ಆಂಧ್ರ: ಟಿಸಿಎಸ್‌ಗೆ 99 ಪೈಸೆಗೆ 21 ಎಕರೆ ಭೂಮಿ!

KannadaprabhaNewsNetwork | Published : Apr 16, 2025 12:30 AM

ಸಾರಾಂಶ

ನೆರೆಯ ಆಂಧ್ರಪ್ರದೇಶ ಸರ್ಕಾರವು ರಾಜ್ಯಕ್ಕೆ ಹೆಚ್ಚಿನ ಐಟಿ ಕಂಪನಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಟಾಟಾ ಸಮೂಹದ ಒಡೆತನದ ಟಿಸಿಎಸ್‌ ಕಂಪನಿಗೆ ವಿಶಾಖಪಟ್ಟಣದಲ್ಲಿ ಕಚೇರಿ ತೆರೆಯಲು ಕೇವಲ 99 ಪೈಸೆಗೆ 21.6 ಎಕರೆ ಭೂಮಿಯನ್ನು ನೀಡಿದೆ.

ಐಟಿ ಕಂಪನಿಗಳನ್ನು ಆಕರ್ಷಿಸಲು ಸಿಎಂ ನಾಯ್ಡು ಕ್ರಮ

ಬೆಂಗಳೂರಿಗೆ ಸಡ್ಡುಹೊಡೆಯಲು ಆಂಧ್ರ ಭಾರೀ ಆಫರ್‌

==

ಅಮರಾವತಿ: ನೆರೆಯ ಆಂಧ್ರಪ್ರದೇಶ ಸರ್ಕಾರವು ರಾಜ್ಯಕ್ಕೆ ಹೆಚ್ಚಿನ ಐಟಿ ಕಂಪನಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಟಾಟಾ ಸಮೂಹದ ಒಡೆತನದ ಟಿಸಿಎಸ್‌ ಕಂಪನಿಗೆ ವಿಶಾಖಪಟ್ಟಣದಲ್ಲಿ ಕಚೇರಿ ತೆರೆಯಲು ಕೇವಲ 99 ಪೈಸೆಗೆ 21.6 ಎಕರೆ ಭೂಮಿಯನ್ನು ನೀಡಿದೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ. ಆಂಧ್ರ ಸರ್ಕಾರದ ಈ ಕ್ರಮವನ್ನು ದೇಶದ ಐಟಿ ಹಬ್‌ ಆಗಿರುವ ಬೆಂಗಳೂರಿಗೆ ಸಡ್ಡು ಕೊಡಲು ಪ್ರಯತ್ನ ಎಂದೇ ವಿಶ್ಲೇಷಿಸಲಾಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌, 21.6 ಎಕರೆ ಭೂಮಿಯಲ್ಲಿ ಕಂಪನಿಯು ಕಚೇರಿ ತೆರೆಯಲಿದೆ. ಕಂಪನಿ 1370 ಕೋಟಿ ರು. ಹೂಡಿಕೆ ಮಾಡಲಿದ್ದು, ಮುಂದಿನ 2 - 3 ವರ್ಷದಲ್ಲಿ 12,000 ಉದ್ಯೋಗ ಸೃಷ್ಟಿಯಾಗಲಿದೆ. ಕಂಪನಿಯನ್ನು ರಾಜ್ಯಕ್ಕೆ ಕರೆತರುವಲ್ಲಿ ಐಟಿ ಸಚಿವ ನಾರಾ ಲೋಕೇಶ್‌ ಪಾತ್ರ ಅಧಿಕವಾಗಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಹಿಂದೆಲ್ಲಾ ಬೆಂಗಳೂರಿನಲ್ಲಿ ಮಳೆ ಅವಾಂತರವಾಗಿ ಮೂಲಸೌಕರ್ಯದ ಬಗ್ಗೆ ಭಾರೀ ಟೀಕೆ ವ್ಯಕ್ತವಾದಾಗಲೆಲ್ಲಾ ಆಂಧ್ರದ ರಾಜಕಾರಣಿಗಳು ಕರ್ನಾಟಕ ಬಿಟ್ಟು ಆಂಧ್ರಕ್ಕೆ ಬನ್ನಿ ಎಂದು ಜಾಲತಾಣದ ಮೂಲಕವೇ ಐಟಿ-ಬಿಟಿ ಕಂಪನಿಗಳಿಗೆ ಆಫರ್‌ ನೀಡುತ್ತಿದ್ದರು. ಆದರೂ ಯಾವುದೇ ಕಂಪನಿಗಳು ಐಟಿ ಸಿಟಿ ಬಿಟ್ಟಿರಲಿಲ್ಲ. ಹೀಗಾಗಿ ಆಂಧ್ರ ಸರ್ಕಾರವೀಗ ಆಫರ್‌ ಮೂಲಕ ಐಟಿ ಕಂಪನಿಗಳ ಸೆಳೆಯಲು ಮುಂದಾಗಿದೆ.

ಮೋದಿ ನೀತಿ ಮಾದರಿ:

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟಾಟಾ ಮೋಟರ್ಸ್‌ ಕಂಪನಿಗೆ ಗುಜರಾತ್‌ನ ಸನ್ನದ್‌ನಲ್ಲಿ ಕೇವಲ 99 ಪೈಸೆಗೆ ಸ್ಥಳ ನೀಡಿದ್ದರು. ಈ ಕ್ರಮದಿಂದಾಗಿ ಗುಜರಾತ್‌ನಲ್ಲಿ ಉದ್ಯಮಗಳ ಹರಿವು ಹೆಚ್ಚಾಗಿತ್ತು. ಹೀಗಾಗಿ ಆಂಧ್ರ ಸರ್ಕಾರದ ಈ ಕ್ರಮವು ‘ಐಟಿ ಕ್ಷೇತ್ರದ ಸನ್ನದ್‌ ಕ್ಷಣ ಎಂದು ಆಂಧ್ರ ಅಧಿಕಾರಿಗಳು ಕೊಂಡಾಡಿದ್ದಾರೆ.

Share this article