ಭೋಪಾಲ: ಮಧ್ಯಪ್ರದೇಶದ 12ನೇ ಶತಮಾನದ ವಿವಾದಿತ ಭೋಜಶಾಲಾ ಕಟ್ಟಡ ಸಂಕೀರ್ಣದ ಕುರಿತಾದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್ಐ) ರಾಜ್ಯ ಹೈಕೋರ್ಟ್ಗೆ ಸೋಮವಾರ ಸಲ್ಲಿಕೆ ಮಾಡಿದೆ. 2000 ಪುಟಗಳ ಈ ವರದಿಯಲ್ಲಿ ವಿವಾದಿತ ಸ್ಥಳದಲ್ಲಿ ಶಿಕ್ಷಣ ಕೇಂದ್ರ ಮತ್ತು ದೇವಾಲಯವಿತ್ತು ಎಂಬುದಕ್ಕೆ ಸಾಕ್ಷ್ಯಗಳನ್ನು ನೀಡಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಈ ಕುರಿತು ಹಿಂದೂಗಳ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಭೋಜಶಾಲಾ ಸಂಕೀರ್ಣ ನಿಜಕ್ಕೂ ಏನಾಗಿತ್ತು ಎಂಬ ಬಗ್ಗೆ ಸಮೀಕ್ಷೆ ನಡೆಸಲು ಎಎಸ್ಐಗೆ ಸೂಚಿಸಿತ್ತು. ಅದು ಮೂರು ತಿಂಗಳ ಕಾಲ ಉತ್ಖನನ ನಡೆಸಿದ್ದು, ಈ ವೇಳೆ 94 ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಅವುಗಳಲ್ಲಿ ಭಗ್ನಗೊಂಡ ಗಣೇಶ, ಬ್ರಹ್ಮ, ನರಸಿಂಹ, ಭೈರವ ಮುಂತಾದ ದೇವರ ವಿಗ್ರಹಗಳಿವೆ. ಜೊತೆಗೆ 31 ನಾಣ್ಯಗಳು ಲಭಿಸಿವೆ. ಅವು ಮೊಘಲ್ ಸುಲ್ತಾನರು, ಬ್ರಿಟಿಷರೂ ಸೇರಿದಂತೆ ಬೇರೆ ಬೇರೆ ಕಾಲಕ್ಕೆ ಸೇರಿದ್ದಾಗಿವೆ. ಇವುಗಳಲ್ಲದೆ, ಸಂಸ್ಕೃತ ಮತ್ತು ಪ್ರಾಕೃತದ ಅನೇಕ ಕೆತ್ತನೆಗಳು ಲಭಿಸಿವೆ.
ಎಎಸ್ಐ ವರದಿಯಲ್ಲಿ, ಈ ಸ್ಥಳವು ಭೋಜರಾಜನು ಸ್ಥಾಪಿಸಿದ್ದ ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿತ್ತು. ಮೊಹಮ್ಮದ್ ಶಾ ಇಲ್ಲಿಯ ದೇಗುಲವನ್ನು ಮಸೀದಿಯಾಗಿ ಪರಿವರ್ತನೆ ಮಾಡಿದ್ದ ಎಂದು ತಿಳಿಸಲಾಗಿದೆ ಎಂದು ತಿಳಿದುಬಂದಿದೆ.ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಜು.22ಕ್ಕೆ ನಿಗದಿಪಡಿಸಿದೆ.
ಸಮೀಕ್ಷೆ ವಿರುದ್ಧ ಸುಪ್ರೀಂಗೆ ಅರ್ಜಿ
ನವದೆಹಲಿ: ಭೋಜಶಾಲಾ ಕಟ್ಟಡದ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೌಲಾನಾ ಕಮಾಲುದ್ದೀನ್ ಕಲ್ಯಾಣ ಸಂಸ್ಥೆ ಅರ್ಜಿ ಸಲ್ಲಿಸಿದೆ. ಇದನ್ನು ಪಟ್ಟಿ ಮಾಡುವುದಕ್ಕೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.