ನವದೆಹಲಿ: ಭಾರತದ ಇತಿಹಾಸದ ಕರಾಳ ಅಧ್ಯಾಯ ಎಂದೇ ಪರಿಗಣಿಸಲಾಗುವ ತುರ್ತು ಸ್ಥಿತಿ ಹೇರಿಕೆಯಾಗಿ ಬುಧವಾರಕ್ಕೆ 50 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ‘ಸಂವಿಧಾನ ಹತ್ಯಾ ದಿವಸ’ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇದರ ಪ್ರಯುಕ್ತ 1 ವರ್ಷವಿಡೀ ತುರ್ತುಸ್ಥಿತಿಯಲ್ಲಾದ ಪ್ರಜಾಪ್ರಭುತ್ವ ನಾಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಗೂ ಚಿಂತನೆ ನಡೆದಿದೆ.
1975ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತಿದ್ದಂತೆ, ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ದೇಶಾದ್ಯಂತ ತುರ್ತುಸ್ಥಿತಿ ಹೇರಿದ್ದರು. 1977ರಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸುವುದರೊಂದಿಗೆ ತುರ್ತು ಸ್ಥಿತಿಯನ್ನು ತೆರವುಗೊಳಿಸಲಾಗಿತ್ತು.
ಯಾವ್ಯಾವ ಕಾರ್ಯಕ್ರaಮ?:
ಸಂವಿಧಾನ ಹತ್ಯಾ ದಿನದ ಪ್ರಯುಕ್ತ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕೇಂದ್ರ ಸಂಸ್ಕೃತಿ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಪ್ರಜಾಪ್ರಭುತ್ವದ ಸ್ಫೂರ್ತಿಯನ್ನು ಪ್ರತಿಬಿಂಬಿಸುವ ‘ದೀಪಶಿಖಾ ಯಾತ್ರೆ’ಗೆ ಜೂ.25ರಂದು ದೆಹಲಿಯಲ್ಲಿ ಚಾಲನೆ ನೀಡಲಾಗುವುದು. ಈ ಯಾತ್ರೆಯು 1 ವರ್ಷದ ಕಾಲ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ, 2026ರ ಮಾ.21ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಕೊನೆಗೊಳ್ಳಲಿದೆ.
ಈ ಅವಧಿಯಲ್ಲಿ ನಾಗರಿಕ ಹಕ್ಕುಗಳ ನಿರ್ಬಂಧ, ಮಾಧ್ಯಮಗಳ ಕಾರ್ಯನಿರ್ವಹಣೆ ಮೇಲೆ ಕಡಿವಾಣ ಮತ್ತು ವಿರೋಧ ಪಕ್ಷದ ನಾಯಕರ ಸಾಮೂಹಿಕ ಸೆರೆವಾಸ ಸೇರಿದಂತೆ ಪ್ರಜಾಪ್ರಭುತ್ವದ ನಾಶದ ಹಲವು ಘಟನೆಗಳ ಬಗ್ಗೆ ಪ್ರಚಾರ ಮಾಡಲಾಗುವುದು.
ಜತೆಗೆ, ‘ಸಂವಿಧಾನ ಹತ್ಯೆ ದಿನ’ ಶೀರ್ಷಿಕೆಯ ಕಿರುಚಿತ್ರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವೆಬ್ಸೈಟ್ನಲ್ಲಿ ಪ್ರದರ್ಶಿಸಲಾಗುವುದು.
ಅತ್ತ ಬಿಜೆಪಿಯ ಚಿಂತಕರ ಚಾವಡಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನವು ದೆಹಲಿಯ ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ಬೃಹತ್ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗುವುದು.