ಹಲಗೂರು:

ಸಮೀಪದ ಅಂಡನಹಳ್ಳಿ ಉಮಾಪತಿ ಪುತ್ರ ಪದ್ಮನಾಭ ಅವರ ಜಮೀನಿನಲ್ಲಿ 10 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದ್ದು, ಉರಗ ತಜ್ಞ ರಕ್ಷಿಸಿ ಅರಣ್ಯಕ್ಕೆ ಬಿಟ್ಟರು.

ಪದ್ಮನಾಭ ಅವರು ಹಸು ಕರುಗಳನ್ನು ಸಾಕಿಕೊಂಡು ವ್ಯವಸಾಯ ಮಾಡುತ್ತಿದ್ದು, ತಮ್ಮ ದನಕರುಗಳಿಗೆ ಎಂದಿನಂತೆ ಮೇವು ತರಲು ಜಮೀನಿನ ಬಳಿ ಸೀಮೆ ಹುಲ್ಲನ್ನು ಕುಯ್ಯಲು ಹೋದಾಗ ಹೆಬ್ಬಾವು ಕಂಡು ಭಯಭೀತರಾಗಿ ತಕ್ಷಣ ತನ್ನ ಸ್ನೇಹಿತರ ಮುಖಾಂತರ ಉರಗ ತಜ್ಞ ಕೃಷ್ಣ ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ಹೆಬ್ಬಾವನ್ನು ಸುರಕ್ಷಿತ ಹಿಡಿದು ಅರಣ್ಯ ಇಲಾಖೆಯವರ ಮುಖಾಂತರ ಅರಣ್ಯಕ್ಕೆ ಬಿಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ಗ್ರಾಮದ ಜಯಮ್ಮ ಅವರಿಗೆ ಹಾವೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರಿಗೆ ತಿಳಿಸಿದ್ದರು. ಆದರೆ, ಅದು ಪತ್ತೆ ಆಗಿರಲಿಲ್ಲ. ಇಂದು ಪದ್ಮನಾಭ ರವರ ಜಮೀನಿನಲ್ಲಿ ಪತ್ತೆಯಾಗಿದೆ.

ಪದ್ಮನಾಭ ಮಾತನಾಡಿ, ನಮ್ಮ ಜಮೀನಿನ ಪಕ್ಕ ಕಲ್ಲಿನಗುಡ್ಡೆ ಬಳಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ನಾವು ರಾತ್ರಿ ವೇಳೆ ಜಮೀನಿಗೆ ಬರುವುದಕ್ಕೆ ಭಯಪಡುವ ಪರಿಸ್ಥಿತಿಯಾಗಿದೆ. ಹೆಬ್ಬಾವು ಹಿಡಿದಂತೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಂಡು ಚಿರತೆ ಹಿಡಿಯಬೇಕು ಎಂದು ಕೋರಿದರು.


ಉರಗತಜ್ಞ ಕೃಷ್ಣ ಮಾತನಾಡಿ, ಹೆಬ್ಬಾವು ಕಂಡ ತಕ್ಷಣ ನನಗೆ ತಿಳಿಸಿದ್ದು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಅವರ ಗಮನಕ್ಕೆ ತಂದು ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ. ಕೊನ್ನಾಪುರ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಹೆಬ್ಬಾವನ್ನು ಹಿಡಿದಿದ್ದೆ. ಯಾರೇ ಹಾವುಗಳನ್ನು ಕಂಡು ಅವುಗಳನ್ನು ಸಾಯಿಸದೆ ತಕ್ಷಣ ನನ್ನ ಮೊ-9686955795 ಕರೆ ಮಾಡುವಂತೆ ತಿಳಿಸಿದರು.

ನಾಳೆ ಗಮಕ ಕಾರ್ಯಕ್ರಮಮಂಡ್ಯ:ವಿದ್ಯಾರ್ಥಿಗಳಿಗೆ ಕಾವ್ಯಗಳ ಬಗ್ಗೆ ಅಭಿಮಾನ, ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ಗಮಕ ಕಲಾಪರಿಷತ್ತು, ಬೆಂಗಳೂರು, ಮಂಡ್ಯ ಜಿಲ್ಲಾ ಘಟಕ ಮತ್ತು ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆ ಸಂಯುಕ್ತಾ ಶ್ರಯದಲ್ಲಿ ಜು.10ರಂದು ಮಧ್ಯಾಹ್ನ 3 ಗಂಟೆಗೆ ಗಮಕ ಕಾರ್ಯಕ್ರಮ ಆಯೋಜಿಸಿದೆ. ಎಲ್ಲರೂಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡ್ಯಾಫೋ ಡಿಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ.ಸುಜಾತಾ ಕೃಷ್ಣ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದೀಶ್, ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ, ಸಂಸ್ಥೆಯ ಮುಖೋಪಾಧ್ಯಾಯಿನಿ ನಯನ ಭಾಗವಹಿಸುವರು. ಗಮಕ ಕಾರ್ಯಕ್ರಮದಲ್ಲಿ. ಮಂಕುತಿಮ್ಮನ ಕಗ್ಗ ಹಾಗೂ ವೀರ ಲವ ಕಾವ್ಯ ಭಾಗವನ್ನು ಹಿರಿಯ ಗಮಕಿ ಸಿ.ಪಿ. ವಿದ್ಯಾಶಂಕರ್ ವಾಚಿಸಲಿದ್ದು ವ್ಯಾಖ್ಯಾನವನ್ನು ವ್ಯಾಖ್ಯಾನಕಾರ ಡಾ.ಎಸ್.ಶ್ರೀನಿವಾಸ ಶೆಟ್ಟಿ ನೀಡಲಿದ್ದಾರೆ.