ಮುಂಬೈ ದಾಳಿಯ ಹಿಂದಿನ ಗುಪ್ತಚರ ಕಥಾ ಹಂದರವನ್ನು ಹೊಂದಿರುವ ರಣವೀರ್‌ ಸಿಂಗ್‌ ನಟನೆಯ ಧುರಂಧರ್‌ ಚಿತ್ರವು ಪಾಕಿಸ್ತಾನದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪಾಕ್‌ನ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ನಿಷೇಧವಿದ್ದರೂ ಸಹ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಲಾಹೋರ್‌: ಮುಂಬೈ ದಾಳಿಯ ಹಿಂದಿನ ಗುಪ್ತಚರ ಕಥಾ ಹಂದರವನ್ನು ಹೊಂದಿರುವ ರಣವೀರ್‌ ಸಿಂಗ್‌ ನಟನೆಯ ಧುರಂಧರ್‌ ಚಿತ್ರವು ಪಾಕಿಸ್ತಾನದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪಾಕ್‌ನ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ನಿಷೇಧವಿದ್ದರೂ ಸಹ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಜ.30ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಪಾಕ್‌ ನೋಡುಗರು ಫಿದಾ ಆಗಿದ್ದು, ಚಿತ್ರದಲ್ಲಿ ಪಾಕಿಸ್ತಾನಿಗರನ್ನು ಸರಿಯಾಗಿ ತೋರಿಸಲಾಗಿದೆ. ‘ನಾವು ನೋಡಿದ ಬಾಲಿವುಡ್‌ ಚಿತ್ರಗಳಲ್ಲಿಯೇ ‘ಧುರಂಧರ್‌’ ಅತ್ಯದ್ಭುತ ಚಿತ್ರವಾಗಿದೆ. ರಣವೀರ್‌ ಸಿಂಗ್‌ ನಟನೆ ಉತ್ತಮವಾಗಿದೆ. ಚಿತ್ರವನ್ನು ಚಿತ್ರವನ್ನಾಗಿ ನೋಡಿ. ನಮಗೆ ಭಾರತದ ಮೇಲೆ ಯಾವುದೇ ದ್ವೇಷವಿಲ್ಲ’ ಎಂದು ಪಾಕಿಸ್ತಾನ ನೋಡುಗರೊಬ್ಬರು ಗುಣಗಾನ ಮಾಡಿದ್ದಾರೆ.

==

ಮತಾಂತರ ತಡೆ ಕಾಯ್ದೆ ವಿರುದ್ಧ ಕರ್ನಾಟಕಕ್ಕೆ ಸುಪ್ರೀಂ ನೋಟಿಸ್‌

ನವದೆಹಲಿ: ಮತಾಂತರ ತಡೆ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸೇರಿದಂತೆ 12 ರಾಜ್ಯಗಳಿಗೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಉತ್ತರಕ್ಕೆ ಇದಕ್ಕೆ 4 ವಾರಗಳ ಕಾಲಾವಕಾಶ ನೀಡಿದೆ. ಭಾರತದ ಚರ್ಚ್‌ಗಳ ರಾಷ್ಟ್ರೀಯ ಮಂಡಳಿ (ಎನ್‌ಸಿಸಿಐ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಚರ್ಚ್‌ಗಳ ಮಂಡಳಿ ಸಲ್ಲಿಸಿರುವ ಪಿಐಎಲ್‌ನಲ್ಲಿ, ಹಲವು ರಾಜ್ಯಗಳು ಜಾರಿಗೆ ತಂದಿರುವ ಮತಾಂತರ ವಿರೋಧಿ ಕಾನೂನಿಂದ ಜನರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಇದು ಅಸಾಂವಿಧಾನಿಕ ಎಂದು ವಾದಿಸಲಾಗಿದೆ. ಜತೆಗೆ, ಸ್ವ-ಇಚ್ಛೆಯ ಮತಾಂತರಕ್ಕೂ ಇದು ಅಡ್ಡಿ ಮಾಡುತ್ತದೆ ಎಂಬುದು ಚರ್ಚ್‌ಗಳ ವಾದ.

==

ಪ್ರವಚನದ ಆಲ್ಬಂಗಾಗಿ ದಲೈಲಾಮಾಗೆ ಗ್ರಾಮಿ ಪ್ರಶಸ್ತಿ

ಶಾಂತಿ, ಮಾನವೀಯತೆ ಹರಡಲು ಸಹಕಾರಿ: ಲಾಮಾ

ಲಾಸ್‌ಏಂಜಲಿಸ್‌: ಬೌದ್ಧರ ಧರ್ಮಗುರು ದಲೈಲಾಮಾ ಅವರ ಧ್ಯಾನದ ಕುರಿತ ಪ್ರವಚನದ ಆಲ್ಬಂಗೆ 68ನೇ ಗ್ರಾಮಿ ಪ್ರಶಸ್ತಿ ಲಭಿಸಿದೆ. ‘ಧ್ಯಾನ: ದಲೈ ಲಾಮಾ ಅವರ ಚಿಂತನೆಗಳು’ ಎಂಬ 10 ಕಂತುಗಳ 1 ತಾಸಿನ ಆಡಿಯೋಬುಕ್‌ಗೆ ‘ಅತ್ಯುತ್ತಮ ಆಡಿಯೋ ಪುಸ್ತಕ, ನಿರೂಪಣೆ ಮತ್ತು ಕಥೆಯ ರೆಕಾರ್ಡಿಂಗ್’ ವಿಭಾಗದಲ್ಲಿ ಪ್ರಸ್ತಿ ನೀಡಲಾಗಿದೆ. ಅಮೆರಿಕದ ಲಾಸ್‌ಏಂಜಲಿಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾಮಾ ಅವರ ಬದಲು ಅವರ ಆಲ್ಬಂನಲ್ಲಿರುವ ಗಾಯಕ ರುಫಸ್ ವೈನ್‌ರೈಟ್ ಪ್ರಶಸ್ತಿ ಸ್ವೀಕರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ದಲೈಲಾಮಾ, ‘ನಾನು ಇದನ್ನು ಕೃತಜ್ಞತೆ ಮತ್ತು ನಮ್ರತೆಯಿಂದ ಸ್ವೀಕರಿಸುತ್ತೇನೆ. ಇದು ವೈಯಕ್ತಿಕವಾಗಿ ನನಗೊಬ್ಬನಿಗೆ ಸೇರದೆ, ನಮ್ಮೆಲ್ಲರ ಒಗ್ಗಟ್ಟಿನ ಪರಿಶ್ರಮಕ್ಕೆ ಸಂದ ಗೌರವವೆಂದು ಪರಿಗಣಿಸುತ್ತೇನೆ’ ಎಂದು ಸಂತಸ ವ್ಯಕ್ತಪಡಿಸಿದರು. ಈ ನಡುವೆ ‘ಲಾಮಾ ಧಾರ್ಮಿಕ ವ್ಯಕ್ತಿಯಲ್ಲ. ಅವರು ಧರ್ಮದ ಹೆಸರಲ್ಲಿ ಚೀನಾ ವಿರೋಧಿ ಕೃತ್ಯಗಳನ್ನು ಮಾಡುತ್ತಿರುವ ದೇಶಭ್ರಷ್ಟರು’ ಎಂದು ಚೀನಾ ಕಿಡಿಕಾರಿದೆ.

==

ಸಿಇಸಿ ಸಭೆ ಬಹಿಷ್ಕರಿಸಿ ಹೊರನಡೆದ ಮಮತಾ!

ಸಿಇಸಿ ಜ್ಞಾನೇಶ್‌ ಕುಮಾರ್‌ ದುರಹಂಕಾರಿ

ಎಸ್‌ಐಆರ್‌ಗೆ ತಡೆ ಕೋರಲು ಸೇರಿದ್ದ ಸಭೆ

ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ದುರಹಂಕಾರಿ ಎಂದು ಕರೆದು, ತಮ್ಮ ನಿಯೋಗವನ್ನು ಚುನಾವಣಾ ಆಯೋಗ ಅವಮಾನಿಸಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜ್ಞಾನೇಶ್‌ ಕುಮಾರ್‌ ಜತೆಗಿನ ಸಭೆಯಿಂದ ಹೊರನಡೆದ ಘಟನೆ ಸೋಮವಾರ ದೆಹಲಿಯಲ್ಲಿ ನಡೆದಿದೆ.ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ವಿರೋಧಿಸಿ ಕಪ್ಪು ಶಾಲುಗಳನ್ನು ಹೊದ್ದು, ಮಮತಾ ಬ್ಯಾನರ್ಜಿ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಸಂಸದ ಕಲ್ಯಾಣ್ ಬ್ಯಾನರ್ಜಿ ಹಾಗೂ ಎಸ್‌ಐಆರ್‌ ಸಂತ್ರಸ್ತರು ಎನ್ನಲಾದ ಕುಟುಂಬಗಳ 12 ಸದಸ್ಯರ ನಿಯೋಗ ಜ್ಞಾನೇಶ್‌ ಕುಮಾರ್‌ ಹಾಗೂ ಆಯೋಗದ ಪ್ರಮುಖರನ್ನು ಭೇಟಿಯಾಗಿತ್ತು. ಈ ವೇಳೆ ಎಸ್‌ಐಆರ್‌ಗೆ ತಡೆ ನೀಡುವಂತೆ ಕೋರಿದ್ದಾರೆ. ಅದಕ್ಕೆ ಆಯುಕ್ತರು ಪ್ರತಿಕ್ರಿಯಿಸುವ ಮುನ್ನವೇ ಸಭೆಯನ್ನು ಬಹಿಷ್ಕರಿಸಿ ಮಮತಾ ಹೊರನಡೆದಿದ್ದಾರೆ.ಆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಸ್‌ಐಆರ್‌ನಿಂದ ಇಷ್ಟು ಜನ ಸತ್ತಿದ್ದಾರೆ, ಇದಕ್ಕೆ ಚುನಾವಣಾ ಆಯೋಗವೇ ಹೊಣೆ. ಜ್ಞಾನೇಶ್‌ ಕುಮಾರ್‌ ಬಿಜೆಪಿ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮೊಂದಿಗೆ ತುಂಬಾ ಕೆಟ್ಟದಾಗಿ ವರ್ತಿಸಿದರು. ನಾವು ನ್ಯಾಯಕ್ಕಾಗಿ ಇಲ್ಲಿಗೆ ಬಂದಿದ್ದಕ್ಕೆ ಕ್ಷಮಿಸಿ ಎಂದೆ. ನಿಮಗೆ ಬಿಜೆಪಿಯ ಶಕ್ತಿಯಿದ್ದರೆ, ನಮಗೆ ಜನರ ಶಕ್ತಿ ಇದೆ ಎಂದು ಸಭೆಯನ್ನು ಬಹಿಷ್ಕರಿಸಿ ಹೊರಬಂದೆವು. ಅವರು ನಮ್ಮನ್ನು ಅವಮಾನಿಸಿದ್ದಾರೆ. ಅವರು ತುಂಬಾ ದುರಹಂಕಾರಿಗಳು’ ಎಂದು ಆರೋಪಿಸಿದರು.