ರಾಹುಲ್‌ ‘ಫಿಕ್ಸಿಂಗ್‌’ ಆರೋಪಕ್ಕೆ ಬಿಜೆಪಿ ಆಕ್ರೋಶ

KannadaprabhaNewsNetwork | Updated : Jun 08 2025, 04:18 AM IST
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮ್ಯಾಚ್‌ಫಿಕ್ಸಿಂಗ್‌ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಗಳನ್ನು ಬಿಜೆಪಿ ಅಲ್ಲಗಳೆದಿದೆ. ‘ರಾಹುಲ್‌ ಆರೋಪ ಮಹಾರಾಷ್ಟ್ರ ಜನರಿಗೆ ಮಾಡಿದ ಅವಮಾನ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಕಿಡಿಕಾರಿದ್ದಾರೆ.

 ನವದೆಹಲಿ/ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮ್ಯಾಚ್‌ಫಿಕ್ಸಿಂಗ್‌ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಗಳನ್ನು ಬಿಜೆಪಿ ಅಲ್ಲಗಳೆದಿದೆ. ‘ರಾಹುಲ್‌ ಆರೋಪ ಮಹಾರಾಷ್ಟ್ರ ಜನರಿಗೆ ಮಾಡಿದ ಅವಮಾನ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಕಿಡಿಕಾರಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಪ್ರತಿಕ್ರಿಯಿಸಿ, ‘ರಾಹುಲ್‌ ಗಾಂಧಿ ಚುನಾವಣಾ ಪ್ರಕ್ರಿಯೆ ಮೇಲಿನ ಜನರ ನಂಬಿಕೆಯನ್ನು ಹಾಳು ಮಾಡಲು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ಸಾರ್ವಜನಿಕರ ಬೆಂಬಲ ಗಳಿಸಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ಬಿಹಾರ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲುವುದು ಅವರಿಗೆ ಖಚಿತವಾಗಿದೆ. ಅದನ್ನು ತಡೆಯಲು ಈ ತಂತ್ರ ಅನುಸರಿಸುತ್ತಿದ್ದಾರೆ’ ಎಂದಿದ್ದಾರೆ.

‘ಕರ್ನಾಟಕ, ತೆಲಂಗಾಣಗಳಂತಹ ರಾಜ್ಯಗಳಲ್ಲಿ ಅವರು ಗೆದ್ದಾಗ ಎಲ್ಲಾ ಸರಿಯಿರುತ್ತದೆ. ಆವರು ಸೋತಾಗ ಮಾತ್ರ ಕುತಂತ್ರದ ಆರೋಪ ಮಾಡುತ್ತಾರೆ’ ಎಂದೂ ಭಂಡಾರಿ ಆರೋಪಿಸಿದ್ದಾರೆ.

ಸೋನಿಯಾ ಗಾಂಧಿಗೆ ಹೈ ಬೀಪಿ: ಆಸ್ಪತ್ರೆಗೆ ದಾಖಲು

ಶಿಮ್ಲಾಪುತ್ರಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಶಿಮ್ಲಾದಲ್ಲಿರುವ ಮನೆಗೆ ಬಂದಿದ್ದ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಶನಿವಾರ ಹೈ ಬೀಪಿ ಕಾರಣ ದಿಢೀರ್ ಅಸ್ವಸ್ಥರಾಗಿದ್ದು, ಅವರನ್ನು ಕೂಡಲೇ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರಗೆ (ಜಿಎಂಸಿ) ದಾಖಲಿಸಲಾಗಿದೆ.

ಅವರನ್ನು ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಕ್ಸರೆ ಮಾದರಿಯ) ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ‘ಅಧಿಕ ರಕ್ತದೊತ್ತಡದ ಕಾರಣ ಅವರನ್ನು ದಾಖಲಿಸಲಾಗಿತ್ತು. ನಿಯಮಿತ ತಪಾಸಣೆಯನ್ನು ನಡೆಸಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ನರೇಶ್ ಚೌಹಾಣ್ ಹೇಳಿದ್ದಾರೆ.

ಇದೇ ವರ್ಷದ ಫೆಬ್ರವರಿಯಲ್ಲಿಯೂ ಸೋನಿಯಾ ಅವರನ್ನು ದೆಹಲಿಯ ಗಂಗಾರಾಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಾವುದೇ ದೊಡ್ಡ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದರು.

ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್‌ ಸಿಂಗ್‌ ಸುಖು ಆಸ್ಪತ್ರೆಗೆ ಆಗಮಿಸಿ ಸೋನಿಯಾ ಅವರ ಆರೋಗ್ಯ ವಿಚಾರಿಸಿದ್ದಾರೆ.

ರಾಹುಲ್‌ಗಾಗಿ ನಿರ್ಮಿಸಿದ್ದ ವಿಐಪಿ ಟಾಯ್ಲೆಟ್‌ ಅವರು ಹೋದ ನಂತರ ಧ್ವಂಸ!

ಪಟನಾ: ಬಿಹಾರದ ಗಯಾಗೆ ಶುಕ್ರವಾರ ಭೇಟಿ ನೀಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಜಿಲ್ಲಾಡಳಿತವು ವಿಶೇಷ ವಿಐಪಿ ಟಾಯ್ಲೆಟ್‌ ನಿರ್ಮಿಸಿತ್ತು. ಆದರೆ ಅವರು ಬಂದು ಹೋದ ನಂತರ ಅದನ್ನು ಧ್ವಂಸಗೊಳಿಸಿದೆ.ಗಾಂಧಿ ಗಯಾದ ಪರ್ವತ ಮನುಷ್ಯ ಎಂದೇ ಜನಪ್ರಿಯರಾಗಿರುವ ದಶರಥ್ ಮಾಂಝಿ ಅವರ ಮನೆಗೆ ಭೇಟಿ ನೀಡಿದ್ದರು. ಆದರೆ ಮಾಂಝಿ ಮನೆಯಲ್ಲಿ ಶೌಚಾಲಯ ಇರಲಿಲ್ಲ. ಏಕೆಂದರೆ ಕೆಲವು ವರ್ಷ ಹಿಂದೆ ಹೆದ್ದಾರಿ ಅಗಲೀಕರಣಕ್ಕಾಗಿ ತೆರವು ಮಾಡಲಾಗಿತ್ತು. ಹೀಗಾಗಿ ರಾಹುಲ್‌ ಆಗಮನದ ಹಿನ್ನೆಲೆಯಲ್ಲಿ ವಿಶೇಷ ಶೌಚಾಲಯ ನಿರ್ಮಿಸಲಾಗಿತ್ತು.

ಆದರೆ, ರಾಹುಲ್ ಗಾಂಧಿ ಅಲ್ಲಿಂದ ಹೋದ ತಕ್ಷಣ, ಇಡೀ ಸ್ನಾನಗೃಹವನ್ನು ಕೆಡವಲಾಯಿತು. ಈ ಬಗ್ಗೆ ದೂರಿರುವ ದಶರಥ್ ಮಾಂಝಿ ಅವರ ಕುಟುಂಬ,,ಸರ್ಕಾರದಿಂದ ಒದಗಿಸಲಾದ ಯಾವುದೇ ಶೌಚಾಲಯ ಹೊಂದಿಲ್ಲ ಎಂದು ಕಿಡಿಕಾರಿದೆ.

Read more Articles on