ಆಫ್ಘನ್‌ನಿಂದಲೂ ಪಾಕ್‌ಗೆ ನದಿ ನೀರು ಬಂದ್‌?

KannadaprabhaNewsNetwork |  
Published : Oct 25, 2025, 01:03 AM IST
ಆಪ್ಘನ್‌  | Kannada Prabha

ಸಾರಾಂಶ

ಭಾರತದ ಬಳಿಕ ಇದೀಗ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ಕೂಡ ಪಾಕಿಸ್ತಾನಕ್ಕೆ ನದಿ ನೀರಿನ ಹರಿವು ಸ್ಥಗಿತಗೊಳಿಸಲು ಮುಂದಾಗಿದೆ. ಆಫ್ಘಾನಿಸ್ತಾನದ ಮೂಲಕ ಪಾಕಿಸ್ತಾನಕ್ಕೆ ಹರಿಯುವ ಕುನಾರ್‌ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಕಾರ್ಯವನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಆಪ್ಘನ್‌ ಸರ್ಕಾರ ಆದೇಶಿಸಿದೆ.

ಕಾಬೂಲ್‌: ಭಾರತದ ಬಳಿಕ ಇದೀಗ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ಕೂಡ ಪಾಕಿಸ್ತಾನಕ್ಕೆ ನದಿ ನೀರಿನ ಹರಿವು ಸ್ಥಗಿತಗೊಳಿಸಲು ಮುಂದಾಗಿದೆ. ಆಫ್ಘಾನಿಸ್ತಾನದ ಮೂಲಕ ಪಾಕಿಸ್ತಾನಕ್ಕೆ ಹರಿಯುವ ಕುನಾರ್‌ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಕಾರ್ಯವನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಆಪ್ಘನ್‌ ಸರ್ಕಾರ ಆದೇಶಿಸಿದೆ.

ಎರಡೂ ದೇಶಗಳ ನಡುವಿನ 2,640 ಕಿ.ಮೀ. ಉದ್ದದ ಗಡಿಯಾದ ಡುರಾಂಡ್‌ ಲೈನ್‌ ವಿಚಾರವಾಗಿ ಆಫ್ಘನ್‌ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗಷ್ಟೇ ಕದನ ಏರ್ಪಟ್ಟಿತ್ತು. ಇದರ ಬೆನ್ನಲ್ಲೇ ಇದೀಗ ಆಪ್ಘನ್‌ನ ವಿದೇಶಾಂಗ ಸಚಿವಾಲಯವು ಕುನಾರ್‌ ನದಿಗೆ ಡ್ಯಾಂ ನಿರ್ಮಿಸಲು ಮುಂದಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ಹರಿಯುವ ನೀರು ಸ್ಥಗಿತಗೊಳಿಸುವ ಉದ್ದೇಶ ಹೊಂದಿದೆ.

ಅ.11ರಂದು ನಡೆದ ಗಡಿ ಸಂಘರ್ಷದ ಬಳಿಕ ಪಾಕಿಸ್ತಾನವು ಕಾಬೂಲ್‌ ಮತ್ತು ಪಕ್ತಿಕಾ ಪ್ರಾಂತ್ಯದ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ತೆಹರೀಕ್‌ -ಇ-ತಾಲಿಬಾನ್ ಪಾಕಿಸ್ತಾನ್‌(ಟಿಟಿಪಿ) ಉಗ್ರರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಿದ್ದಾಗಿ ಹೇಳಿಕೊಂಡಿತ್ತು. ತನ್ನ ವಾಯು ಸೀಮೆ ಉಲ್ಲಂಘಿಸಿ ನಡೆಸಿದ ದಾಳಿಗೆ ಪ್ರತಿಯಾಗಿ ಆಫ್ಘನ್‌ ಕೂಡ ಪ್ರತಿ ದಾಳಿ ನಡೆಸಿತ್ತು. ಇದೀಗ ಕದನ ವಿರಾಮ ಏರ್ಪಟ್ಟಿದ್ದರೂ ಆಫ್ಘನ್‌ ಸರ್ಕಾರ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಮುಂದಾಗಿದೆ.

ಈಗಾಗಲೇ ಭಾರತವು ಪಹಲ್ಗಾಂ ದಾಳಿ ಬಳಿಕ ಸಿಂದೂ ನದಿ ನೀರನ್ನು ತಡೆಹಿಡಿದಿದ್ದು, ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟಿದೆ. ಇದರ ಬೆನ್ನಲ್ಲೇ ಇದೀಗ ಅಫ್ಘಾನಿಸ್ತಾನ ಕೂಡ ನದಿ ನೀರು ತಡೆಯಲು ಮುಂದಾಗಿರುವುದು ಪಾಕಿಸ್ತಾನದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಕುನಾರ್‌ ನದಿಗೆ ವಿದೇಶಿ ಸಂಸ್ಥೆಗಳ ಬದಲು ಅಫ್ಘಾನಿಸ್ತಾನದ ಕಂಪನಿಗಳೇ ಡ್ಯಾಂ ನಿರ್ಮಾಣ ಮಾಡಲಿವೆ. ನಮ್ಮ ಪಾಲಿನ ನೀರನ್ನು ನಿಯಂತ್ರಿಸುವ ಅಧಿಕಾರ ನಮಗಿದೆ ಎಂದು ಆಫ್ಘನ್‌ ಜಲಸಚಿವ ಮುಲ್ಲಾ ಅಬ್ದುಲ್‌ ಲತೀಫ್‌ ಮನ್ಸೂರ್‌ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ