ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ಬುಧವಾರ ಅಂತ್ಯಗೊಂಡ ಮಹಾಕುಂಭಮೇಳದಲ್ಲಿ 65 ಕೋಟಿ ಜನರು ಪುಣ್ಯ ಸ್ನಾನ ಮಾಡಿರಬಹುದು. ಅದರ ಜತೆಗೇ ಉತ್ತರಪ್ರದೇಶ ಸರ್ಕಾರಕ್ಕೆ ಗಂಗೆಯಲ್ಲಿ ಹರಿದ ನೀರಿನಂತೆ ಭರ್ಜರಿ ಆದಾಯವೇ ಹರಿದುಬಂದಿದೆ
- ಜಗತ್ತಿನ ಅತಿದೊಡ್ಡ ಮೇಳದಿಂದ ರಾಜ್ಯ ಸರ್ಕಾರಕ್ಕೆ ಬಂತು ಬಂಪರ್ ಫಸಲು
ಜಗತ್ತಿನಲ್ಲಿ ಅತಿ ಹೆಚ್ಚು ಜನರು ಒಂದೆಡೆ ಸೇರುವ ಕಾರ್ಯಕ್ರಮ ಯಾವುದಾದರೂ ಇದ್ದರೆ ಅದು ಕುಂಭಮೇಳ. ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ಬುಧವಾರ ಅಂತ್ಯಗೊಂಡ ಮಹಾಕುಂಭಮೇಳದಲ್ಲಿ 65 ಕೋಟಿ ಜನರು ಪುಣ್ಯ ಸ್ನಾನ ಮಾಡಿರಬಹುದು. ಅದರ ಜತೆಗೇ ಉತ್ತರಪ್ರದೇಶ ಸರ್ಕಾರಕ್ಕೆ ಗಂಗೆಯಲ್ಲಿ ಹರಿದ ನೀರಿನಂತೆ ಭರ್ಜರಿ ಆದಾಯವೇ ಹರಿದುಬಂದಿದೆ
ಯೋಗಿ ಸರ್ಕಾರಕ್ಕೆ ₹4 ಲಕ್ಷ
ಕೋಟಿ ಆದಾಯದ ಯೋಗ
- ಕರ್ನಾಟಕ ಬಜೆಟ್ ಗಾತ್ರಕ್ಕಿಂತ ಇದು ಹೆಚ್ಚು
ಮಹಾಕುಂಭಮೇಳವನ್ನು ಉತ್ತರಪ್ರದೇಶ ಸರ್ಕಾರ ಅಚ್ಚುಕಟ್ಟಾಗಿ ಆಯೋಜನೆ ಮಾಡಿತ್ತು ಎಂದು ಅಸಂಖ್ಯಾತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಅಚ್ಚುಕಟ್ಟು ವ್ಯವಸ್ಥೆಗಾಗಿ ರಾಜ್ಯ ಸರ್ಕಾರ ವೆಚ್ಚ ಮಾಡಿದ್ದು ಬರೋಬ್ಬರಿ 7500 ಕೋಟಿ ರುಪಾಯಿ. ಇದೊಂದು ರೀತಿ ಹೂಡಿಕೆಯಂತಾಯಿತು. ಆ ಹೂಡಿಕೆಯಿಂದ ಸರ್ಕಾರಕ್ಕೆ ಅಂದಾಜು 3 ಲಕ್ಷ ಕೋಟಿ ರು. ಆದಾಯ ಬಂದಿದೆ. ಕರ್ನಾಟಕ ಸರ್ಕಾರದ ಕಳೆದ ವರ್ಷ ಮಂಡನೆ ಮಾಡಿದ ಇಡೀ ವರ್ಷದ ಆಯವ್ಯಯ ಗಾತ್ರ 3.47 ಲಕ್ಷ ಕೋಟಿ ರುಪಾಯಿ. ಅದಕ್ಕಿಂತ ಹೆಚ್ಚು ಆದಾಯ 45 ದಿನಗಳ ಉತ್ಸವದಿಂದ ಯೋಗಿ ಸರ್ಕಾರಕ್ಕೆ ಹರಿದು ಬಂದಿದೆ!
8 ಲಕ್ಷ ಮಂದಿಗೆ ಉದ್ಯೋಗ:ಬೈಕರ್ಗಳಿಗೆ ಭಾರಿ ಬಿಸಿನೆಸ್
ಕುಂಭಮೇಳದಿಂದ ಆದಾಯದ ಜತೆಗೆ ಉತ್ತರಪ್ರದೇಶದಲ್ಲಿ 8 ಲಕ್ಷ ಉದ್ಯೋಗ ಸೃಷ್ಟಿಯಾದ ಅಂದಾಜಿದೆ. ಆಹಾರ, ವಸತಿ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರಿ ಅನುಕೂಲವಾಗಿದೆ. ಅತ್ಯಂತ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದ್ದ ಮಹಾಕುಂಭ ಪ್ರದೇಶದಲ್ಲಿ ಓಡಾಡುವುದೇ ತ್ರಾಸದಾಯಕವಾಗಿತ್ತು. ಅಂತಹ ವೇಳೆ ಬೈಕ್ ಹೊಂದಿದ್ದ ಯುವಕರು ಜನರನ್ನು ಅತ್ತಿಂದ ಇತ್ತ ಸಾಗಣೆ ಮಾಡಿ ಭರ್ಜರಿ ಆದಾಯವನ್ನೂ ಸಂಪಾದನೆ ಮಾಡಿಕೊಂಡಿದ್ದು ವಿಶೇಷ. ಮಧ್ಯಪ್ರದೇಶದಿಂದ ರುದ್ರಾಕ್ಷಿ ಮಾರಲು ಬಂದ ಮೊನಾಲಿಸಾ ಜಗದ್ವಿಖ್ಯಾತವಾಗಿ, ಸಿನಿಮಾದಲ್ಲಿ ನಟಿಸುವಷ್ಟರ ಮಟ್ಟಿಗೆ ಆಕೆಯ ಜೀವನವನ್ನೇ ಈ ಕುಂಭಮೇಳ ಬದಲಿಸಿದ್ದೂ ವಿಶೇಷ.
ಯಾವ ಕ್ಷೇತ್ರ ಎಷ್ಟು ಉದ್ಯೋಗ?
ಕ್ಷೇತ್ರ ಉದ್ಯೋಗ
ಹೋಟೆಲ್ 2.50 ಲಕ್ಷ
ಏರ್ಪೋರ್ಟ್ 1.50 ಲಕ್ಷ
ಪ್ರವಾಸೋದ್ಯಮ 45000
ಆರೋಗ್ಯ 85000
ಸ್ವಚ್ಛತೆ 55000
ಅಂಗಡಿಗಳಿಗೆ 2 ತಿಂಗಳಲ್ಲೇ
ಒಂದು ವರ್ಷದ ವ್ಯಾಪಾರ
ಸಣ್ಣ ಅಂಗಡಿಗಳು, ದಿನಸಿ ಅಂಗಡಿಗಳು, ವಿಶೇಷವಾಗಿ ಬಟ್ಟೆ ಉದ್ಯಮಕ್ಕೆ ಕುಂಭಮೇಳ ಬೂಸ್ಟರ್ ಆಗಿದೆ. ಭಾರತೀಯ ಕೈಗಾರಿಕೆಗಳ ಒಕ್ಕೂಟದ ಪ್ರಕಾರ 1 ವರ್ಷದಲ್ಲಿ ಆಗುತ್ತಿದ್ದ ವ್ಯಾಪಾರವು ಕೇವಲ 2 ತಿಂಗಳಲ್ಲೇ ಆಗಿದೆ. ಇದು ಜನರಿಗೆ ಅಧಿಕ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿದೆ.
59 ಲಕ್ಷ ಜನರ ಊರಿಗೆ ಬಂದಿದ್ದು 65 ಕೋಟಿ ಜನ
ಪ್ರಯಾಗರಾಜ ಎಂಬುದು ಉತ್ತರಪ್ರದೇಶದ ಪೌರಾಣಿಕ ಇತಿಹಾಸ ಹೊಂದಿರುವ ನಗರ. ಈ ನಗರದ ಒಟ್ಟು ಜನಸಂಖ್ಯೆ 59 ಲಕ್ಷ. ಆದರೆ 45 ದಿನಗಳಲ್ಲಿ ಈ ನಗರ 65 ಕೋಟಿ ಜನರಿಗೆ ಆತಿಥ್ಯ ವಹಿಸಿದೆ. ಕುಂಭಮೇಳದಿಂದ ಅದರ ಮೂಲಸೌಕರ್ಯ ಕೂಡ ಬದಲಾವಣೆ ಕಂಡಿದೆ.
ಮಹಾಕುಂಭನಗರ 1 ತಿಂಗಳಲ್ಲಿ ತೆರವು - ವಿಶ್ವದ ಅತಿದೊಡ್ಡ ತಾತ್ಕಾಲಿಕ ಜಿಲ್ಲೆ ಇದು
ಐತಿಹಾಸಿಕ ಮಹಾಕುಂಭಮೇಳಕ್ಕಾಗಿ ಉತ್ತರಪ್ರದೇಶ ಸರ್ಕಾರ ಮಹಾಕುಂಭನಗರ ಎಂಬ ತಾತ್ಕಾಲಿಕ ಜಿಲ್ಲೆಯನ್ನೇ ಸೃಷ್ಟಿ ಮಾಡಿತ್ತು. ಇದು ವಿಶ್ವದ ಅತ್ಯಂತ ಜನನಿಬಿಡ ಹಾಗೂ ಬೃಹತ್ ಗಾತ್ರದ ತಾತ್ಕಾಲಿಕ ಜಿಲ್ಲೆ ಎಂಬ ಅಭಿದಾನಕ್ಕೆ ಪಾತ್ರವಾಗಿತ್ತು. ಈಗ ಕುಂಭಮೇಳ ಮುಗಿದಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲಾಗುತ್ತದೆ. ಆ ಕಾರ್ಯ ಮಾಡಲು ಬರೋಬ್ಬರಿ 1 ತಿಂಗಳಷ್ಟು ಸುದೀರ್ಘ ಸಮಯ ಹಿಡಿಯಲಿದೆ!
ಗಂಗಾ, ಯಮುನಾ ನದಿಯ ಮರಳು ದಂಡೆಯ ಮೇಲಿರುವ 10 ಸಾವಿರ ಎಕರೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ತಲೆ ಎತ್ತಿದ ವ್ಯವಸ್ಥೆಯೇ ಮಹಾಕುಂಭನಗರ. ಮೂರು ತಿಂಗಳ ಅವಧಿಯಲ್ಲಿ ನಿರ್ಮಾಣವಾದ ಉತ್ತರಪ್ರದೇಶದ 76ನೇ ಜಿಲ್ಲೆ. ಪ್ರತ್ಯೇಕವಾದ ವಿದ್ಯುತ್, ನೀರು ವಿತರಣೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಜಿಲ್ಲಾಧಿಕಾರಿ, ಎಸ್ಪಿ, 5 ಪೊಲೀಸ್ ಠಾಣೆಗಳನ್ನು ಹೊಂದಿತ್ತು. 65 ಕೋಟಿ ಜನರು ಭೇಟಿ ನೀಡಿದ್ದು ಇದೇ ನಗರಕ್ಕೆ.
ಸದ್ಯದಲ್ಲೇ ಈ ನಗರವನ್ನು ಬೃಹತ್ ಗಾತ್ರದ ಯಂತ್ರಗಳ ಸಹಾಯದಿಂದ ತೆರವುಗೊಳಿಸಲಾಗುತ್ತದೆ. ಈ ನಗರದಲ್ಲಿ 30 ಪಂಟೂನ್ ಸೇತುವೆಗಳು, 400 ಕಿ.ಮೀ. ಉದ್ದದ ತಾತ್ಕಾಲಿಕ ರಸ್ತೆ ಜಾಲವೂ ಇದೆ.
ಬಂದ ಜನರನ್ನು ಲೆಕ್ಕ ಹಾಕಿದ್ದು ಎಐ ಕೆಮೆರಾ
ಕುಂಭಮೇಳಕ್ಕೆ 65 ಕೋಟಿ ಜನರು ಬಂದಿದ್ದಾರೆ ಎಂದು ಉತ್ತರಪ್ರದೇಶ ಸರ್ಕಾರ ಹೇಳುತ್ತಿದೆ. ಅದಕ್ಕೆ ಹೆಚ್ಚಾಗಿ ಅವಲಂಬಿಸಿದ್ದು 1700 ಎಐ ಕ್ಯಾಮೆರಾಗಳನ್ನು. ಇಷ್ಟೊಂದು ಸಂಖ್ಯೆಯ ಎಐ ಕ್ಯಾಮೆರಾ ಬಳಸಿದ್ದು ವಿಶ್ವದಲ್ಲಿ ಇದೇ ಮೊದಲು.
1.5 ಲಕ್ಷ ಶೌಚಾಲಯ, 1500 ಪೌರಕಾರ್ಮಿಕರು
- ಕಾರ್ಮಿಕರ ಸಂಖ್ಯೆಯೂ ಗಿನ್ನೆಸ್ ದಾಖಲೆ
ಕುಂಭಮೇಳದಲ್ಲಿ 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಶೌಚಾಲಯದ ನೀರು ನೇರ ನದಿಯನ್ನು ಸೇರಬಾರದು ಎಂಬ ಉದ್ದೇಶದಿಂದ ಸಂಸ್ಕರಿಸಿದ ಬಳಿಕವಷ್ಟೇ ನದಿಗೆ ಬಿಡಲಾಗುತ್ತಿತ್ತು. ನದಿ ದಂಡೆ ಸ್ವಚ್ಛತೆಗೆ 300 ಜನ ದಿನಂಪ್ರತಿ ದುಡಿದರು. ಇಡೀ ಪ್ರಯಾಗ್ರಾಜ್ ಸ್ವಚ್ಛತೆಗೆ ಏಕಕಾಲದಲ್ಲಿ 1500 ಸಾವಿರ ಪೌರ ಕಾರ್ಮಿಕರು ತೊಡಗಿದ್ದರು. ಏಕಕಾಲದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಾರ್ಮಿಕರು ಸ್ವಚ್ಛತೆಗೆ ತೊಡಗಿಕೊಳ್ಳುವ ಮೂಲಕ ಗಿನ್ನೆಸ್ ದಾಖಲೆ ಬರೆಯಿತು.
ಕುಂಭಮೇಳಕ್ಕೆ ಹೋಗಲು ಆಗಲೇ ಇಲ್ವಾ? 2027ಕ್ಕೆ ನಾಸಿಕ್ ಕುಂಭಕ್ಕೆ ಹೋಗಿ
ಪ್ರಯಾಗರಾಜ್ನ ಮಹಾಕುಂಭಮೇಳಕ್ಕೆ ತೆರೆಬಿದ್ದಿದ್ದು, ಮುಂದಿನ ಕುಂಭಮೇಳವು ಮಹಾರಾಷ್ಟ್ರದ ನಾಸಿಕ್ನ ಗೋದಾವರಿ ತ್ರಿವೇಣಿ ಸಂಗಮದಲ್ಲಿ 2027ಕ್ಕೆ ನಡೆಯಲಿದೆ.
ದೇಶದ ಉದ್ದದ ಟ್ರಾಫಿಕ್ ಜಾಂ
ಮಹಾಕುಂಭಮೇಳವು ದೇಶದ ಅತಿ ಉದ್ದನೆಯ ಟ್ರಾಫಿಕ್ ಜಾಮ್ಗೆ ಕಾರಣವಾಗಿತ್ತು. ಮಧ್ಯಪ್ರದೇಶದಿಂದ ಪ್ರಯಾಗ್ರಾಜ್ಗೆ ತೆರಳುವ ಹಾದಿಯಲ್ಲಿ ಬರೋಬ್ಬರಿ 200 ರಿಂದ 300 ಕಿ.ಮೀ ತನಕ ಟ್ರಾಫಿಕ್ ಜಾಮ್ ಸೃಷ್ಟಿ ಮೂಲಕ ಅತಿ ಉದ್ದನೆಯ ಟ್ರಾಫಿಕ್ ಜಾಮ್ಗೆ ಕಾರಣವಾಗಿತ್ತು.
ಏನಾಗಲಿದೆ ಈ ಜಿಲ್ಲೆ?
ಈ ಜಿಲ್ಲೆಯು ಗಂಗಾ ನದಿಯ ಮೇಲ್ಮೈನಲ್ಲಿ 4000 ಹೆಕ್ಟೆರ್ನಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಟೆಂಟ್ ಸಿಟಿಯಾಗಿದ್ದು, ಇಲ್ಲಿ ವಿದ್ಯುತ್ ಸಂಪರ್ಕ, ಶೌಚಾಲಯ, ಟೆಂಟ್ಗಳನ್ನು ನಿರ್ಮಿಸಲಾಗಿತ್ತು. ಕುಂಭಮೇಳ ಮುಕ್ತಾಯದ ಬಳಿಕ, ಮಳೆಗಾಲ ಆರಂಭಕ್ಕೂ ಮುನ್ನ ಸಂಪೂರ್ಣವಾಗಿ ತೆರವು ಮಾಡಲಾಗುತ್ತದೆ.
ಸಂಪೂರ್ಣ ತೆರವಿಗೆ 1 ತಿಂಗಳು ಬೇಕು:
ಮಹಾಕುಂಭಮೇಳ ನಗರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ತೆರವುಗೊಳಿಸಲು ಸುಮಾರು 1 ತಿಂಗಳು ತಗುಲುತ್ತದೆ. ಈಗಾಗಲೇ ಟೆಂಟ್ಗಳ ಪೈಕಿ ಕಾಲು ಭಾಗದಷ್ಟು ಟೆಂಟ್ಗಳು ತೆರವುಗೊಳಿಸಲಾಗಿದ್ದು, ಇನ್ನು ಉಳಿದ ಭಾಗವು ತೆರವುಗೊಳಿಸಲು 1 ತಿಂಗಳು ಹಿಡಿಯುತ್ತದೆ. ಅದರಲ್ಲಿ ವಿದ್ಯುತ್ ಕಂಬಗಳು, ಟೆಂಟ್ಗಳು, ಶೌಚಾಲಯ ಸ್ವಚ್ಛಗೊಳಿಸಿ ತೆರವುಗೊಳಿಸುವಿಕೆ ಮತ್ತು ತ್ಯಾಜ್ಯ ಸಂಗ್ರಹವು ಇದರ ಭಾಗವಾಗಿರಲಿವೆ.
ನದಿ ಸ್ವಚ್ಛತೆಗೆ 24/7 ಸ್ವಯಂಚಾಲಿತ ಯಂತ್ರ:
ಈ ಕುಂಭಮೇಳದ ಪ್ರಮುಖ ಆಕರ್ಷಣೆಯೇ ಸ್ವಯಂಚಾಲಿತ ಕಸ ಸಂಗ್ರಹ ಯಂತ್ರ. ಈ ಯಂತ್ರವು ನದಿಯಿಂದ ದಿನಕ್ಕೆ 15-16 ಟನ್ ಕಸ ಸಂಗ್ರಹಿಸಿ, ಅವುಗಳನ್ನು ಬಸ್ವಾರ್ನಲ್ಲಿನ 650 ಮೆಟ್ರಿಕ್ ಟನ್ ಸಾಮರ್ಥ್ಯದ ಕಸ ಸಂಸ್ಕರಣಾ ಘಟಕಕ್ಕೆ ತಂದು ಹಾಕುತ್ತಿತ್ತು. ಜೊತೆಗೆ ಮಹಾಕುಂಭನಗರದಿಂದ ಸಂಗ್ರಹವಾಗುವ ಕಸವನ್ನು ಇಲ್ಲಿ ಸಂಸ್ಕರಿಸಲಾಗುತ್ತಿತ್ತು.
ನೀರಿನಲ್ಲಿ ಜಲಪಡೆ ರಕ್ಷಣಾ ಕಾರ್ಯ:
ಸಂಗಮದಲ್ಲಿ ಯಾವುದೇ ಅನಾಹುತವೂ ಸಂಭವಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ 2000 ಜಲ ಟ್ರಾಫಿಕ್ ಪೊಲೀಸ್, ಜಲಪೊಲೀಸ್ನ 35 ಮುಳುಗು ತಜ್ಞರು, ರಾಜ್ಯ ವಿಪತ್ತು ನಿರ್ವಹಣಾ ಪಡೆಯ 150 ಸಿಬ್ಬಂದಿ, 12 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡ ಜೊತೆಗೆ ಭಾರತೀಯ ನೌಕಾಪಡೆಯ 35 ಮುಳುಗುತಜ್ಞರು ಮತ್ಸನಿಗಾ ವಹಿಸಿದ್ದರು.