ನವದೆಹಲಿ: ತೇಜಸ್ ವಿಮಾನ ನಿರ್ಮಾಣದದಲ್ಲಿನ ವಿಳಂಬದ ಕುರಿತು ತೀವ್ರ ಅಸಮಾದಾನ ಬೆನ್ನಲ್ಲೇ ವಾಯುಪಡೆ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್, ಇದೀಗ ರಕ್ಷಣಾ ಉಪಕರಣಗಳ ಪೂರೈಕೆಯಲ್ಲಾಗುತ್ತಿರುವ ವಿಳಂಬಕ್ಕೆ ಸಂಬಂಧಿಸಿ ಮತ್ತೆ ಅತೃಪ್ತಿ ಹೊರಹಾಕಿದ್ದಾರೆ.
ಅನೇಕ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕುವಾಗಲೇ ನಮಗೆ ಅದು ಸಕಾಲದಲ್ಲಿ ಪೂರೈಕೆಯಾಗುವುದಿಲ್ಲ ಎಂಬುದು ಗೊತ್ತಿರುತ್ತದೆ. ಆದರೂ ನಾವು ಸಹಿ ಹಾಕುತ್ತೇವೆ. ಕಾಲಮಿತಿ ನಮ್ಮ ಮುಂದಿರುವ ಅತಿದೊಡ್ಡ ಸಮಸ್ಯೆ. ಈವರೆಗೆ ಒಂದೇ ಒಂದು ಪ್ರಾಜೆಕ್ಟ್ ಕಾಲಮಿತಿಯೊಳಗೆ ಪೂರ್ಣಗೊಂಡಿಲ್ಲ. ಹಾಗಿದ್ದರೆ ಕೊಟ್ಟ ಭರವಸೆ ಈಡೇರುವುದಿಲ್ಲ ಎಂದಾದ ಮೇಲೆ ಅದನ್ನು ನೀಡುವುದಾದರೂ ಏತಕ್ಕೆ ಎಂದು ಪ್ರಶ್ನಿಸಿದರು.
ತೇಜಸ್ ಯುದ್ಧ ವಿಮಾನ ಸೇರಿ ಹಲವು ಸ್ವದೇಶಿ ಯೋಜನೆಗಳ ವಿಚಾರದಲ್ಲಿ ಆಗುತ್ತಿರುವ ವಿಳಂಬ ಕುರಿತು ಪ್ರಸ್ತಾಪಿಸಿದ ಅವರು, ತೇಜಸ್ ಎಂಕೆ1ಎ ಯುದ್ಧ ವಿಮಾನದ 48 ಸಾವಿರ ಕೋಟಿ ರು. ಒಪ್ಪಂದವನ್ನು 2021ರಂದು ಎಚ್ಎಎಲ್ ಜತೆಗೆ ಮಾಡಲಾಗಿತ್ತು. ಆದರೂ ಈವರೆಗೆ 83 ಯುದ್ಧವಿಮಾನ ಪೂರೈಕೆಯಾಗಿಲ್ಲ. ಎಂಕೆ2 ಮೊದಲ ಮಾದರಿ ಇನ್ನಷ್ಟೇ ಹೊರಬರಬೇಕಿದೆ, ಎಎಂಸಿಎ ಯುದ್ಧವಿಮಾನದ ಪ್ರೊಟೋಟೈಪ್ ಬಂದೇ ಇಲ್ಲವೆಂದರು.
ನಾಳೆಗಾಗಿ ನಾವು ಈಗಲೇ ಸಿದ್ಧವಾಗಬೇಕಿದೆ. ಹತ್ತು ವರ್ಷದ ನಂತರ ನಮಗೆ ಸಾಕಷ್ಟು ಉಪಕರಣಗಳು ಸಿಗಬಹುದು. ಆದರೆ, ನಮಗೆ ಈಗೇನು ಬೇಕೋ ಅದು ಈಗಲೇ ಬೇಕು. ನಮಗೆ ಬೇಕಿರುವುದನ್ನು ತ್ವರಿತವಾಗಿ ಪಡೆಯಲು ಜತೆಯಾಗಿ ಕೆಲಸ ಮಾಡಬೇಕಿದೆ. ಯುದ್ಧದ ತಂತ್ರ ಪ್ರತಿದಿನ ಬದಲಾಗುತ್ತಿದೆ. ಹೊಸ ತಂತ್ರಜ್ಞಾನದ ಬಳಕೆ ನೋಡುತ್ತಿದ್ದೇವೆ. ಆಪರೇಷನ್ ಸಿಂದೂರ ಕಾರ್ಯಾಚರಣೆಯಿಂದ ನಾವು ಎತ್ತ ಸಾಗುತ್ತಿದ್ದೇವೆ, ಭವಿಷ್ಯದಲ್ಲಿ ನಮಗೆ ಏನೇನು ಬೇಕಿದೆ ಎಂಬ ಕುರಿತು ಸ್ಪಷ್ಟಚಿತ್ರಣ ಸಿಕ್ಕಿದೆ ಎಂದರು.
ಇದೇ ವೇಳೆ ನಾವು ಭಾರತದಲ್ಲಿ ಉತ್ಪಾದಿಸುವುದಷ್ಟೇ ಅಲ್ಲ, ಅದನ್ನು ನಮ್ಮಲ್ಲೇ ವಿನ್ಯಾಸಗೊಳಿಸುವ ಕುರಿತೂ ಯೋಚಿಸಬೇಕು. ಸೇನಾಪಡೆ, ಉದ್ದಿಮೆ ನಡುವೆ ನಂಬಿಕೆ ಇರಬೇಕು. ನಾವು ಮುಕ್ತವಾಗಿರಬೇಕು, ಒಂದು ಸಲ ನಾವು ಯಾವುದಾದರೂ ಭರವಸೆಯನ್ನು ನೀಡಿದರೆ ಅದನ್ನು ಈಡೇರಿಸಬೇಕು ಎಂದು ಸಲಹೆ ನೀಡಿದರು.