂ ಒಂದು ಸಿನಿಮಾ ಮಾಡುವ ಮಾತುಕತೆ ಮಾಡಲಾಗಿತ್ತು.

ಎಲ್ಲವೂ ಸೇರಿದರೆ ಒಟ್ಟು 14 ಚಿತ್ರಗಳು. ಪ್ರತಿ ಚಿತ್ರಕ್ಕೂ 2 ರಿಂದ 3 ಕೋಟಿ ಅಡ್ವಾನ್ಸ್‌ ಹಣ ಪಡೆದಿದ್ದರೂ 30 ಕೋಟಿ ದಾಟಲಿದೆ. ಈ ಮಧ್ಯೆ ಚಿತ್ರೀಕರಣ ಅರ್ಧ ಮುಗಿಸಿಕೊಂಡ ‘ಡೆವಿಲ್’ ಖರ್ಚು ಅಂದಾಜಿಗೆ ತೆಗೆದುಕೊಂಡರೂ 20 ಕೋಟಿ ದಾಟಿರಬಹುದೇನೋ.

ಅಷ್ಟೂ ಕೋಟಿಗಳ ಲೆಕ್ಕ ಯಾರು ಯಾರಿಗೆ ಹೇಳುತ್ತಾರೆ!

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಹಲವು ವರ್ಷಗಳ ಬಳಿಕ ಮನಬಿಚ್ಚಿ ಮಾತಾಡಿದ ರಕ್ಷಿತ್ : ನಾನಿರುವುದೇ ಹೀಗೆ!
ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು