ಜಾತಿ ಗಣತಿ ಬೇಡ ಎಂದ ಸಂಸದೆ ಕಂಗನಾ ರಾಣಾವತ್ - ಬಿಜೆಪಿ ನಿಲುವು ಬಯಲು : ಕಾಂಗ್ರೆಸ್‌ ಕಿಡಿ

KannadaprabhaNewsNetwork | Updated : Aug 31 2024, 04:44 AM IST

ಜಾತಿ ಗಣತಿ ಅಗತ್ಯವಿಲ್ಲ ಎಂದು ಬಿಜೆಪಿ ಸಂಸದೆ ಕಂಗನಾ ರಾಣಾವತ್ ಹೇಳಿಕೆ ನೀಡಿದ್ದು, ದೇಶದಲ್ಲಿ ಜಾತಿ ಗಣತಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷವು ಈ ಹೇಳಿಕೆಯನ್ನು ಖಂಡಿಸಿದ್ದು, ಜಾತಿ ಗಣತಿ ಬಗ್ಗೆ ಬಿಜೆಪಿಯ ನಿಲುವನ್ನು ಪ್ರಶ್ನಿಸಿದೆ.

ನವದೆಹಲಿ: ರೈತ ಪ್ರತಿಭಟನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಇತ್ತೀಚೆಗೆ ಪಕ್ಷದಿಂದ ಛೀಮಾರಿ ಹಾಕಿಕೊಂಡಿದ್ದ ಬಿಜೆಪಿ ಸಂಸದೆ, ನಟಿ ಕಂಗನಾ ರಾಣಾವತ್‌ ಮತ್ತೆ ಇನ್ನೊಂದು ಎಡವಟ್ಟು ಮಾಡಿದ್ದಾರೆ. ದೇಶವ್ಯಾಪಿ ಜಾತಿಗಣತಿಗೆ ಬೇಡಿಕೆ ಹೆಚ್ಚುತ್ತಿರುವ ನಡುವೆಯೇ ‘ಜಾತಿ ಗಣತಿ ಬೇಕಿಲ್ಲ’ ಎಂದು ಕಂಗನಾ ಹೇಳಿದ್ದಾರೆ. ಹೀಗಾಗಿ ‘ಜಾತಿ ಗಣತಿ ಬಗ್ಗೆ ಬಿಜೆಪಿಯ ನೈಜ ನಿಲುವು ಬಯಲಾಗಿದೆ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನನ್ನ ಸುತ್ತ ಇರುವ ಜನರು ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇರುವುದು ಮೂರೇ ಜಾತಿ: ಬಡವರು, ರೈತರು ಮತ್ತು ಮಹಿಳೆಯರು’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌, ‘ಬಿಜೆಪಿ ನಿಲುವು ಈಗ ಬಯಲಾಗಿದೆ. ಮೇಲ್ವರ್ಗದಿಂದ ಬಂದ ಸ್ಟಾರ್‌ ನಟಿ ಹಾಗೂ ಸಂಸದೆಯಾದ ನಿಮಗೆ ದಲಿತರು, ಹಿಂದುಳಿದವರು, ಬುಡಕಟ್ಟು ಹಾಗೂ ಬಡ ಸಾಮಾನ್ಯ ವರ್ಗದವರ ಪರಿಸ್ಥಿತಿ ಹೇಗೆ ಅರ್ಥವಾಗಬೇಕು?’ ಎಂದು ಪ್ರಶ್ನಿಸಿದ್ದು, ಈ ಬಗ್ಗೆ ಮೌನ ಮುರಿಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ.

ರಾಮನಾಥ ಕೋವಿಂದ್‌ರನ್ನು ‘ರಾಮ್ ಕೋವಿಡ್‌’ ಎಂದ ಕಂಗನಾ!

ನವದೆಹಲಿ: ರಾಮನಾಥ ಕೋವಿಂದ್‌ ಅವರನ್ನು ತಪ್ಪಾಗಿ ‘ರಾಮ್‌ ಕೋವಿಡ್‌’ ಎಂದು ಕರೆಯುವ ಮೂಲಕ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್ ನಗೆಪಾಟಲಿಗೆ ಈಡಾಗಿದ್ದಾರೆ. ಅಲ್ಲದೆ, ಅವರನ್ನು ತಪ್ಪಾಗಿ ‘ದೇಶದ ಮೊದಲ ದಲಿತ ರಾಷ್ಟ್ರಪತಿ’ ಎಂದೂ ಸಂಬೋಧಿಸಿದ್ದಾರೆ.

ಸಂದರ್ಶನವೊಂದರಲ್ಲಿ ಜಾತಿ ಗಣತಿಯ ಬಗ್ಗೆ ಮಾತನಾಡುತ್ತಿದ್ದ ಕಂಗನಾ ಹೀಗೆ ಹೇಳಿದ್ದಾರೆ. ಕೂಡಲೇ ಅವರನ್ನು ತಿದ್ದಿದ ನಿರೂಪಕ ಸೌರಭ್‌ ದ್ವಿವೇದಿ, ‘ರಾಮ್‌ನಾಥ್‌ ‘ಕೋವಿಂದ್‌’ ದೇಶದ ‘ಎರಡನೇ’ ದಲಿತ ರಾಷ್ಟ್ರಪತಿಯಾಗಿದ್ದರು. ಮೊದಲನೆಯವರು ಕೆ.ಆರ್‌. ನಾರಾಯಣನ್‌’ ಎಂದರು.ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ರಾಣಾವತ್‌ ಕ್ಷಮೆ ಯಾಚಿಸಿದರು. ಆದರೆ ಕಂಗನಾ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮೀಮ್‌ಗಳು ಹರಿದಾಡುತ್ತಿವೆ.

ತೆಲಂಗಾಣದಲ್ಲಿ ಕಂಗನಾರ ‘ಎಮರ್ಜೆನ್ಸಿ’ ಬ್ಯಾನ್‌ ಸಾಧ್ಯತೆ

ಹೈದರಾಬಾದ್‌: ನಟಿ ಕಂಗನಾ ರಾಣಾವತ್‌ ಅವರು ಇಂದಿರಾ ಗಾಂಧಿ ಆಗಿ ನಟಿಸಿರುವ ಎಮರ್ಜೆನ್ಸಿ ಚಿತ್ರದ ಬಿಡುಗಡೆಯನ್ನು ರದ್ದುಗೊಳಿಸುವ ಬಗ್ಗೆ ಚಿಂತಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಸಿಖ್‌ ಸಮುದಾಯಕ್ಕೆ ಭರವಸೆ ನೀಡಿರುವುದಾಗಿ ಸರ್ಕಾರದ ಸಲಹೆಗಾರ ಮೊಹೊಮ್ಮದ್ ಅಲಿ ಶಬ್ಬೀರ್‌ ಹೇಳಿದ್ದಾರೆ.

ತೆಲಂಗಾಣ ಸಿಖ್ ಸೊಸೈಟ ನಿಯೋಗ ಶಬ್ಬೀರ್‌ ಅವರನ್ನು ಭೇಟಿಯಾಗಿ ಎಮರ್ಜೆನ್ಸಿ ಚಿತ್ರದಲ್ಲಿ ಸಿಖ್‌ ಸಮುದಾಯವನ್ನು ಚಿತ್ರಿಸಿರುವ ರೀತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅದರ ಪ್ರದರ್ಶನವನ್ನು ಬ್ಯಾನ್‌ ಮಾಡುವಂತೆ ಕೋರಿದ್ದಾರೆ. ‘ಸಿನಿಮಾದಲ್ಲಿ ಸಿಖ್ಖರನ್ನು ಉಗ್ರರು ಹಾಗೂ ದೇಶ ವಿರೋಧಿಗಳೆಂದು ಬಿಂಬಿಸಿಲಾಗಿದ್ದು, ಇದರಿಂದ ಸಮುದಾಯದ ಹೆಸರಿಗೆ ಹಾನಿಯಾಗುತ್ತದೆ’ ಎಂದು ನಿಯೋಗ ತಿಳಿಸಿದೆ.

ಸರ್ಟಿಫಿಕೇಟ್‌ ಸಿಕ್ಕಿಲ್ಲ:

ಈ ನಡುವೆ, ಚಿತ್ರಕ್ಕೆ ಇನ್ನೂ ಯು-ಸರ್ಟಿಫಿಕೇಟ್‌ ಸಿಕ್ಕಿಲ್ಲ. ಸೆನ್ಸಾರ್ ಮಂಡಳಿ ಪರಿಶೀಲನೆಯಲ್ಲಿದೆ ಎಂದು ನಟಿ ಕಂಗನಾ ಹೇಳಿದ್ದಾರೆ.