ರಾಮನ ಕಣ್ಣು ಕೆತ್ತಿದ್ದ ಉಳಿ, ಸುತ್ತಿಗೆಯ ಫೋಟೋ ಬಹಿರಂಗಪಡಿಸಿದ ಅರುಣ್ ಯೋಗಿರಾಜ್‌

KannadaprabhaNewsNetwork | Updated : Feb 11 2024, 07:52 AM IST

ಸಾರಾಂಶ

ಉಳಿ, ಸುತ್ತಿಗೆಯ ಫೋಟೋ ಬಹಿರಂಗಪಡಿಸಿದ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್‌ ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆಯಲ್ಲಿ ರಾಮನ ಶಿಲೆಯನ್ನು ಕೆತ್ತಿದ್ದಾರೆ.

ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಬಾಲಕ ರಾಮನ ಕಣ್ಣನ್ನು ಕೆತ್ತಲು ಬಳಸಿದ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯನ್ನು ಅರುಣ್‌ ಯೋಗಿರಾಜ್‌ ಶನಿವಾರ ಬಹಿರಂಗಪಡಿಸಿದ್ದಾರೆ.

ಟ್ವೀಟರ್‌ನಲ್ಲಿ ಅವರು ಉಳಿ ಹಾಗೂ ಸುತ್ತಿಗೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ‘ಬೆಳ್ಳಿಯ ಸುತ್ತಿಗೆ, ಚಿನ್ನದ ಉಳಿಯನ್ನು ಹಂಚಿಕೊಳ್ಳಲು ನಾನು ಇಚ್ಛಿಸಿದ್ದೇನೆ. 

ಇದರಲ್ಲಿ ನಾನು ರಾಮ ಲಲ್ಲಾನ ದೈವಿಕ ಕಣ್ಣುಗಳನ್ನು (ನೇತ್ರೋನ್ಮಿಲನ) ಕೆತ್ತಿದ್ದೇನೆ’ ಎಂದು ಬರೆದಿದ್ದಾರೆ.ರಾಮಮಂದಿರಕ್ಕೆ ರಾಮನನ್ನು ತರುವ ಮುನ್ನ ಬಹಿರಂಗವಾಗಿದ್ದ ಅರುಣ್‌ ಕೆತ್ತಿದ ರಾಮನ ವಿಗ್ರಹದ ಫೋಟೋಗಳಲ್ಲಿ, ರಾಮನ ಕಣ್ಣುಗಳು ಸಂಪೂರ್ಣವಾಗಿ ಮೂಡಿ ಬಂದಿರಲಿಲ್ಲ.

 ಆದರೆ ಪ್ರಾಣಪ್ರತಿಷ್ಠೆ ದಿನ ಬಹಿರಂಗವಾದ ಬಾಲಕ ರಾಮನ ಮುಖದಲ್ಲಿ ಕಣ್ಣುಗಳು ಸಂಪೂರ್ಣವಾಗಿ ಮೂಡಿಬಂದಿದ್ದವು ಹಾಗೂ ಇಡೀ ವಿಗ್ರಹಕ್ಕೆ ಆ ಆಕರ್ಷಕ ಕಣ್ಣುಗಳೇ ಕಳೆಗಟ್ಟುವಂತೆ ಮಾಡಿದ್ದವು.

ಈ ಹಿಂದಿನ ಮಾಧ್ಯಮ ಸಂದರ್ಶನಗಳಲ್ಲಿ ಅರುಣ್‌ ಯೋಗಿರಾಜ್‌ ಅವರು, ‘ಇಡೀ ವಿಗ್ರಹ ಕೆತ್ತಿದ್ದರೂ ಮುಖ ಹಾಗೂ ಕಣ್ಣು ಕೆತ್ತುವುದು ಸವಾಲಿನದಾಗಿತ್ತು’ ಎಂದಿದ್ದರು.

Share this article