ಬೆಂಗಳೂರು : ರಾಜ್ಯದಲ್ಲಿನ 6 ನಕ್ಸಲರು ಶರಣಾಗತಿ ನಂತರವೂ ರಾಜ್ಯದ ಗಡಿ ಭಾಗದಲ್ಲಿ ನಕ್ಸಲ್ ಚಟುವಟಿಕೆಯ ಸುಳಿವು ದೊರೆತ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ವಿಸರ್ಜಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ರಾಜ್ಯ ಸರ್ಕಾರ, ಮುಂದಿನ 3 ವರ್ಷಗಳವರೆಗೆ ನಕ್ಸಲ್ ನಿಗ್ರಹ ಪಡೆಯನ್ನು ಮುಂದುವರಿಸಿ ಆದೇಶಿಸಿದೆ.
ಛತ್ತೀಸ್ಗಢ, ಜಾರ್ಖಂಡ್ನಿಂದ ನಕ್ಸಲರು ಕರ್ನಾಟಕಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂಬ ಕೇಂದ್ರ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.
ಕಳೆದ ಜನವರಿಯಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸತತ ಎರಡು ದಶಕಕ್ಕೂ ಹೆಚ್ಚಿನ ಕಾಲ ಸಶಸ್ತ್ರ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ 6 ಮಂದಿ ನಕ್ಸಲೀಯರು ಸರ್ಕಾರದೆದುರು ಶರಣಾಗಿದ್ದರು. ನಂತರ ಕರ್ನಾಟಕವು ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಕ್ಸಲ್ ನಿಗ್ರಹ ಪಡೆ ವಿಸರ್ಜಿಸುವುದಾಗಿಯೂ ತಿಳಿಸಿದ್ದರು. ಈ ಕುರಿತು 2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲೂ ಘೋಷಿಸಿದ್ದರು.
ಆದರೆ, ಗುಪ್ತಚರ ಇಲಾಖೆ ಮಾಹಿತಿಯಂತೆ ಅಸ್ತಿತ್ವದಲ್ಲಿರುವ ನಕ್ಸಲರು ಛತ್ತೀಸ್ಗಢ, ಜಾರ್ಖಂಡ್ ರಾಜ್ಯಗಳಿಂದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಗಡಿ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದೆ. ಹೀಗಾಗಿ ರಾಜ್ಯದಲ್ಲಿ ವಿರ್ಸಜಿಸಲು ನಿರ್ಧರಿಸಲಾಗಿದ್ದ ನಕ್ಸಲ್ ನಿಗ್ರಹ ಪಡೆಯನ್ನು ಮುಂದಿನ 3 ವರ್ಷಗಳವರೆಗೆ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಛತ್ತೀಸ್ಗಢ, ಜಾರ್ಖಂಡ್ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿದೆ.
ಸಿಬ್ಬಂದಿ ಕಡಿತ:
ಆದರೆ, ಹಾಲಿ ಇರುವ ಸಿಬ್ಬಂದಿ ಬಲವನ್ನು ಕಡಿಮೆ ಮಾಡಲಾಗುತ್ತಿದೆ. ಅದರಂತೆ ಪ್ರಸ್ತುತ ನಕ್ಸಲ್ ನಿಗ್ರಹ ಪಡೆಯಲ್ಲಿರುವ 656 ಹುದ್ದೆಗಳಿವೆ. ಅದರಲ್ಲಿ 258 ಹುದ್ದೆಗಳನ್ನು ಕೋಮು ಸೌಹಾರ್ದ ಕದಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ರಚಿಸಿರುವ ವಿಶೇಷ ಕಾರ್ಯಪಡೆಗೆ ವರ್ಗಾಯಿಸಲಾಗಿದೆ. ಉಳಿದಂತೆ ವಿವಿಧ ದರ್ಜೆಯ 376 ಹುದ್ದೆಗಳನ್ನು ನಕ್ಸಲ್ ನಿಗ್ರಹ ಪಡೆಯಲ್ಲಿಯೇ ಮುಂದುವರಿಸಲಾಗಿದೆ.