ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಹಲಸು ಹಾಗೂ ಮಾವಿನ ಮೇಳದಲ್ಲಿ ದೈತ್ಯ ಹಲಸು ಎಲ್ಲರ ಮುಖ್ಯ ಆಕರ್ಷಣೆ ಕೇಂದ್ರವಾಗಿತ್ತು.

ಮೂರು ದಿನಗಳ ಕಾಲ ನಡೆದ ಹಲಸಿನ ಮೇಳದಲ್ಲಿ ಹತ್ತಾರು ಬಗೆಯ ಹಲಸುಗಳಿದ್ದರು ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಎಚ್. ಬಿ ಪ್ರದೀಪ್‌ ಕುಮಾರ್ ಬೆಳೆದಿರುವ ಬರೋಬ್ಬರಿ ೭೨ ಕೆ.ಜಿ ಹಲಸಿನ ಹಣ್ಣು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಒಬ್ಬರಿಂದ ಎತ್ತಲಾಗದ ಮೂರು ಸಮ ತೂಕದ ಹಲಸನ್ನು ನೋಡಿದ ತೋಟಗಾರಿಕೆ ಹಿರಿಯ ಸಹಾಯಕನಿರ್ದೇಶಕ ಭಾನುಪ್ರಕಾಶ್ ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ ಇದುವರಗೆ ೪೫ ರಿಂದ ೫೦ ಕೆ.ಜಿ ಹಲಸೇ ದೊಡ್ಡದು ಎನ್ನಲಾಗುತ್ತಿತ್ತು. ಆದರೆ ೭೨ ಕೆ.ಜಿ ಹಲಸು ಇಡಿ ಜಗತ್ತಿನಲ್ಲೇ ದೊಡ್ಡದು ಎನ್ನಬಹುದಾಗಿದ್ದು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ವರ್ಲ್ಡ್ ರೆಕಾರ್ಡ್‌ಗೆ ಕಳುಹಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಹಲಸು ಬೆಳೆಗಾರ ಪ್ರದೀಪ್ ಕುಮಾರ್ ಮಾತನಾಡಿ, ಕಳೆದ ೨೩ ವರ್ಷಗಳ ಹಿಂದೆ ಹಳೇಬೀಡಿನಿಂದ ತಂದು ಹಾಕಲಾಗಿರುವ ಹಲಸಿನ ಮರ ಕಳೆದ ಐದು ವರ್ಷದಿಂದ ಪ್ರತಿವರ್ಷ ೧೦ರಿಂದ ೧೫ ಕಾಯಿಗಳನ್ನು ಬಿಡುತ್ತಿದ್ದು ೬೦ ರಿಂದ ೮೦ ಕೆ.ಜಿ ತೂಕ ಹೊಂದಿವೆ. ಈ ಬಾರಿ ಹಲಸಿನ ಮೇಳ ಇದ್ದ ಕಾರಣ ಪ್ರದರ್ಶನಕ್ಕೆ ಇಡಲಾಗಿದೆ ಎಂದರು.