ಸಿನಿವಾರ್ತೆ
ಖ್ಯಾತ ನಟ, ನಿರ್ದೇಶಕ ಟಿ.ಎನ್. ಸೀತಾರಾಮ್ ಇದೀಗ ಓಟಿಟಿಗೆ ಸೀರೀಸ್ ಮಾಡುತ್ತಿದ್ದಾರೆ. ಈ ಸೀರೀಸ್ ಹೆಸರು ‘ಮಾಯಾ ಮರ್ಡರ್ ಕೇಸ್’. ಇದರಲ್ಲಿ ನಿರ್ದೇಶಕ ಪವನ್ ಒಡೆಯರ್ ಮತ್ತು ಸಿರಿ ರವಿಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸಿಎಸ್ಪಿ ಪಾತ್ರದಲ್ಲಿ ಟಿ.ಎನ್. ಸೀತಾರಾಮ್ ಅಭಿನಯಿಸುತ್ತಿದ್ದಾರೆ.
ಹೊಸ ಪ್ರಯೋಗಕ್ಕೆ ಮುಂದಾಗಿರುವ ಟಿ.ಎನ್. ಸೀತಾರಾಮ್ ಅವರು ಶೀಘ್ರದಲ್ಲಿಯೇ ಭೂಮಿಕಾ ಟಾಕೀಸ್ ಹೆಸರಿನ ಕಿರು ಓಟಿಟಿಯೊಂದನ್ನು ಪ್ರಾರಂಭಿಸಲಿದ್ದಾರೆ. ಆ ಓಟಿಟಿಯಲ್ಲಿ ಈ ಸೀರೀಸ್ ಪ್ರಸಾರವಾಗಲಿದೆ. ಈ ಸೀರೀಸ್ ಕುರಿತು ಟಿ.ಎನ್. ಸೀತಾರಾಮ್ ಅವರು, ‘ಇದೊಂದು ಕೋರ್ಟ್ ರೂಮ್ ಡ್ರಾಮಾ. ಇದನ್ನು ಪ್ರೀತಿಯ ಕತೆ ಅಂತ ಹೇಳಬಹುದು ಅಥವಾ ಪ್ರೀತಿ ಇಲ್ಲದ ಕತೆ ಎಂದೂ ಹೇಳಬಹುದು. ಕತೆಯ ಕುರಿತು ಇಷ್ಟು ಮಾತ್ರ ಹೇಳಬಲ್ಲೆ. ಇನ್ನು ಓಟಿಟಿ ಕುರಿತಾಗಿ ಮುಂದಿನ ದಿನಗಳಲ್ಲಿ ವಿವರವಾಗಿ ತಿಳಿಸುತ್ತೇನೆ’ ಎನ್ನುತ್ತಾರೆ.
ಪ್ರಸ್ತುತ ಈ ಸೀರೀಸ್ಗೆ ಚಿತ್ರೀಕರಣ ಶುರುವಾಗಿದ್ದು, ಚಿತ್ರೀಕರಣ ಪೂರ್ಣಗೊಂಡ ಬಳಿಕ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಹನುಮಂತೇಗೌಡ, ರವಿ ಭಟ್, ಮಾನಸಿ ಸುಧೀರ್, ಸುಧಾ ಬೆಳವಾಡಿ, ನಾಗಾರ್ಜುನ, ಚಂದನ್ ಶಂಕರ್ ತಾರಾಬಳಗದಲ್ಲಿದ್ದಾರೆ. ಪುರುಷೋತ್ತಮ್ ಮತ್ತು ಶ್ರೀಧರ್ ನಿರ್ಮಿಸುತ್ತಿದ್ದಾರೆ. ಕತೆ, ಚಿತ್ರಕತೆ ಟಿ.ಎನ್.ಎಸ್ ಅವರೇ ರಚಿಸಿದ್ದು, ಚಿತ್ರಕತೆ ತಂಡದಲ್ಲಿ ಚಂದನ್ ಶಂಕರ್ ಮತ್ತು ಸಮುದ್ಯತಾ ಕಂಜರ್ಪಣೆ ಇದ್ದಾರೆ.