;Resize=(412,232))
ಸಿನಿವಾರ್ತೆ
ನಟ ಸುದೀಪ್ ಅವರು ಸದ್ದಿಲ್ಲದೆ ಮತ್ತೊಂದು ಸಿನಿಮಾ ಶುರು ಮಾಡುವ ಸಾಧ್ಯತೆಗಳಿವೆ. ಈಗಾಗಲೇ ನಿರ್ದೇಶಕನ ಜೊತೆಗೆ ಅಂತಿಮ ಹಂತದ ಮಾತುಕತೆ ಆಗಿದೆ ಎನ್ನಲಾಗಿದೆ. ಅಂದಹಾಗೆ ಇವರು ತೆಲುಗಿನ ನಿರ್ದೇಶಕರು. ‘ಪುಷ್ಪ’ ಹಾಗೂ ‘ರಂಗಸ್ಥಳಂ’ ಚಿತ್ರಗಳ ನಿರ್ದೇಶಕ ಸುಕುಮಾರ್ ಅವರ ಸಹಾಯಕನಾಗಿದ್ದು, ಮೊದಲ ಬಾರಿಗೆ ಸುದೀಪ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ. ಸತತವಾಗಿ ಆ್ಯಕ್ಷನ್ ಹಾಗೂ ಮಾಸ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ ಸುದೀಪ್ ಅವರು ಆ ರೀತಿಯ ಚಿತ್ರಗಳಿಂದ ಆಚೆ ಬಂದು ಬೇರೆ ರೀತಿಯ ಕತೆ ಹಾಗೂ ಪಾತ್ರಗಳ ನಿರೀಕ್ಷೆಯಲ್ಲಿದ್ದವರಿಗೆ ತೆಲುಗಿನ ನಿರ್ದೇಶಕರೊಬ್ಬರು ಹೇಳಿದ ಕತೆ ಇಷ್ಟವಾಗಿದೆಯಂತೆ. ಆ ಮೂಲಕ ಆ್ಯಕ್ಷನ್ ಇಮೇಜಿನ ಪಾತ್ರಗಳಿಂದ ಸುದೀಪ್ ಅವರು ಕೊಂಚ ಆಚೆ ಬರುವುದು ಖಾತ್ರಿ ಆಗಿದೆ. ‘ತೆಲುಗು ನಿರ್ದೇಶಕನ ಜೊತೆಗೆ ಮಾತುಕತೆ ನಡೆಯುತ್ತಿದೆ. ಯಾವಾಗ ಈ ಸಿನಿಮಾ ಸೆಟ್ಟೇರುತ್ತದೆ ಎಂಬುದು ಗೊತ್ತಿಲ್ಲ. ಆದರೆ, ತೆಲುಗು ನಿರ್ದೇಶಕನ ಜೊತೆಗೆ ಕನ್ನಡ ಸಿನಿಮಾ ಮಾಡುವುದು ಪಕ್ಕಾ’ ಎಂದು ಸುದೀಪ್ ಅವರ ಆಪ್ತ ಮೂಲಗಳು ತಿಳಿಸಿವೆ.
‘ಮಾರ್ಕೆಟ್ನಲ್ಲಿ ಗೆದ್ದಿದೆ ಎನ್ನುವ ಕಾರಣಕ್ಕೆ ನಾನು ಅದೇ ರೀತಿಯ ಕತೆ ಅಥವಾ ಚಿತ್ರವನ್ನು ಒಪ್ಪುವುದಿಲ್ಲ. ನಾನು ಒಪ್ಪುವ ಸಿನಿಮಾ ನನಗೆ ಉತ್ಸಾಹ ನೀಡಬೇಕು, ಪಾತ್ರ ನನಗೆ ಖುಷಿ ಕೊಡುವಂತಿರಬೇಕು. ನಾನು ಹಿಂದೆ ಮಾಡಿದ ಪಾತ್ರಕ್ಕಿಂತ ಬೇರೆಯದ್ದೇ ಪಾತ್ರ ಆಗಿರಬೇಕು. ಅಥವಾ ನಾನು ಈ ಮೊದಲು ಮಾಡಿದ್ದರೂ ಅದು ಹೊಸತನದೊಂದಿಗೆ ಕೂಡಿರಬೇಕು. ಆ ರೀತಿಯಾಗಿದ್ದರೆ ಮಾತ್ರ ನಾನು ಒಪ್ಪುತ್ತೇನೆ’ ಎಂದು ನಟ ಸುದೀಪ್ ಅವರು ಈ ಮೊದಲು ಹೇಳಿಕೊಂಡಿದ್ದರು. ಈಗ ಅವರು ಇಷ್ಟಪಟ್ಟಿರುವಂತೆಯೇ ಕತೆ ಹಾಗೂ ಪಾತ್ರ ದೊರಕಿದೆಯಂತೆ.
ಮತ್ತೊಂದು ಮಾಹಿತಿ ಪ್ರಕಾರ ‘ಬಿಲ್ಲ ರಂಗ ಬಾಷ’ ಚಿತ್ರಕ್ಕೆ ಮೊದಲೇ ಈ ರೊಮ್ಯಾಂಟಿಕ್ ಕತೆಯ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆ. ಇನ್ನೂ ಈ ಹೊಸ ಚಿತ್ರದ ನಿರ್ಮಾಣ ಸಂಸ್ಥೆ, ನಿರ್ದೇಶಕರ ಹೆಸರು ಇನ್ನಷ್ಟೇ ಗೊತ್ತಾಗಬೇಕಿದೆ.