ನವದೆಹಲಿ: ‘ಯುವಕರು ವರ್ಚುವಲ್ ಮಾಧ್ಯಮವನ್ನು ಬಳಸುವ ಬದಲು, ಭಾರತವನ್ನು ತಿಳಿದುಕೊಳ್ಳಲು, ಭಾರತದೊಂದಿಗೆ ಸಂಪರ್ಕ ಸಾಧಿಸಲು, ಗಡಿ ಗ್ರಾಮಗಳಿಗೆ ಭೇಟಿ ನೀಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಯುವಜನರು ಗಡಿ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯ ಸಮುದಾಯಗಳೊಂದಿಗೆ ವಾಸಿಸುವ ಕುರಿತಾದ ವಿಕಸಿತ್ ವೈಬ್ರಂಟ್ ವಿಲೇಜ್ (ವಿವಿವಿ) ಕಾರ್ಯಕ್ರಮದಲ್ಲಿ ವರ್ಚುವಲ್ ವಿಧಾನದಲ್ಲಿ ಮಾತನಾಡಿದ ಮೋದಿ, ‘ಈ ಕಾರ್ಯಕ್ರಮವು ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ 74 ''ಚೈತನ್ಯಶೀಲ ಹಳ್ಳಿಗಳನ್ನು'' ಒಳಗೊಂಡಿದೆ. ಯುವಕರು ಗಡಿಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಒದಗಿಸುತ್ತದೆ’ ಎಂದರು.

ಈ ಕಾರ್ಯಕ್ರಮದಲ್ಲಿ ಜೆನ್‌ ಝೀ ಯುವಕರೇ ಹೆಚ್ಚಿದ್ದು ವಿಶೇಷವಾಗಿತ್ತು.


ಈ ಸಲವೂ ಹರ್‌ಘರ್‌ ತಿರಂಗಾ: ಮೋದಿ ಕರೆ

ನವದೆಹಲಿ: ಪ್ರತಿವರ್ಷದಂತೆ ಆ.15ರ ಸ್ವಾತಂತ್ರ್ಯ ದಿನದಂದು ಈ ಬಾರಿಯೂ ಹರ್‌ ಘರ್ ತಿರಂಗಾ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಆಕಾಶವಾಣಿಯಲ್ಲಿ ಪ್ರಸಾರ ಆಗುವ ಮಾಸಿಕ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ ಅವರು, ‘ಕಳೆದ ಕೆಲವು ವರ್ಷಗಳಲ್ಲಿ ಮನೆ ಮನೆಯಲ್ಲೂ ಕೈಗೊಂಡ ಹರ್ ಘರ್ ತಿರಂಗಾ – ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನವು ಇಡೀ ದೇಶವನ್ನು ಒಂದು ಅದ್ಭುತ ಅನುಭೂತಿಯಲ್ಲಿ ಒಗ್ಗೂಡಿಸಿದೆ. ಪ್ರತಿ ಮನೆ, ಪ್ರತಿ ಗಲ್ಲಿಯಲ್ಲಿ ತ್ರಿವರ್ಣ ಧ್ವಜದ ಹಬ್ಬ ಗೋಚರಿಸುತ್ತದೆ. ಈ ವರ್ಷವೂ ನಾವು ಹರ್ ಘರ್ ತಿರಂಗಾ (ಮನೆ ಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನವನ್ನು ಸಂಪೂರ್ಣ ಉತ್ಸಾಹ, ಉಲ್ಲಾಸದಿಂದ ಮುಂದುವರಿಸಬೇಕು. ನಮ್ಮ ಮನೆಗಳಲ್ಲಿ ಸಂಪೂರ್ಣ ಗೌರವದೊಂದಿಗೆ ತ್ರಿವರ್ಣ ಧ್ವಜ ಹಾರಿಸಬೇಕು’ ಎಂದು ಮನವಿ ಮಾಡಿದರು.

ಭಾಷಣಕ್ಕೆ ಸಲಹೆ ನೀಡಿ:

‘ಪ್ರತಿ ವರ್ಷ ಆ.15ಕ್ಕೆ ಮೊದಲು ನೀವು ನನಗೆ ಬಹಳಷ್ಟು ವಿಚಾರಗಳನ್ನು ಮತ್ತು ಸಲಹೆಗಳನ್ನು ಕಳುಹಿಸುತ್ತೀರಿ. ಈ ವರ್ಷ ಕೂಡಾ ನೀವು ನಿಮ್ಮ ಚಿಂತನೆಗಳನ್ನು ಮೈ ಗೌ (My gov)ವೇದಿಕೆಯಲ್ಲಿ ಹಂಚಿಕೊಳ್ಳಿ’ ಎಂದು ಕೋರಿದರು.