ತೆಲುಗಿನ ಸೂಪರ್ಸ್ಟಾರ್ ಹಾಗೂ ರಾಜಕಾರಣಿ ಚಿರಂಜೀವಿ ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ತಮ್ಮ ಬೆಂಬಲ ಘೋಷಣೆ ಮಾಡಿದ್ದಾರೆ
ಹೈದರಾಬಾದ್: ತೆಲುಗಿನ ಸೂಪರ್ಸ್ಟಾರ್ ಹಾಗೂ ರಾಜಕಾರಣಿ ಚಿರಂಜೀವಿ ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ತಮ್ಮ ಬೆಂಬಲ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಪ್ರಬಲವಾಗಿರುವ ಕಾಪು ಸಮುದಾಯಕ್ಕೆ ಚಿರಂಜೀವಿ ಸೇರಿದವರಾಗಿದ್ದು, ಅವರ ಈ ಬೆಂಬಲ ಮೈತ್ರಿಕೂಟಕ್ಕೆ ದೊಡ್ಡ ಬಲ ನೀಡಲಿದೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು, ಚಿರಂಜೀವಿ ಇನ್ನೂ ತಮ್ಮ ಪಕ್ಷದಲ್ಲೇ ಇದ್ದಾರೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಚಿರಂಜೀವಿ ಭಾನುವಾರ ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ರಾಜಕೀಯದಿಂದ ಹಲವು ವರ್ಷ ದೂರ ಇದ್ದ ಬಳಿಕ ಮತ್ತೆ ರಾಜ್ಯದಲ್ಲಿ ಜನಸೇನಾ, ಟಿಡಿಪಿ ಮತ್ತು ಬಿಜೆಪಿ ಮೈತ್ರಿ ಬಳಿಕ ಮತ್ತೆ ನಾನು ರಾಜಕೀಯದ ಚರ್ಚೆ ಮಾಡುತ್ತಿದ್ದೇನೆ. ಆಂಧ್ರಪ್ರದೇಶದ ಅಭಿವೃದ್ಧಿಗಾಗಿ ಎನ್ಡಿಎ ಅಭ್ಯರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ತನ್ನ ಆಪ್ತರಾದ ಸಿ.ಎಂ. ರಮೇಶ್ (ಬಿಜೆಪಿ ಅಭ್ಯರ್ಥಿ) ಮತ್ತು ಪಿ. ರಮೇಶ್ ಬಾಬು (ಜನಸೇನಾ) ಅವರಿಗೆ ಮತ ಹಾಕಿ’ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಮೆ 13ರಂದು ಒಂದೇ ಹಂತದಲ್ಲಿ 25 ಲೋಕಸಭಾ ಸ್ಥಾನ, ವಿಧಾನಸಭೆಯ 175 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.