ನವದೆಹಲಿ : 1984ರಲ್ಲಿ ದೆಹಲಿಯ ಜನಕಪುರಿಯಲ್ಲಿ ನಡೆದ ಸಿಖ್ ವಿರೋಧಿ ದಂಗೆಯ ಪ್ರಮುಖ ಆರೋಪಿಯಾಗಿದ್ದ ಕಾಂಗ್ರೆಸ್ನ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ದೆಹಲಿಯ ವಿಶೇಷ ಕೋರ್ಟ್ ಗುರುವಾರ ಖುಲಾಸೆಗೊಳಿಸಿದೆ. ಆದರೆ ದಂಗೆಗೆ ಸಂಬಂಧೀಸಿದ ಇನ್ನೊಂದು ಪ್ರಕರಣದಲ್ಲಿ ಕಳೆದ ವರ್ಷವೇ ಅವರು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವುದರಿಂದ ಜೈಲಿನಿಂದ ಹೊರಬರುವುದು ಅಸಾಧ್ಯವಾಗಿದೆ.
1984ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಜನಕ್ಪುರಿ ಪ್ರದೇಶದಲ್ಲಿ ಸಿಖ್ಖರನ್ನು ಬೆಂಕಿ ಹಚ್ಚಿ ಕೊಂದು ಹಿಂಸಾಚಾರ ನಡೆಸಲು ಪ್ರಚೋದನೆ ನೀಡಿದ ಆರೋಪ ಸಜ್ಜನ್ ಕುಮಾರ್ ಮೇಲಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ದಿಗ್ ವಿನಯ್ ಸಿಂಗ್, ‘ದಂಗೆಯ ಬಲಿಪಶುಗಳು ಮತ್ತು ಅವರ ಕುಟುಂಬಸ್ಥರು ಅನುಭವಿಸಿದ ಆಘಾತವನ್ನು ಕೋರ್ಟ್ ಅರ್ಥ ಮಾಡಿಕೊಂಡಿದೆ. ಆದರೆ ಆರೋಪಿಗಳನ್ನು ದೋಷಿಗಳೆಂದು ನಿರ್ಣಯಿಸಬೇಕಾದರೆ ಸಾಕ್ಷ್ಯಗಳ ಆಧಾರ ಬೇಕು. ಈ ಪ್ರಕರಣದಲ್ಲಿ ಸಜ್ಜನ್ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದ್ದರಿಂದ ಪ್ರಕರಣವನ್ನು ಖುಲಾಸೆ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ತೀರ್ಪಿನ ಬಗ್ಗೆ ದಂಗೆ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮೆದುರೇ ಘಟನೆ ನಡೆದಿದಿತ್ತು ಎಂದಿದ್ದಾರೆ.
ಏನಿದು ಪ್ರಕರಣ?:ಈ ಹಿಂದೆ ವಿಕಾಸ್ಪುರಿಯಲ್ಲಿ ನಡೆದ ಸೋಹನ್ ಸಿಂಗ್ ಮತ್ತು ಅವತಾರ್ ಸಿಂಗ್ ಕೊಲೆ ಆರೋಪದಿಂದ ಸಜ್ಜನ್ರನ್ನು ದೋಷಮುಕ್ತಗೊಳಿಸಲಾಗಿತ್ತು. ಆದರೆ ಸರಸ್ವತಿ ವಿಹಾರದ ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಅವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಕಳೆದ ಫೆ.25ರಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಹಾಗಾಗಿ ಜೈಲಿನಿಂದ ಹೊರಬರುವುದು ಅಸಾಧ್ಯವಾಗಿದೆ.