ಮೋದಿ,ಆರೆಸ್ಸೆಸ್,ಶಾ ದೇಶದ್ರೋಹಿ:
- ಸಂವಿಧಾನ ದುರ್ಬಲ ಆರೋಪ
- ಇದು ಉಗ್ರರ ಭಾಷೆ: ಬಿಜೆಪಿ ಕಿಡಿರಾಯ್ಬರೇಲಿ/ ಅಮೇಠಿ‘ನಿತ್ಯವೂ ಸಂವಿಧಾನದ ಮೇಲೆ ದಾಳಿ ನಡೆಸುವ ಮತ್ತು ದೇಶದ ಹಿತಾಸಕ್ತಿಯನ್ನು ಆಯ್ದ ಉದ್ಯಮಿಗಳಿಗೆ ಮಾರಾಟ ಮಾಡುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರ್ಎಸ್ಎಸ್ ದೇಶದ್ರೋಹಿಗಳು’ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.ತಮ್ಮ ಲೋಕಸಭಾ ಕ್ಷೇತ್ರ ಉತ್ತರಪ್ರದೇಶದ ರಾಯ್ಬರೇಲಿಯಲ್ಲಿ ಬುಧವಾರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ರಾಹುಲ್, ‘ನರೇಗಾ ಯೋಜನೆ ದುರ್ಬಲಗೊಳಿಸುವ ಮೂಲಕ, ಜಾತಿಗಣತಿ ನಡೆಸದೇ ಇರುವ ಮೂಲಕ ಮತ್ತು ಕೆಲವೇ ಕೆಲವು ಉದ್ಯಮಿಗಳಿಗೆ ನೆರುವ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ 24 ಗಂಟೆಯೂ ಸಂವಿಧಾನದ ಮೇಲೆ ದಾಳಿ ಮಾಡುವ ಕೆಲಸ ಮಾಡುತ್ತಲೇ ಇದ್ದಾರೆ. ಅಲ್ಲದೆ, ಮೋದಿ ಕೆಲವೇ ಕೆಲವು ಉದ್ಯಮಿಗಳಿಗೆ ದೇಶ ಮಾರಿದ್ದಾರೆ’ ಎಂದು ಆರೋಪಿಸಿದರು.’
ಬಳಿಕ ಅಮೇಠಿಯಲ್ಲೂ ತಮ್ಮ ಹೇಳಿಕೆ ಪುನರುಚ್ಚರಿಸಿದ ರಾಹುಲ್ ಗಾಂಧಿ, ‘ಮೋದಿ ಮತ್ತು ಅಮಿತ್ ಶಾ ದೇಶದ್ರೋಹಿಗಳು ಎಂದು ನಾನು ರಾಯ್ಬರೇಲಿಯಲ್ಲಿ ಹೇಳಿದ್ದೆ. ಯಾರಾದರೂ ನಿತ್ಯವೂ ಸಂವಿಧಾನವನ್ನು ದುರ್ಬಲಗೊಳಿಸುತ್ತಲೇ ಇದ್ದರೆ ಮತ್ತು ಅದನ್ನು ನಾಶ ಮಾಡುತ್ತಲೇ ಇದ್ದರೆ ಅವರನ್ನು ದೇಶ ದ್ರೋಹಿಗಳು ಅನ್ನದೇ ಮತ್ತಿನ್ನೇನು ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು. ಜೊತೆಗೆ ಇಂಥ ಹೇಳಿಕೆ ಬಗ್ಗೆ ನಾನು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸುತ್ತಾರೆ. ಆದರೆ ನಾನು ಎಂದಿಗೂ ಈ ಬಗ್ಗೆ ಕ್ಷಮೆ ಯಾಚಿಸಲಾರೆ. ನನಗೆ ಅವರ ಬಗ್ಗೆ ಹೆದರಿಕೆ ಏನೂ ಇಲ್ಲ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ‘ಪ್ರಧಾನಿಯವರ ಬಗ್ಗೆ ಲೋಕಸಭಾ ವಿಪಕ್ಷ ನಾಯಕ ಹೇಳಿರುವ ಮಾತುಗಳು ಅವರು ಪಾಲಿಸುವುದನ್ನು ಪ್ರತಿಬಿಂಬಿಸುತ್ತದೆ. ಕಾಂಗ್ರೆಸ್ ಯಾವಾಗಲೂ ಅವರ ಬಗ್ಗೆ ಕೆಟ್ಟ ಪದ ಬಳಸಿ, ಅವಮಾನಿಸುತ್ತದೆ. ಆ ರೀತಿ ಮಾತನಾಡುವ ಮುನ್ನ ರಾಹುಲ್ ಗಾಂಧಿ ಮೊದಲು ತಮ್ಮ ಕುಟುಂಬ ನೋಡಿಕೊಳ್ಳಬೇಕು’ ಎಂದು ತಿರುಗೇಟು ನೀಡಿದ್ದಾರೆ.