ಎರಡು ಗುಂಪುಗಳು, ಕಡಲು, ಬೋಟಿಂಗ್, ಮೀನು ವ್ಯಾಪಾರ ಸುತ್ತ ಸಾಗುವ ಕತೆ ‘ಜಿಗರ್’. ನಾಯಕನ ಕೋಪ, ಖಳನಾಯಕನ ತಂತ್ರಗಳ ಬಲೆಯಲ್ಲಿ ಚಿತ್ರ ಸಿಕ್ಕಿಕೊಳ್ಳುತ್ತದೆ. ಕೋಪದ ಕುಲುಮೆಯಲ್ಲಿ ಹರಿದ ನೆತ್ತರಿಗೆ ಪಶ್ಚಾತ್ತಾಪವೇ ಉತ್ತರವಾಗಲಿದೆಯೇ, ಕೊನೆಗೆ ಏನಾಗುತ್ತದೆ ಎಂಬುದು ಚಿತ್ರದ ಕ್ಲೈಮ್ಯಾಕ್ಸ್.
ಫೈನಾನ್ಸ್ ಕಂಪನಿಯ ಲೋನ್ ವಸೂಲಿಯಲ್ಲಿ ಕೆಲಸ ಮಾಡುತ್ತಿರುವ ಹೀರೋ ಜೀವ. ನಾಯಕನ ಊರಿನಲ್ಲೊಂದು ಕೊಲೆ ಆಗಿದೆ. ವಿಷಯ ತಿಳಿದು ಹೀರೋ ಊರಿಗೆ ಹೋಗುತ್ತಾನೆ. ಊರಿಗೆ ಮರಳಿದ ಜೀವ ಜತೆಗೆ ನಾಯಕಿಯ ಸ್ನೇಹ ಆಗುತ್ತದೆ. ಈ ನಡುವೆ ಜೀವನ ಹಿನ್ನೆಲೆ ಏನು ಎನ್ನುವುದು ಬಹಿರಂಗಗೊಳ್ಳುತ್ತದೆ.
ಭೂತ ಕಾಲದಲ್ಲಿ ಸ್ಥಳೀಯ ಮುಖಂಡನ ಬಲಗೈ ಬಂಟನಾಗಿದ್ದ ಜೀವ, ಎರಡು ಸಾವುಗಳಿಗೆ ಕಾರಣ ಆಗಿದ್ದು, ಈಗ ಎಲ್ಲವೂ ಬಿಟ್ಟು ಭವಿಷ್ಯತ್ ಕಾಲದಲ್ಲಿ ಲೋನ್ ವಸೂಲಿನ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವುದು ಗೊತ್ತಾಗುತ್ತದೆ. ಆದರೆ, ಕಳಂಕ ಹೊತ್ತ ನಾಯಕನನ್ನು ನಾಯಕಿ ಮದುವೆ ಆಗುತ್ತಾಳೆಯೇ, ಗೆಳೆಯನ ಸಾವಿಗೆ ಕಾರಣನಾದ ಹೀರೋ ಮುಂದೆ ಏನಾಗುತ್ತಾನೆ ಎಂಬುದು ಚಿತ್ರ.
ನಿರ್ದೇಶಕ ಸೂರಿ ಕುಂದರ್ ಮಾಸ್- ಆ್ಯಕ್ಷನ್ ಸರುಕಿನ ಚಿತ್ರವನ್ನು ಅತ್ಯಂತ ಚುರುಕಿನಿಂದ ರೂಪಿಸಿದ್ದಾರೆ. ಆದರೆ ಒಳ್ಳೆಯ ನಟ ಪ್ರವೀಣ್ ತೇಜ್ನ ಪ್ರತಿಭೆಯನ್ನು ಇನ್ನಷ್ಟು ಸೂಕ್ತವಾಗಿ ದುಡಿಸಿಕೊಳ್ಳಬಹುದಿತ್ತು. ನಾಯಕನ ತಾಯಿ ಮಂಗಳೂರು ಕನ್ನಡ ಮಾತನಾಡಿದರೆ, ನಾಯಕ ಮಾಮೂಲಿ ಕನ್ನಡ ಮಾತನಾಡುವುದು ಕೊಂಚ ಅಸಹಜವಾಗಿದೆ. ಉಳಿದಂತೆ ಚಿತ್ರದಲ್ಲಿ ಡಿಫರೆಂಟ್ ಫ್ಲೇವರ್ ಇದೆ.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.