ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಆಮಿಷಗಳನ್ನು ನೀಡಿ ಮತಾಂತರಗೊಳಿಸುತ್ತಿರುವ ಇಂದಿನ ದಿನಗಳಲ್ಲಿ ಮಹದೇಶ್ವರ ಹಾಗೂ ಮಂಟೇಸ್ವಾಮಿ ನೀಲಗಾರರ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ.ಮಳವಳ್ಳಿ ಮಹದೇವಸ್ವಾಮಿ ಸಲಹೆ ನೀಡಿದರು.

ಮಠದ ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನಿಂದ ನಡೆದ ನೀಲಗಾರರ ಮೇಳ ಹಾಗೂ ಜನಪದ ಕಲರವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜಕ್ಕೆ ಬೆಳಕು ನೀಡಲು ಮಂಟೇಸ್ವಾಮಿ ಪರಂಜ್ಯೋತಿಯಾಗಿ ಉತ್ತರ ದೇಶದಿಂದ ದಕ್ಷಿಣ ಪ್ರಾಂತ್ಯಕ್ಕೆ ಬಂದು ಶಿಶು ಮಕ್ಕಳನ್ನು ಪಡೆದು ಪವಿತ್ರಗೊಳಿಸಿ ನೀಲಗಾರರನ್ನಾಗಿ ಮಾಡುವ ಮೂಲಕ ನೀಲಗಾರರ ಪರಂಪರೆ ಆರಂಭಿಸಿದ್ದರು ಎಂದರು.

ಆದಿ ಹೊನ್ನಾಯಕನಹಳ್ಳಿ ಧರೆಗೆ ದೊಡ್ಡವರಿಗೆ ಹೆಸರು ನೀಡಿದ ಪುಣ್ಯಸ್ಥಳವಾಗಿದೆ. ಮಠಾಧೀಪತಿಗಳಾದ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಅವರು ಹೊನ್ನಾಯಕಹಳ್ಳಿ, ಮಳವಳ್ಳಿ ಮಂಟೇಸ್ವಾಮಿ ಮಠ, ಕಪ್ಪಡಿ ರಾಚಪ್ಪಾಜಿ ಮಠಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ನೀಲಗಾರರ ಸಂಪ್ರದಾಯ ಉಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.


ಜಾನಪದ ಕಲೆ ನಶಿಸಿ ಹೋದರೆ ಗ್ರಾಮೀಣ ಸಂಸ್ಕೃತಿಯೂ ಕಣ್ಮರೆಯಾಗುವ ಸನ್ನಿವೇಷ ಎದುರಾಗುವುದರಿಂದ ಜಾನಪಕ ಕಲೆ ಉಳಿಸಿ-ಬೆಳೆಸಿ ಗ್ರಾಮೀಣ ಪ್ರದೇಶಗಳನ್ನು ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯಬೇಕು. ಸಾರ್ವಜನಿಕರು ಹಾಗೂ ಸರ್ಕಾರದ ಸಹಕಾರವೂ ಮುಖ್ಯವಾಗಿದೆ ಎಂದರು.

ಮುಖಂಡ ಎಸ್.ಸಿದ್ದೇಗೌಡ ಮಾತನಾಡಿ, ಜಾನಪದ ಪ್ರತಿಯೊಬ್ಬರ ನಡತೆಯನ್ನು ಎಚ್ಚರಿಸುವ ಸಾಧನವಾಗಿದೆ. ಜಾನಪದ ಪದದಲ್ಲಿರುವ ಅರ್ಥವನ್ನು ಅರ್ಥೈಸಿಕೊಂಡರೇ ಜೀವನದಲ್ಲಿ ಸಾರ್ಥಕತೆ ಕಾಣಬಹುದು. ನೀಲಗಾರರು ಮತ್ತು ಜಾನಪದ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಜಾನಪದ ಕಲೆ ಪ್ರದರ್ಶನದ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದರು.

ಈ ವೇಳೆ ಜಾನಪದ ಕಲಾ ತಂಡಗಳ ಪ್ರದರ್ಶನ, ಜಾನಪದ ಗಾಯನ ಗಮನ ಸೆಳೆಯಿತು. ಹಿರಿಯ ಮುಖಂಡರನ್ನು ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಟೇಸ್ವಾಮಿ ಮಠದ ಆಡಳಿತ ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ಪ್ರಕಾಶ್, ಗಂಗಾಧರ್, ರಾಜಣ್ಣ, ಶ್ರೀನಿವಾಸ್, ಸ್ವಾಮಿ, ವಿಷಕಂಠೇಗೌಡ, ಎಚ್.ಕೆ.ಸ್ವಾಮಿ, ಅಂಬರೀಷ್, ಯೋಗನಂದ್, ದಾಸಪ್ಪ, ಕುಳ್ಳಪ್ಪ, ಎಸ್.ಸಿದ್ದೇಗೌಡ ಸೇರಿದಂತೆ ಇತರರು ಇದ್ದರು.