ಸಿನಿವಾರ್ತೆ
ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಜೋಡಿಯ ‘ಸಂಜು ವೆಡ್ಸ್ ಗೀತಾ 2’ ಚಿತ್ರ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಸಿನಿಮಾ ಹೊಸದಾಗಿ ಮರು ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಅಂದಹಾಗೆ ಇದೇ ಜೂನ್ 6ಕ್ಕೆ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ.
ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದು, ನಟ ಶಿವರಾಜ್ ಕುಮಾರ್ ಅವರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ‘ಇಂಥ ಚಿತ್ರಗಳನ್ನು ಮರು ಬಿಡುಗಡೆ ಮಾಡುವುದಕ್ಕೆ ಧೈರ್ಯ ಮಾಡಿರುವುದು ತುಂಬಾ ಒಳ್ಳೆಯ ನಿರ್ಧಾರ. ಒಳ್ಳೆಯ ಚಿತ್ರಗಳು ಪ್ರೇಕ್ಷಕರಿಂದ ದೂರ ಆಗಬಾರದು. ಈ ನಿಟ್ಟಿನಲ್ಲಿ ‘ಸಂಜು ವೆಡ್ಸ್ ಗೀತಾ 2’ ಮತ್ತೆ ಪ್ರೇಕ್ಷಕರ ಮುಂದೆ ತರುತ್ತಿರುವ ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಬೇಕು. ನಾನು ಎರಡು ಹಾಡುಗಳನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿದೆ. ಈ ಚಿತ್ರ ಗೆಲ್ಲಬೇಕು’ ಎಂದು ಶಿವರಾಜ್ ಕುಮಾರ್ ಅವರು ಹೇಳಿದರು.
ನಿರ್ದೇಶಕ ನಾಗಶೇಖರ್, ‘ಈಗ ಮತ್ತೆ ನಿಮ್ಮ ಮುಂದೆ ಬರುತ್ತಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರ ಹೊಸದಾಗಿರುತ್ತದೆ. ಇದು ನಿಜವಾದ ಸಂಜು ಮತ್ತು ಗೀತಾಳ ಪ್ರೇಮ ಕತೆ. ಇಡೀ ಸಿನಿಮಾ ಎಲ್ಲೂ ಬೋರ್ ಆಗಲ್ಲ. 20 ನಿಮಿಷಗಳ ಕತೆಯನ್ನು ಹೊಸದಾಗಿ ಸೇರಿಸಿದ್ದು, ಇದೇ ಚಿತ್ರದ ಜೀವಾಳ. ಪ್ರೇಕ್ಷಕನನ್ನು ಹಿಡಿದಿಡುವ ಗುಣ ಈ ಚಿತ್ರಕ್ಕಿದೆ’ ಎಂದರು. ಶ್ರೀನಗರ ಕಿಟ್ಟಿ, ‘ನಮ್ಮ ಚಿತ್ರವನ್ನು ಪ್ರೇಕ್ಷಕರು ನೋಡುತ್ತಾರೆಂಬ ನಂಬಿಕೆ ಇದೆ. ಆ ನಂಬಿಕೆಯಿಂದಲೇ ನಿಮ್ಮ ಮುಂದೆ ಮತ್ತೆ ಬರುತ್ತಿದ್ದೇವೆ’ ಎಂದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರವೀಣ್ ಕುಮಾರ್, ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್, ಕೆ ಪಿ ಶ್ರೀಕಾಂತ್, ನಿರ್ದೇಶಕ ಎಸ್ ಮಹೇಂದರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು