ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಸಿಎಂ ರೇಖಾ ಗುಪ್ತಾ ಮಾತ್ರವಲ್ಲ, ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಕರ್ನಾಟಕ ಕೇಡರ್‌ ಐಪಿಎಸ್‌ ಅಧಿಕಾರಿ ಆದ ಸಿಬಿಐ ನಿರ್ದೇಶಕ ಪ್ರವೀಣ್‌ ಸೂದ್‌ ಹಾಗೂ ಸ್ವತಃ ಎಲೆಕ್ಷನ್‌ ಕಮಿಷನರ್‌ ಆಗಿರುವ ಎಸ್‌.ಎಸ್‌.ಸಂಧು ಅವರ ಹೆಸರುಗಳೂ ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ವೇಳೆ ನೋಟಿಸ್‌ ನೀಡಲಾದ ವ್ಯಕ್ತಿಗಳ ಪಟ್ಟಿಯಲ್ಲಿದೆ!

ದೆಹಲಿಯಲ್ಲಿ ಮುಂದುವರೆದ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ

ವಿವಿಧ ದಾಖಲೆಗಳಲ್ಲಿ ಗೊಂದಲ ಹಿನ್ನೆಲೆ ಹಲವರಿಗೆ ನೋಟಿಸ್‌ ಜಾರಿ

ಚುನಾವಣಾ ಆಯಕ್ತ ಎಸ್‌.ಎಸ್‌.ಸಂಧು, ಎಲ್‌.ಕೆ. ಅಡ್ವಾಣಿ, ದ್ವಿವೇದಿ

ಗಣ್ಯಾತಿಗಣ್ಯರಿಗೆ ನೋಟಿಸ್‌ ಬಗ್ಗೆ ಭಾರೀ ಚರ್ಚೆಗೆ ಆಯೋಗ ಸ್ಪಷ್ಟನೆ

ಇದು ಸಾಮಾನ್ಯ ಪ್ರಕ್ರಿಯೆ. ಗೊಂದಲ ಹಿನ್ನೆಲೆಯಲ್ಲಿ ನೋಟಿಸ್‌ ಜಾರಿ

ಅಗತ್ಯ ದಾಖಲೆಗಳನ್ನು ನೀಡಿ ಎಲ್ಲರೂ ಹೆಸರು ಸೇರಿಸಿಕೊಳ್ಳಬಹುದು

ದೆಹಲಿಯಲ್ಲಿ ಒಟ್ಟು 33 ಲಕ್ಷ ಜನರಿಗೆ ಆಯೋಗದಿಂದ ನೋಟಿಸ್‌ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಸಿಎಂ ರೇಖಾ ಗುಪ್ತಾ ಮಾತ್ರವಲ್ಲ, ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಕರ್ನಾಟಕ ಕೇಡರ್‌ ಐಪಿಎಸ್‌ ಅಧಿಕಾರಿ ಆದ ಸಿಬಿಐ ನಿರ್ದೇಶಕ ಪ್ರವೀಣ್‌ ಸೂದ್‌ ಹಾಗೂ ಸ್ವತಃ ಎಲೆಕ್ಷನ್‌ ಕಮಿಷನರ್‌ ಆಗಿರುವ ಎಸ್‌.ಎಸ್‌.ಸಂಧು ಅವರ ಹೆಸರುಗಳೂ ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ವೇಳೆ ನೋಟಿಸ್‌ ನೀಡಲಾದ ವ್ಯಕ್ತಿಗಳ ಪಟ್ಟಿಯಲ್ಲಿದೆ!

ಇವರ ಜತೆಗೆ ಕಾಂಗ್ರೆಸ್‌ ಹಿರಿಯ ಮುಖಂಡರಾದ ಕಪಿಲ್‌ ಸಿಬಲ್‌, ಅಭಿಷೇಕ್‌ ಮನು ಸಿಂಘ್ವಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ, ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಮತ್ತು ಅವರ ಕುಟುಂಬ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅವರ ಪತ್ನಿ, ಮತ್ತು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶೆ ರಂಜನಾ ದೇಸಾಯಿ ಮತ್ತು ಅವರ ಕುಟುಂಬದ ಸದಸ್ಯರಿಗೂ ಚುನಾವಣಾ ಆಯೋಗ ನೋಟಿಸ್‌ ನೀಡಿದೆ.

ಹಿಂದಿನ ಪರಿಷ್ಕರಣೆ ಸಮಯದಲ್ಲಿ ಸಿದ್ಧಪಡಿಸಲಾದ ಮತದಾರರ ಪಟ್ಟಿಗೆ ಅವರ ದಾಖಲೆಗಳನ್ನು ಲಿಂಕ್ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ಅವರ ಹೆಸರುಗಳು ಮತ್ತು ಕುಟುಂಬದ ವಿವರಗಳಲ್ಲಿ ವ್ಯತ್ಯಾಸಗಳಿವೆ. ಹೀಗಾಗಿ ನೋಟಿಸ್‌ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಸಂಧು ಅವರಿಗೆ ಚುನಾವಣಾ ದಾಖಲೆಗಳಲ್ಲಿ ಹೆಸರು ತಾಳೆಯಾಗದ ಕಾರಣ ನೋಟಿಸ್‌ ನೀಡಲಾಗಿದೆ. ಕಪಿಲ್‌ ಸಿಬಲ್‌ ಹಾಗೂ ಮಿಸ್ರಿ ಅವರ ಹೆಸರು ಹಿಂದಿನ ಎಸ್‌ಐಆರ್‌ ಸಮಯದ ದಾಖಲೆಗಳ ಜತೆಗೆ ಮ್ಯಾಪ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ನೋಟಿಸ್‌ ನೀಡಲಾಗಿದೆ.

ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರು, ಅಡ್ವಾಣಿ ಅವರ ಪುತ್ರಿ ಪ್ರತಿಭಾ ಅಡ್ವಾಣಿ, ಮೊಮ್ಮಗಳು ಗೀತಿಕಾ ಅವರಿಗೂ ಇದೇ ರೀತಿ ನೋಟಿಸ್‌ ನೀಡಲಾಗಿದೆ.

ಆಯೋಗ ಸ್ಪಷ್ಟನೆ:

ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದು, ‘ನೋಟಿಸ್ ಸ್ವೀಕರಿಸಿದ ಮಾತ್ರಕ್ಕೆ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಲಾಗುವುದಿಲ್ಲ ಎಂದರ್ಥವಲ್ಲ. ಎಸ್‌ಐಆರ್‌ ಪ್ರಕ್ರಿಯೆ ವೇಳೆ ಈ ರೀತಿಯ ನೋಟಿಸ್‌ ಸಾಮಾನ್ಯವಾಗಿದ್ದು, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನೋಟಿಸ್‌ ನೀಡಲಾದ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆ ಮಾಡಲಾಗುತ್ತದೆ’ ಎಂದಿದ್ದಾರೆ.

ಈಗಾಗಲೇ ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಮತ್ತು ಅವರ ಕುಟುಂಬ ಸದಸ್ಯರು, ಮುಖ್ಯಮಂತ್ರಿ ರೇಖಾಗುಪ್ತ ಮತ್ತಿತರರಿಗೂ ಇದೇ ರೀತಿ ನೋಟಿಸ್‌ ನೀಡಲಾಗಿದೆ. ಒಟ್ಟಾರೆ ದೆಹಲಿಯಲ್ಲಿ 33 ಲಕ್ಷಕ್ಕೂ ಹೆಚ್ಚು ಮಂದಿಗೆ ಚುನಾವಣಾ ಆಯೋಗವು ದಾಖಲೆ ಕೋರಿ ನೋಟಿಸ್‌ ಜಾರಿ ಮಾಡಿದೆ.