ರಕ್ಷಿತ್ ಶೆಟ್ಟಿ ನಟನೆಯಲ್ಲಿ ಕಿರಣ್ರಾಜ್ ನಿರ್ದೇಶಿಸಿದ್ದ ‘777 ಚಾರ್ಲಿ’ ಸಿನಿಮಾ ತೆರೆಕಂಡು ಮೂರು ವರ್ಷ ಕಳೆಯುತ್ತಾ ಬಂದಿದೆ. ಇದೀಗ ನಿರ್ದೇಶಕ ಕಿರಣ್ರಾಜ್ ಹೊಸ ಸ್ಕ್ರಿಪ್ಟ್ ರೆಡಿ ಮಾಡಿದ್ದಾರೆ. ನಾಯಿಯನ್ನು ಪ್ರಧಾನವಾಗಿಟ್ಟು ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಬಗ್ಗೆ ಅವರ ಮಾತು..
- ನನ್ನ ಹೊಸ ಸಿನಿಮಾದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದೆ. ಇದೊಂದು ಹಾರರ್ ಥ್ರಿಲ್ಲರ್ ಫ್ಯಾಂಟಸಿ ಡ್ರಾಮಾ. ಇದರ ವ್ಯಾಪ್ತಿ ರಾಷ್ಟ್ರಮಟ್ಟದ್ದು. ಯೂನಿವರ್ಸಲ್ ಎಮೋಶನ್ ಇರುವ ಕಥೆ. ಆದರೂ ನನ್ನ ಈ ಹಿಂದಿನ ‘777 ಚಾರ್ಲಿ’ ಸಿನಿಮಾಕ್ಕಿಂತ ಇದರ ಕಥೆ, ಬಜೆಟ್ ಎಲ್ಲಾ ಅಗಾಧವಾದುದು. ಆದರೆ ಆ ಚಿತ್ರದಂತೆ ಮೊದಲು ಕನ್ನಡದಲ್ಲಿ ಸಿನಿಮಾ ಮಾಡಿ ಆ ಬಳಿಕ ಪ್ರತಿಕ್ರಿಯೆ ನೋಡಿ ಪ್ಯಾನ್ ಇಂಡಿಯಾ ಲೆವೆಲ್ಗೆ ಹೋಗುವ ತೀರ್ಮಾನ ಕೈಗೊಳ್ಳುತ್ತೇವೆ. ಬೇರೆ ಭಾಷೆಯ ನಿರ್ಮಾಣ ಸಂಸ್ಥೆಗಳು ಸಿನಿಮಾ ಮಾಡಲು ಮುಂದಾಗಿವೆ. ಸದ್ಯಕ್ಕೀಗ ಈ ಮಾತುಕತೆ ಫೈನಲ್ ಮಾಡಬೇಕಿದೆ ಜೊತೆಗೆ ಕಲಾವಿದರ ಆಯ್ಕೆಯೂ ನಡೆಯಬೇಕಿದೆ.
- ಈ ಸಿನಿಮಾದಲ್ಲೂ ನಾಯಕನಷ್ಟೇ ಪ್ರಾಧಾನ್ಯತೆ ನಾಯಿಗೆ ಇದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಮಯದಿಂದ ಈ ಸಿನಿಮಾಕ್ಕಾಗಿ ನಾಯಿಗೆ ತರಬೇತಿ ನೀಡಲಾಗುತ್ತಿದೆ. ಹಿಂದಿನ ಸಿನಿಮಾಕ್ಕಿಂತಲೂ ಹೆಚ್ಚಿನ ಚಾಲೆಂಜ್ಗಳು ಈ ಸಿನಿಮಾದಲ್ಲಿ ಇವೆ. ಜೊತೆಗೆ ನಮ್ಮ ಸಿನಿಮಾದ ಹೀರೋ, ಹೀರೋಯಿನ್ ಕನ್ನಡದವರೇ ಇರುತ್ತಾರೆ. ಆದರೆ ಕತೆಯಲ್ಲಿ ಪರಭಾಷೆಯ ಪಾತ್ರಗಳು ಬಂದರೆ ಅದಕ್ಕೆ ಅಲ್ಲಿನ ಕಲಾವಿದರನ್ನು ಆಯ್ಕೆ ಮಾಡುತ್ತೇವೆ.
- ಚಾರ್ಲಿ ಸಿನಿಮಾಕ್ಕೆ ನಾನು 5 ವರ್ಷ ಸಮಯ ನೀಡಿದ್ದೆ. ಅದು ನನ್ನ ಮೊದಲ ಸಿನಿಮಾವಾದ ಕಾರಣ ಯಾರೂ ಈ ಬಗ್ಗೆ ಪ್ರಶ್ನೆ ಮಾಡುತ್ತಿರಲಿಲ್ಲ. ಈಗ ಈ ಸಿನಿಮಾಕ್ಕೂ ಅಷ್ಟೇ ಸಮಯ ಬೇಕಾಗುತ್ತದೆ. ಯಾಕೆಂದರೆ ನಾಯಿ ಮುಖ್ಯ ಪಾತ್ರದಲ್ಲಿರುವ ಕಾರಣ ಅದು ಪಾತ್ರವನ್ನೇ ಜೀವಿಸಬೇಕು, ಟ್ರೈನಿಂಗ್ ಕೊಟ್ಟ ರೀತಿ ಇರಬಾರದು. ಇದಕ್ಕೂ ಸಮಯಬೇಕು. ಜೊತೆಗೆ ನನ್ನ ಕೆಲಸದ ಶೈಲಿ ಸಾವಧಾನದ್ದು. ಗಡಿಬಿಡಿಯಲ್ಲಿ ಏನೋ ಒಂದು ಮಾಡೋದಕ್ಕಿಂತ ಸಮಯ ತಗೊಂಡು ಒಂದೊಳ್ಳೆ ಸಿನಿಮಾ ಕೊಡುವ ತುಡಿತ ಇದೆ.
- ಇತ್ತೀಚೆಗೆ ಸೋಷಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದರೆ ಸಾಕು ಜನ ಟ್ರೋಲ್ ಮಾಡುತ್ತಿದ್ದಾರೆ. ‘ಯಾಕೆ ಸಿನಿಮಾ ಮಾಡಲ್ವಾ, ಬಿಟ್ಬಿಟ್ರಾ?’ ‘ಕಂಗ್ರಾಜ್ಯುಲೇಶನ್ಸ್ ಫಾರ್ ಯುವರ್ ರಿಟೈರ್ಮೆಂಟ್ ಲೈಫ್’ ಅಂತೆಲ್ಲ ಹೇಳ್ತಿದ್ದಾರೆ. ಸದ್ಯಕ್ಕಂತೂ ಹೊರಗೆ ಓಡಾಡೋದನ್ನು, ಸೋಷಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋದನ್ನು ಕಡಿಮೆ ಮಾಡಿದ್ದೇನೆ.