ಹೊಸ ಹೆಜ್ಜೆ ಏಕೆ?
ಈ ಸ್ಥಾನ ಯಶಸ್ವಿಯಾಗಿ ತುಂಬುವ ಇರಾದೆ ಅಣ್ಣಾಮಲೈಗೆ
ಈ ಕಾರಣಕ್ಕೆ ಬಿಜೆಪಿಗೆ ಗೌರವಯುತ ವಿದಾಯದ ನಿರೀಕ್ಷೆಬಳಿಕ ರಾಜಕೀಯೇತರ ಸಂಘಟನೆ ಸ್ಥಾಪಿಸಿ ರಾಜ್ಯಪ್ರವಾಸ
ಎಲ್ಲಾ ಕುತೂಹಲಕ್ಕೆ 2 ದಿನದಲ್ಲಿ ಉತ್ತರ: ಅಣ್ಣಾಮಲೈ ಹೇಳಿಕೆಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿಯ ನಡುವೆಯೇ, ಸೋಮವಾರ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಜತೆ ಸಭೆ ನಡೆಸಿ, ಆ ಬಳಿಕ ರಾಜೀನಾಮೆ ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ದೆಹಲಿಗೆ ತೆರಳುವ ಮುನ್ನ ಚೆನ್ನೈ ಏರ್ಪೋರ್ಟ್ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇನ್ನು 2 ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ’ ಎಂದಿದ್ದಾರೆ. ದೆಹಲಿಯಲ್ಲಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನೂ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಣ್ಣಾಮಲೈ ಬಿಜೆಪಿಯಿಂದ ಗೌರವಯುತವಾಗಿ ಮತ್ತು ಎಲ್ಲರಿಗೂ ಒಪ್ಪಿಗೆಯಾಗುವಂತೆ ನಿರ್ಗಮಿಸಲು ಬಯಸುತ್ತಿದ್ದಾರೆ. ಬಿಜೆಪಿ ನಾಯಕರೊಂದಿಗೆ ಮುಕ್ತ ಚರ್ಚೆ ಅಪೇಕ್ಷಿಸುತ್ತಿರುವ ಅವರು, ಪಕ್ಷವನ್ನು ವಿರೋಧಿಸುವ ಯಾವುದೇ ಯೋಚನೆ ಹೊಂದಿಲ್ಲ ಎನ್ನಲಾಗಿದೆ.
ತಮಿಳುನಾಡಿನಲ್ಲಿ ಸಿಎಂ ವಿಜಯ್ಗೆ ಶಕ್ತಿಶಾಲಿ ರಾಜಕೀಯ ಎದುರಾಳಿ ಇಲ್ಲ. ಆ ಜಾಗವನ್ನು ತುಂಬಲು ಅಣ್ಣಾಮಲೈ ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಮೊದಲು ಒಂದು ರಾಜಕೀಯೇತರ ಚಳವಳಿಯನ್ನು ಆರಂಭಿಸಲಿದ್ದಾರೆ. ‘ರಾಷ್ಟ್ರೀಯ-ತಮಿಳು ತತ್ವಜ್ಞಾನ’ ಅದರ ಮುಖ್ಯ ಸಿದ್ಧಾಂತವಾಗಿರಲಿದೆ ಎನ್ನಲಾಗಿದೆ.
ಅಣ್ಣಾಡಿಎಂಕೆ ಜತೆ ಮೈತ್ರಿಯನ್ನು ಅವರು ವಿರೋಧಿಸಿದ್ದರು. ಅಣ್ಣಾಮಲೈ ವಿದೇಶದಲ್ಲಿದ್ದಾಗಲೇ ಕೊಯಮತ್ತೂರಿನಲ್ಲಿ ಬಿಜೆಪಿ ಕೇಂದ್ರ ಸಮಿತಿ ಸಭೆ ನಡೆಸಲಾಯಿತು. ಅಲ್ಲದೆ, ಈ ಹಿಂದೆ 2 ಕೇಂದ್ರ ಸಮಿತಿ ಸಭೆಗಳಿಗೆ ಅವರು ಹಾಜರಾಗಿರಲಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರದ ಸಿಬಿಎಸ್ಇ ತ್ರಿಭಾಷಾ ಸೂತ್ರವನ್ನು ಅವರು ವಿರೋಧಿಸಿದ್ದರು. ಆಗಿಂದಲೇ ಅವರು ಪಕ್ಷ ತೊರೆಯುವ ಗುಸುಗುಸು ಆರಂಭವಾಗಿತ್ತು.
ಈ ನಡುವೆ, ಕೊಯಮತ್ತೂರಿನಲ್ಲಿ ಅಣ್ಣಾಮಲೈ ಫೋಟೊ ಇರುವ ಪೋಸ್ಟರ್ಗಳು ಕಾಣಿಸಿಕೊಂಡಿವೆ. ಅವುಗಳ ಮೇಲೆ ‘ಭಯವಿಲ್ಲದ ಮನಸ್ಸುಗಳಿಗೆ ಮಿತಿಯಿಲ್ಲ’ ಎಂಬ ಬರಹವನ್ನು ಬರೆಯಲಾಗಿದೆ. ಇದರಿಂದ ಅಣ್ಣಾಮಲೈ ಹೊಸ ರಾಜಕೀಯ ಪಕ್ಷವನ್ನು ಆರಂಭಿಸುತ್ತಾರಾ ಎಂಬ ಊಹಾಪೋಹಗಳು ಹೆಚ್ಚಾಗಿವೆ. ಇತ್ತ ಅವರ ಅಭಿಮಾನಿ ಸಂಘಟನೆ ‘ಅಣ್ಣಾಮಲೈ ಅನ್ಬು ಕೂಟ್ಟಂ’ಗೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಗುತ್ತಿದೆ ಎಂದು ಅವರ ಅಭಿಮಾನಿಗಳು ತಿಳಿಸಿದ್ದಾರೆ.