ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ

Published : Oct 04, 2025, 08:43 AM IST
Puneeth Rakshit Archana

ಸಾರಾಂಶ

ರಾಜ್ಯ ಸರ್ಕಾರವು ಪ್ರಕಟಿಸಿರುವ 2021ನೇ ಕ್ಯಾಲೆಂಡರ್‌ ವರ್ಷದ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅವರ ಅನಿಸಿಕೆಗಳು ಇಲ್ಲಿವೆ.

  ಬೆಂಗಳೂರು :  ರಾಜ್ಯ ಸರ್ಕಾರವು ಪ್ರಕಟಿಸಿರುವ 2021ನೇ ಕ್ಯಾಲೆಂಡರ್‌ ವರ್ಷದ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅವರ ಅನಿಸಿಕೆಗಳು ಇಲ್ಲಿವೆ.

ಅನಿರೀಕ್ಷಿತ ಖುಷಿ

- ಅರ್ಚನಾ ಜೋಯಿಸ್‌, (ಅತ್ಯುತ್ತಮ ನಟಿ, ಚಿತ್ರ: ಮ್ಯೂಟ್)

ಇದು ನನ್ನ ಮೊದಲ ರಾಜ್ಯ ಪ್ರಶಸ್ತಿ. ಬಹಳ ಖುಷಿಯಲ್ಲಿದ್ದೇನೆ. ನನಗೆ ಈ ಪ್ರಶಸ್ತಿ ತಂದುಕೊಟ್ಟ ‘ಮ್ಯೂಟ್‌’ ಚಿತ್ರ ಸೈಕಲಾಜಿಕಲ್‌ ಥ್ರಿಲ್ಲರ್‌. ಕೋವಿಡ್ ಸಮಯದಲ್ಲಿ ಬಂದ ಚಿತ್ರ. ಇದು ಥಿಯೇಟರ್‌ಗೆ ಬಾರದೇ ಓಟಿಟಿಯಲ್ಲಿ ರಿಲೀಸ್‌ ಆಗಿತ್ತು. ಇದರಲ್ಲಿ ಡಿವೋರ್ಸ್‌ನಿಂದ ಖಿನ್ನತೆಗೊಳಗಾಗಿ ಹೆಣ್ಣೊಬ್ಬಳು ಅನಿರೀಕ್ಷಿತವಾಗಿ ಸಿಕ್ಕ ನಾಯಿಯ ಸ್ನೇಹದಿಂದ ಹೇಗೆ ಬದಲಾಗುತ್ತ ಹೋಗುತ್ತಾಳೆ ಎಂಬ ಕಥಾಹಂದರವಿದೆ.---

ಕೆಲಸ ಗುರುತಿಸಿದ್ದಕ್ಕೆ ಖುಷಿ ಇದೆ

- ಪ್ರಮೋದ್‌ (ಅತ್ಯುತ್ತಮ ಪೋಷಕ ನಟ, ರತ್ನನ್‌ ಪ್ರಪಂಚ)

‘ರತ್ನನ್‌ ಪ್ರಪಂಚ’ ಸಿನಿಮಾದಲ್ಲಿ ನನಗೆ ಸಿಕ್ಕ ಪಾತ್ರ ಹೀರೋ ಪಾತ್ರದಷ್ಟೇ ಮಹತ್ವ ಪಡೆದಿತ್ತು. ಜನ ಆ ಪಾತ್ರವನ್ನು ಒಪ್ಪಿ ಅಪ್ಪಿಕೊಂಡರು. ಇದೀಗ ಅದೇ ಪಾತ್ರಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಂದಿರುವುದು ಬಹಳ ಖುಷಿ ಕೊಟ್ಟಿದೆ. 4 ವರ್ಷಗಳ ನಂತರ ಬರುತ್ತಿರುವ ಕಾರಣ ಸರ್ಪ್ರೈಸಿಂಗ್‌ ಆಗಿತ್ತು. ನನ್ನೊಳಗಿನ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ನಿರ್ಮಾಪಕಿ ಶ್ರುತಿ ನಾಯ್ಡು ಮತ್ತು ನಿರ್ದೇಶಕ ರಮೇಶ್‌ ಇಂದಿರಾ. ಇವತ್ತು ಪ್ರಶಸ್ತಿ ಬಂದ ಸಿಹಿಕ್ಷಣದಲ್ಲಿ ಅವರನ್ನೂ ಪ್ರೀತಿಯಿಂದ ನೆನೆಯುತ್ತೇನೆ.

ಹಳ್ಳಿ ಸೊಗಡಿನ ಚಿತ್ರಕ್ಕೆ ಸಿಕ್ಕ ಗೌರವ

- ರಘು ಕೆ.ಎಂ., ನಿರ್ದೇಶಕ (ಅತ್ಯುತ್ತಮ ಸಿನಿಮಾ ದೊಡ್ಡಹಟ್ಟಿ ಬೋರೇಗೌಡ)

ನಮ್ಮ ಪ್ರಾಮಾಣಿಕವಾದ ಕೆಲವನ್ನು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯವರು ಗುರುತಿಸಿರುವುದಕ್ಕೆ ಸಂತೋಷವಾಗುತ್ತದೆ. ಹಳ್ಳಿ ಸೊಗಡಿನ ಒಂದು ಒಳ್ಳೆಯ ಚಿತ್ರಕ್ಕೆ ಸಿಕ್ಕ ಗೌರವ ಎಂದು ಭಾವಿಸುತ್ತೇನೆ.

ನಾಲ್ಕು ಪ್ರಶಸ್ತಿ ಬಂದಿದ್ದು ಸಂತೋಷ

- ಕಿರಣ್‌ ರಾಜ್‌ ಕೆ., ನಿರ್ದೇಶಕ (ಅತ್ಯುತ್ತಮ ಸಿನಿಮಾ ದ್ವಿತೀಯ- 777 ಚಾರ್ಲಿ)

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ ಸೇರಿ ನಮ್ಮ ಚಿತ್ರಕ್ಕೆ ನಾಲ್ಕು ರಾಜ್ಯ ಪ್ರಶಸ್ತಿಗಳು ಬಂದಿವೆ. ಖುಷಿಯಾಗುತ್ತದೆ. ಯಾಕೆ ಖುಷಿ ಎಂದರೆ ಈ ಚಿತ್ರಕ್ಕಾಗಿ ನಟ ರಕ್ಷಿತ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ನಿರೀಕ್ಷೆ ಮಾಡಿದ್ದೆ. ಯಾಕೆಂದರೆ ನಾಯಿ ಜೊತೆ ನಟಿಸೋದು ಅಷ್ಟು ಸುಲಭ ಅಲ್ಲ. ಒಂದು ವರ್ಷ ತರಬೇತಿ ಮಾಡಿಕೊಂಡಿದ್ದಾರೆ. ಅವರ ಈ ಶ್ರಮಕ್ಕೆ ರಾಷ್ಟ್ರ ಮಟ್ಟದ ಗೌರವ ಸಿಗಲಿಲ್ಲ ಎನ್ನುವ ಬೇಸರ ಇತ್ತು. ಈಗ ರಾಜ್ಯ ಮಟ್ಟದಲ್ಲಿ ಸಿಕ್ಕಿದ್ದು, ಆ ಬೇಸರ ದೂರ ಆಗಿದೆ.---

ಅಚ್ಚರಿ ಆಯಿತು

- ಹೃದಯ ಶಿವ, ನಿರ್ದೇಶಕ (ಅತ್ಯುತ್ತಮ ಸಿನಿಮಾ ತೃತಿಯ- ಬಿಸಿಲು ಕುದುರೆ)

ಅತ್ಯುತ್ತಮ ಸಿನಿಮಾಗಳಲ್ಲಿ ನನ್ನ ಸಿನಿಮಾ ಆಯ್ಕೆ ಆಗಿದೆ ಅಂತ ಕೇಳಿಯೇ ಆಶ್ಚರ್ಯ ಆಯಿತು. ಯಾವುದೇ ನಿರೀಕ್ಷೆಗಳಿಲ್ಲದೆ ಸಿನಿಮಾ ಮಾಡಿದವನು. ತುಂಬಾ ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಈಗ ಗುರುತಿಸಿದ್ದಾರೆ ಎನ್ನುವ ಸಂತೋಷ ಇದೆ.

PREV
Read more Articles on

Recommended Stories

2ನೇ ದಿನ 100 ಕೋಟಿ ಕ್ಲಬ್‌ ಸೇರಿದ ಕಾಂತಾರ-1 ಚಿತ್ರ - ಕನ್ನಡದಲ್ಲೂ ಅತ್ಯಧಿಕ ಗಳಿಕೆಯ ದಾಖಲೆ
ಮದುವೆಗೆ ಮನೆಯವರು ಹುಡುಗನನ್ನು ಹುಡುಕುತ್ತಿದ್ದಾರೆ: ರಚಿತಾ ರಾಮ್‌