ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ಪೂರಿಗಾಲಿ ಗ್ರಾಮದ ತಮ್ಮ ನಿವಾಸದಲ್ಲಿ ಮಂಗಳವಾರ ಭೇಟಿ ನೀಡಿದ್ದ ಬಿಎಲ್ಒ ಅಧಿಕಾರಿಗಳಿಗೆ ಮತದಾರರ ಮಾಹಿತಿ ನೀಡಿ ಮಾತನಾಡಿ, ಈಗಾಗಲೇ ಆರಂಭವಾಗಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಯು ಜುಲೈ 29ರ ವರೆಗೆ ನಡೆಯಲಿದೆ ಎಂದರು.

ಪ್ರತಿಯೊಬ್ಬ ಮತದಾರರು ತಮ್ಮ ಮನೆಗೆ ಭೇಟಿ ನೀಡುವ ಬಿಎಲ್ಒ ಅಧಿಕಾರಿಗಳಿಗೆ ಅಗತ್ಯ ಮಾಹಿತಿಗಳು ಹಾಗೂ ದಾಖಲೆಗಳನ್ನು ಸಲ್ಲಿಸುವ ಮೂಲಕ ಈ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗಿಯಾಗಬೇಕು. ತಮ್ಮ ಹೆಸರು ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ನಮ್ಮ ಕುಟುಂಬದ ಎಲ್ಲ ಸದಸ್ಯರು ಅಗತ್ಯ ದಾಖಲೆಗಳನ್ನು ನೀಡಿದ್ದೇವೆ. ಅಧಿಕಾರಿಗಳು ಸಹ ಯಾವುದೇ ಮತದಾರರು ಪಟ್ಟಿಯಿಂದ ಕೈತಪ್ಪಿ ಹೋಗದಂತೆ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.


ಈ ವೇಳೆ ತಹಸೀಲ್ದಾರ್ ಎಸ್.ವಿ.ಲೋಕೇಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ, ಕಂದಾಯ ನಿರೀಕ್ಷಕ ಎಂ.ಎಲ್.ಯೋಗೇಶ್, ಗ್ರಾಮ ಆಡಳಿತಾಧಿಕಾರಿ ಸಂಜಯ್, ಬಿಎಲ್ಒ ರಾಜೇಂದ್ರ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ: ಡಾ.ಆಶಾಲತ ಪುಟ್ಟೇಗೌಡ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣವಿದ್ಯಾರ್ಥಿಗಳಿಗೆ ಕೇವಲ ಪಠ್ಯಕ್ರಮ ಒಂದೇ ಮುಖ್ಯವಲ್ಲ. ಪಠ್ಯೇತರ ಚಟುವಟಿಕೆಗಳು ಬೇಕು ಎಂದು ಶಾಲೆ ಆಡಳಿತಾಧಿಕಾರಿ ಡಾ.ಆಶಾಲತ ಪುಟ್ಟೇಗೌಡ ಹೇಳಿದರು.

ಪಟ್ಟಣದ ಓಂ ಶ್ರೀನಿಕೇತನ ಶಾಲೆ ಮತ್ತು ಕಾಲೇಜಿನಲ್ಲಿ ಬ್ಲೂಮ್ ಎಂಬ ಶೀರ್ಷಿಕೆಯಡಿ ನೂತನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಪಠ್ಯಕ್ರಮ ಮಾತ್ರವಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಅವರ ವ್ಯಕ್ತಿತ್ವ ವಿಕಸನ ವೃದ್ಧಿಗೊಳ್ಳಲಿದೆ ಎಂದರು.ಮಕ್ಕಳನ್ನು ಶಾಲೆ ಪ್ರತಿನಿಧಿಯನ್ನಾಗಿ ಮಾಡುವುದರಿಂದ ಅವರಲ್ಲಿ ಧೈರ್ಯ ಮೂಡುತ್ತದೆ. ನಾಯಕತ್ವ ಗುಣಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಶಾಲೆ ಮೇಲ್ವಿಚಾರಕಿ ಸಂಕ್ರಾಂತಿ ಮಂಜುರಾಮ್ ಮಾತನಾಡಿ, ಶಿಕ್ಷಕರನ್ನು ನೋಡಿ ವಿದ್ಯಾರ್ಥಿಗಳು ಸಾಕಷ್ಟು ಕಲಿಯುತ್ತಾರೆ. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ಮುಂದಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಶಾಲಾ ಸಿಇಒ ಮಂಜುರಾಮ್, ಪ್ರಾಂಶುಪಾಲ ಶಿವಕುಮಾರ್, ಪುನೀತ್, ಸಿಂಚನ, ಪ್ರಿಯದರ್ಶಿನಿ, ಮಂಜುನಾಥ ಸೇರಿದಂತೆ ಇತರರು ಇದ್ದರು.

ದಿ.ಬಿ.ವೈ.ನೀಲೇಗೌಡರ 11ನೇ ಜಯಂತಿ ಆಚರಣೆ

ಪಾಂಡವಪುರ:ರೈಲ್ವೆ ನಿಲ್ದಾಣದ ಬಳಿ ಇರುವ ಪಿಎಸ್‌ಎಸ್‌ಕೆ ಪ್ರೌಢಶಾಲೆಯಲ್ಲಿ ಮಾಜಿ ಶಾಸಕ, ಪಿಎಸ್‌ಎಸ್‌ಕೆ ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷ ದಿ.ಬಿ.ವೈ.ನೀಲೇಗೌಡರ 114ನೇ ಜಯಂತಿಯನ್ನು ಆಚರಿಸಲಾಯಿತು.

ಪ್ರೌಢಶಾಲೆ ಕನ್ನಡ ಶಿಕ್ಷಕ ಶಿವು ಬಿ.ವೈ.ನೀಲೇಗೌಡರ ಸಾಧನೆ ಕುರಿತು ಮಾತನಾಡಿದರು. ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್ ಅವರು, ಬಿ.ವೈ.ನೀಲೇಗೌಡರ ಕುರಿತು ಪ್ರಧಾನ ಭಾಷಣ ಮಾಡಿದರು. ಈ ವೇಳೆ ನೀಲೇಗೌಡರ ಹುಟ್ಟು, ಬಾಲ್ಯ, ಶಿಕ್ಷಣ, ರಾಜಕೀಯ ಸೇರಿದಂತೆ ಅವರ ಸವಿವರವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಚ್.ಕೆ.ವೆಂಕಟೇಶ್, ಮುಖ್ಯ ಶಿಕ್ಷಕಿ ಬಿ.ಶೈಲಜಾ, ಶಿಕ್ಷಕರಾದ ಮಂಟೇಲಿಂಗಯ್ಯ,ನೇತ್ರಾವತಿ, ಸೌಭಾಗ್ಯ, ಪದ್ಮ, ತೋಟಗಾರಿಕೆ ಶಿಕ್ಷಕ ಟಿ.ಸಿ.ತಮ್ಮಣ್ಣ, ಸಿಬ್ಬಂದಿಗಳಾದ ನಾಗೇಂದ್ರ , ವಿಜಯಕುಮಾರ್, ಹೇಮಂತ್ ಕುಮಾರ್, ಸಾಧಿಕ್ ಸೇರಿದಂತೆ ಇತರರಿದ್ದರು.