ಚಮೋಲಿ: ಉತ್ತರಾಖಂಡದ ಪ್ರಸಿದ್ಧ ಬದರೀನಾಥ ದೇವಾಲಯದಲ್ಲೂ ಹುಂಡಿ ಕಳವು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಅಕ್ರಮ ನಡೆದಿರುವುದು ನಿಜ ಎಂದು ಬಹಿರಂಗಪಡಿಸಿದೆ. ಇದಕ್ಕೆ ಸಂಬಂಧಿಸಿದ 18 ಪುಟಗಳ ವರದಿಯನ್ನು ಬದರೀನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಸಿಇಒಗೆ ಸಲ್ಲಿಸಿದೆ.
ಉತ್ತರಾಖಂಡ ಸರ್ಕಾರವು ಬಿಕೆಟಿಸಿಯ ಸಿಇಒಗೆ ತನಿಖಾ ವರದಿಯಲ್ಲಿ ಹೆಸರಿಸಲಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ.
ಹಲವು ಬಾರಿ ಕಳ್ಳತನ:
ಬದರೀನಾಥ ಮಂದಿರದ ದೇಣಿಗೆಯನ್ನು ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ, ದೇವಾಲಯ ಸಮಿತಿ 4 ಸದಸ್ಯರನ್ನುಳ್ಳ ತನಿಖಾ ತಂಡವನ್ನು ರಚನೆ ಮಾಡಿತ್ತು. ಪ್ರಮುಖ ಆರೋಪಿಯಾದ, ಸಮಿತಿ ಅಧ್ಯಕ್ಷರ ಕಚೇರಿಯ ವೈಯಕ್ತಿಕ ಸಹಾಯಕ ಪ್ರಮೋದ್ ನೌಟಿಯಾಲ್ನನ್ನು ಜು.7ರಂದು ತಕ್ಷಣ ಅಮಾನತುಗೊಳಿಸಲಾಗಿತ್ತು.
ಇದೀಗ ಎಸ್ಐಟಿ ತನಿಖೆ ಪೂರ್ಣಗೊಳಿಸಿದೆ. ಸಿಸಿಟೀವಿ ದೃಶ್ಯಾವಳಿಗಳ ಪ್ರಕಾರ ಆರೋಪಿಯು ಹಣವನ್ನು ಅನುಮಾನಾಸ್ಪದವಾಗಿ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಭಕ್ತರ ಕಾಣಿಕೆ ಹಣ ಮತ್ತು ಇತರ ವಸ್ತುಗಳ ಕಳ್ಳತನ ಒಂದು ಬಾರಿ ಅಲ್ಲ, ಹಲವು ಬಾರಿ ನಡೆದಿದೆ ಎಂದು ಹೇಳಿದೆ.
ಸಿಸಿಟೀವಿ ಅಳವಡಿಕೆಗೆ ಸೂಚನೆ:
ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಎಸ್ಐಟಿ ಹಲವು ಸಲಹೆಗಳನ್ನು ನೀಡಿದೆ. ಕಾಣಿಕೆ ಎಣಿಕೆ ಕೊಠಡಿಯಲ್ಲಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ದೇವಾಲಯದ ಪ್ರದಕ್ಷಿಣಾ ಮಾರ್ಗದಲ್ಲಿನ ಎಲ್ಲಾ ಮರೆಯ ಜಾಗಗಳನ್ನು ಸಿಸಿಟಿವಿ ವ್ಯಾಪ್ತಿಯಲ್ಲಿ ತರಬೇಕು ಎಂದು ಶಿಫಾರಸು ಮಾಡಿದೆ.
ಅಯೋಧ್ಯೆ ಬೆನ್ನಲ್ಲೇ ಉತ್ತರಾಖಂಡದ ಬದರೀನಾಥ ದೇಗುಲದಲ್ಲಿ ಹುಂಡಿ ಹಣ ಕಳವು ಆರೋಪ
ಆರೋಪದ ಕುರಿತು ತನಿಖೆ ನಡೆಸಲು ನಾಲ್ವರು ಸದಸ್ಯರ ತನಿಖಾ ಸಮಿತಿ ರಚಿಸಿದ್ದ ಬಿಕೆಟಿಸಿ
ಇದೀಗ ತನಿಖಾ ಸಮಿತಿಯಿಂದ 18 ಪುಟದ ವರದಿ ಸಲ್ಲಿಕೆ. ಹಲವು ಬಾರಿ ಕಳ್ಳತನದ ಬಗ್ಗೆ ಮಾಹಿತಿ
ಸಿಸಿಟೀವಿಗಳಲ್ಲಿ ಹಲವು ಬಾರಿ ಹಣ ಕಳ್ಳತನ ಮಾಡಿರುವುದು ಪತ್ತೆಯಾಗಿದೆ ಎಂದು ವರದಿ ಉಲ್ಲೇಖ
ಜೊತೆಗೆ ಮುಂದಿನ ದಿನಗಳಲ್ಲಿ ಇಂಥ ಘಟನೆ ಪುನರಾವರ್ತನೆ ಆಗದಂತೆ ತಡೆಗೆ ಹಲವು ಶಿಫಾರಸು
