ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಶ್ರೀ ಚನ್ನಕೇಶವ ದೇಗುಲದ ಹುಂಡಿ ಹಣ ಎಣಿಕೆ ಮಾಡುವ ವೇಳೆ ₹1.98 ಲಕ್ಷ ನಗದು ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.ಗರ್ಭಗುಡಿಯ ಹುಂಡಿ ತೆಗೆದು ಹಣವನ್ನು ಎಣಿಸಲು ದೇಗುಲದ ಹಿಂಭಾಗದ ಕಲ್ಯಾಣ ಮಂಟಪಕ್ಕೆ ತಂದು ಸುರಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ನಿಯೋಜಿಸಿದ್ದ ನೀಲಕಂಠ ಎಂಬಾತ ಹಣ ಕಳವು ಮಾಡಿದ್ದು, ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಳ್ಳತನದ ಯತ್ನ ವಿಫಲವಾಗಿದೆ. ಆರೋಪಿ ಹುಂಡಿಯಿಂದ ತೆಗೆದ ಕಳವು ಮಾಡಲು ಯತ್ನಿಸಿದ್ದ ವೇಳೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯ ವೇಳೆ ಒಟ್ಟು 1,98,000 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಕಳ್ಳತನದ ಯತ್ನದ ಹಿಂದಿನ ಉದ್ದೇಶ ಹಾಗೂ ಇತರರ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದರೂ, ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಯ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಅಲ್ಲೇ ಇದ್ದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ತಿಳಿಸಿದರುಈ ವೇಳೆ ಮಾತನಾಡಿದ ಅವರು, ಪ್ರತಿ ಬಾರಿಯಂತೆ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ಪ್ರತಿ ಬಾರಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಅದರಂತೆ ಈ ವರ್ಷವು ಕೂಡ ವಿಡಿಯೋ ಚಿತ್ರೀಕರಣ ಜೊತೆಗೆ ಸರ್ವೋದಯ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಬ್ಯಾಂಕಿನ ಸಿಬ್ಬಂದಿಗಳು ದೇಗುಲದ ನೌಕರರು ಒಗ್ಗೂಡಿ ಎಣಿಕೆ ಕಾರ್ಯ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನೀಲಕಂಠ ಎಂಬ ವ್ಯಕ್ತಿಯೊಬ್ಬ ಸುರಿಯುತ್ತಿದ್ದ ಹಣವನ್ನು ಅಲ್ಲಿ ವಿದ್ಯಾರ್ಥಿಗಳು ಎಣಿಕೆ ಕಾರ್ಯ ಸಂದರ್ಭ ಯಾರಿಗೂ ತಿಳಿಯದ ಹಾಗೆ ಸುಮಾರು ೧ ಲಕ್ಷದ ೯೮ ಸಾವಿರ ಹಣವನ್ನು ಜರ್ಕಿನ್ ಒಳಗಡೆ ಹಾಕಿದ್ದನ್ನು ಗಮನಿಸಿದ ಹೊಯ್ಸಳ ಪೊಲೀಸರಾದ ಮೋಹನ್, ಮಂಜುನಾಥ್ , ಹಾಸನದ ಪೊಲೀಸ್ ಮನು ಆತನನ್ನು ಹಿಡಿದು ತಪಾಸಣೆ ನಡೆಸಿದಾಗ ಹಣದ ಸಮೇತ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಇದರ ಹಿಂದಿನ ಸತ್ಯಾಸತ್ಯತೆಯನ್ನು ಪೊಲೀಸರು ಕಂಡುಹಿಡಿಯಬೇಕಾಗಿದೆ ಎಂದರು.
ಸಾರ್ವಜನಿಕರ ತೀವ್ರ ಆಕ್ರೋಶ:
ದೇಗುಲದಲ್ಲಿ ಇಷ್ಟೆಲ್ಲಾ ಭದ್ರತೆ ಇದ್ದರೂ ಒಬ್ಬ ವ್ಯಕ್ತಿ ಏಕಾಎಕಿ ಹುಂಡಿ ಎಣಿಕೆ ಹಣವನ್ನು ಕದಿಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಚನ್ನಕೇಶವ ದೇಗುಲ ಹುಂಡಿ ಎಣಿಕೆ ಸಂದರ್ಭದಲ್ಲಿ ಗೋಲ್ಮಾಲ್ ನಡೆಯುತ್ತಿದೆ ಎಂಬುದರ ಬಗ್ಗೆ ಹಲವಾರು ವರ್ಷಗಳಿಂದ ದೂರು ಕೇಳಿ ಬರುತ್ತಿತ್ತು. ಆದರೆ ಯಾವ ಪ್ರಕರಣಗಳು ಬೆಳಕಿಗೆ ಬಂದಿರಲಿಲ್ಲ. ಆದರೆ ಇಂದು ನಡೆದ ಘಟನೆ ಒಬ್ಬ ವ್ಯಕ್ತಿಯಿಂದ ಇದು ಅಸಾಧ್ಯ, ಇದರ ಹಿಂದೆ ಯಾರ ಕೈವಾಡ ಇದೆ ಎಂದು ಕಂಡುಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.