ಪ್ರಶ್ನಿಸುವ ಸಣ್ಣ ಸಣ್ಣ ದೃಶ್ಯ ಕಿಡಿಗಳ ಗುಚ್ಛ

KannadaprabhaNewsNetwork |  
Published : Feb 24, 2024, 02:31 AM IST
ಧೈರ್ಯಂ | Kannada Prabha

ಸಾರಾಂಶ

ಧೈರ್ಯಂ ಸಾರ್ವತ್ರ ಸಾಧನಂ ಸಿನಿಮಾ ಹಲವು ರೀತಿಯಲ್ಲಿ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತದೆ.

ಚಿತ್ರ: ಧೈರ್ಯಂ ಸಾರ್ವತ್ರ ಸಾಧನಂ

ನಿರ್ದೇಶನ: ಎ ಆರ್‌ ಸಾಯಿರಾಮ್‌

ತಾರಾಗಣ: ವಿವಾನ್‌, ಅನುಷಾ ರೈ, ಯಶ್‌ ಶೆಟ್ಟಿ, ಬಾಲರಾಜವಾಡಿ, ಪ್ರದೀಪ್‌ ಪೂಜಾರಿ, ವರ್ಧನ್‌, ಚಕ್ರವರ್ತಿ ಚಂದ್ರಚೂಡ್‌ರೇಟಿಂಗ್: 3ಆರ್‌.ಕೆ.ಈ ಚಿತ್ರದ ಪಾತ್ರಧಾರಿಗಳ ಹೆಸರು ಆರ್ಯ ಮತ್ತು ದ್ರಾವಿಡ. ಇಲ್ಲಿ ಆರ್ಯ ಪೊಲೀಸ್ ವೇಷದಲ್ಲಿರುವ ಖಳನಾಯಕ. ದ್ರಾವಿಡ ಚಿತ್ರದ ನಾಯಕ. ಇದು ಬರೀ ಹೆಸರು ಮಾತ್ರವಲ್ಲ ಎಂಬುದನ್ನು ‘ಧೈರ್ಯಂ ಸಾರ್ವತ್ರ ಸಾಧನಂ’ ಸಿನಿಮಾ ಆಗಾಗ ಸಾಬೀತು ಮಾಡುತ್ತಾ ಹೋಗುತ್ತದೆ.

ಈ ಸಿನಿಮಾ ಆರಂಭದಿಂದ ಕೊನೆಯವರೆಗೂ ಅರಿವಿನ ನೆರಳಿನಲ್ಲಿ ಪ್ರಶ್ನಿಸುವ ಸಣ್ಣ ಸಣ್ಣ ದೃಶ್ಯ ಕಿಡಿಗಳಂತೆ ಕಾಣುವುದು ಚಿತ್ರದ ಹೆಚ್ಚುಗಾರಿಕೆ ಎನ್ನಬಹುದು. ಕಾನೂನು ಪರಿಹಾರಕ್ಕಾಗಿ ಸಮಸ್ಯೆ ಹೇಳಿಕೊಂಡು ಬಂದವರಿಗೆ ಮಂತ್ರ-ತಂತ್ರ ಹೇಳಿಕೊಡುವ, ಪುಸ್ತಕ ಇರಬೇಕಾದ ಜಾಗದಲ್ಲಿ ದೇವರ ಫೋಟೋಗಳನ್ನು ಇಟ್ಟಿರುವ, ಮೈಲಿಗೆ ಮುಂತಾದ ಸಾಕಷ್ಟು ವಿಷಯಗಳನ್ನು ಒಂದೇ ಚಿತ್ರದಲ್ಲಿ ಹೇಳುವ ಸಾಹಸ ಮಾಡಿದ್ದಾರೆ ನಿರ್ದೇಶಕ ಎ.ಆರ್‌. ಸಾಯಿರಾಮ್‌.

ಇಲ್ಲಿ ಆರ್ಯ ಪಾತ್ರ ಪ್ರವೇಶ ಆದ ಮೇಲೆ ಮೂಲ ಹಳ್ಳಿಗನಾದ ದ್ರಾವಿಡನ ಬದುಕಿನಲ್ಲಿ ಏನೆಲ್ಲ ಪಲ್ಲಟಗಳು ಆಗುತ್ತವೆ ಎಂದು ಹೇಳುವ ಮೂಲಕ ‘ಆರ್ಯ ವರ್ಸಸ್‌ ದ್ರಾವಿಡ’ ನಡುವಿನ ಕದನವನ್ನೂ ಸಾಂಕೇತಿಕವಾಗಿ ಈ ಸಿನಿಮಾ ಕಟ್ಟಿಕೊಡುತ್ತದೆ. ಪೊಲೀಸು ವೇಷದಲ್ಲಿರುವ ಆರ್ಯ, ಊರಿನ ಜನರು ತನ್ನ ಗುಲಾಮರಾಗಿರಬೇಕೆಂದು ಬಯಸುವ ಶ್ರೀಮಂತ, ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ದ್ರಾವಿಡ. ಇಷ್ಟೂ ಪಾತ್ರಗಳಿಗೆ ಕೇಂದ್ರಬಿಂದು ಆಗುವ ಬಂದೂಕು ಮತ್ತು ಬೇಟೆಯ ಕಲೆ. ಇವು ಹೇಗೆ ಒಂದಕ್ಕೊಂದು ಸಂಬಂಧ ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು.

ಸಿನಿಮಾವನ್ನು ಮನ್ನಷ್ಟು ಚೆಂದವಾಗಿ ರೂಪಿಸುವ ಸಾಧ್ಯತೆಗಳು ಇದ್ದವು. ಚರ್ಚಿತ ವಿಷಯಗಳ ಸುತ್ತ ಸಾಗುವ ಸಿನಿಮಾ ಆಗಿರುವುದರಿಂದ ಚಿತ್ರ ಒಮ್ಮೆ ನೋಡಬಹುದು ಎಂಬುದಕ್ಕೆ ಅಭ್ಯಂತರ ಇಲ್ಲ. ವಿವಾನ್‌, ಅನುಷಾ ರೈ, ಯಶ್‌ ಶೆಟ್ಟಿ, ಬಾಲರಾಜವಾಡಿ ಪಾತ್ರಗಳು ಚಿತ್ರದ ಮಹತ್ವ ಸಾರುತ್ತವೆ. ರವಿಕುಮಾರ್‌ ಸನಾ ಕ್ಯಾಮೆರಾ ಕತೆಗೆ ಪೂರಕವಾಗಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌