ಗ್ವಾಲಿಯರ್: ಮಧ್ಯಪ್ರದೇಶದ ಧಾರ್ ಪ್ರದೇಶದಲ್ಲಿರುವ ವಿವಾದಿತ ಭೋಜಶಾಲಾ ಮಸೀದಿ ಮೂಲತಃ ಸರಸ್ವತಿ ದೇಗುಲವಾಗಿತ್ತು ಎಂದು ಖ್ಯಾತ ಇತಿಹಾಸತಜ್ಞ ಕೆ.ಕೆ. ಮೊಹಮ್ಮದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ ವಿವಾದ ನ್ಯಾಯಾಲಯದಲ್ಲಿದ್ದು, ಅದು ಕೊಡುವ ಆದೇಶಕ್ಕೆ ಇಬ್ಬರೂ ಬದ್ಧರಾಗಿರಬೇಕು ಎಂದು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭೋಜಶಾಲಾದಲ್ಲಿ ಮೊದಲು ಸರಸ್ವತಿ ದೇಗುಲ ನಿರ್ಮಿಸಲಾಗಿತ್ತು. ಬಳಿಕ ಅದನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು.
ಆದರೆ ಪ್ರಸ್ತುತ ಪೂಜಾ ಸ್ಥಳಗಳ ಕಾಯ್ದೆ-1991ರ ಪ್ರಕಾರ 1947ನೇ ಇಸವಿಯನ್ನು ಮಾನದಂಡವಾಗಿ ಇಟ್ಟುಕೊಂಡರೆ ಅದು ಮಸೀದಿಯಾಗಿ ಪರಿವರ್ತನೆ ಆಗಿಹೋಗಿದೆ.
ಈ ವಿವಾದ ನ್ಯಾಯಾಲಯದಲ್ಲಿರುವ ಕಾರಣ ಅಲಹಾಬಾದ್ ನ್ಯಾಯಪೀಠ ಕೊಡುವ ತೀರ್ಪಿಗೆ ಹಿಂದೂ ಮತ್ತು ಮುಸ್ಲಿಂ ಕಕ್ಷಿದಾರರು ಬದ್ಧರಾಗಿ ಶಾಂತಿ ಸೌಹಾರ್ದತೆಯಿಂದ ಮುನ್ನಡೆಯಬೇಕು’ ಎಂದರು.
ಮಸೀದಿ ಬದಲಿಸಬಹುದು, ಮಂದಿರವನ್ನಲ್ಲ: ಇದೇ ವೇಳೆ ಕಾಶಿ-ಮಥುರಾದಲ್ಲಿ ನಡೆಯುತ್ತಿರುವ ಮಂದಿರ-ಮಸೀದಿ ವಿವಾದಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಾ, ‘ಕಾಶಿ, ಮಥುರಾದಲ್ಲಿ ಹಿಂದೂಗಳ ದೇವಾಲಯವಿದೆ.
ಅದರ ಜೊತೆಗೆ ಆ ಸಮುದಾಯಕ್ಕೆ ಭಾವನಾತ್ಮಕ ಸಂಬಂಧವಿದೆ. ಆದರೆ ಅಲ್ಲಿ ಇರುವ ಮಸೀದಿಗಳು ಮೂಲತಃ ಪ್ರವಾದಿ ಮೊಹಮ್ಮದ್ ಅಥವಾ ಔಲಿಯಾ ಅವರಿಗೆ ಸಂಬಂಧಿಸಿಲ್ಲ.
ಈ ಹಿನ್ನೆಲೆಯಲ್ಲಿ ಅಲ್ಲಿ ಮಸೀದಿಯನ್ನು ಬದಲಿಸಬಹುದು. ಆದರೆ ಮಂದಿರವನ್ನು ಬದಲಿಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿನ ವಿಗ್ರಹಗಳು ಬಹಳ ಹಿಂದೆ ಪ್ರತಿಷ್ಠಾಪನೆಯಾಗಿವೆ’ ಎಂದು ತಿಳಿಸಿದರು.
ಕೆಕೆ ಮೊಹಮ್ಮದ್ ಅವರು ಅಯೋಧ್ಯೆ ರಾಮಮಂದಿರವನ್ನು ಸಮೀಕ್ಷೆ ಮಾಡಬೇಕೆಂದು ಮೊದಲ ಬಾರಿಗೆ 1976-77ರಲ್ಲಿ ನೇಮಿಸಿದ್ದ ಪ್ರೊ. ಬಿಬಿ ಲಾಲ್ ನೇತೃತ್ವದ ಸಮಿತಿಯ ಸದಸ್ಯರಾಗಿದ್ದರು.